ಹಸಿದ ಹೊಟ್ಟೆ ತಣಿಸುವ 4 ಇಂದಿರಾ ಕ್ಯಾಂಟೀನ್ ಉದ್ಘಾಟನೆ
ಧಾರವಾಡ, ನವೆಂಬರ್ 18 : ಧಾರವಾಡ ಜಿಲ್ಲೆಗೆ 12 ಇಂದಿರಾ ಕ್ಯಾಂಟೀನ್ಗಳು ಮಂಜೂರಾಗಿದೆ. ಧಾರವಾಡದಲ್ಲಿ ಎರಡು ಹಾಗೂ ಹುಬ್ಬಳ್ಳಿಯಲ್ಲಿ 4 ಕ್ಯಾಂಟೀನ್ಗಳನ್ನು ಉದ್ಘಾಟನೆ ಮಾಡಲಾಗಿದೆ.
ಹುಬ್ಬಳ್ಳಿಯ ಉಣಕಲ್ ಕೆರೆ ಉದ್ಯಾನವನ, ಕಿಮ್ಸ್, ಹೊಸಬಸ್ ನಿಲ್ದಾಣ ಹಾಗೂ ಬೆಂಗೇರಿ ಸಂತೆ ಮೈದಾನಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕ್ಯಾಂಟೀನ್ಗಳನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, 'ರೈತರು, ಬಡವರ ಪಾಲಿನ ತಾಯಿಯಂತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸ್ಮರಣಾರ್ಥ ರಾಜ್ಯದಲ್ಲಿ ಮುಖ್ಯವಾಗಿ ಪಟ್ಟಣ ಪ್ರದೇಶದಲ್ಲಿ ರಾಜ್ಯದ ಎಲ್ಲಾ ಕಡೆ ಕ್ಯಾಂಟೀನ್ ಪ್ರಾರಂಭವಾಗಿವೆ' ಎಂದರು.

ರಾಜ್ಯದಲ್ಲಿ ಅಡುಗೆ ಕೋಣೆ ಸಹಿತವಾಗಿ 171 ಮತ್ತು ಕೇವಲ ಕ್ಯಾಂಟೀನ್ಗಳು 248 ಕಡೆ ಇವೆ. ಧಾರವಾಡ ಜಿಲ್ಲೆಯಲ್ಲಿ 12 ಇಂದಿರಾ ಕ್ಯಾಂಟೀನ್ಗಳಿವೆ. ಧಾರವಾಡದಲ್ಲಿ 2 ಹಾಗೂ ಹುಬ್ಬಳ್ಳಿಯಲ್ಲಿ 4 ಕ್ಯಾಂಟೀನ್ಗಳನ್ನು ಉದ್ಘಾಟಿಸಲಾಗಿದೆ.
ಬಡವರು, ಕಾರ್ಮಿಕರಿಗೆ, ಕೂಲಿಕಾರರಿಗೆ ಮುಂಜಾನೆ 5 ರೂ. ದರದಲ್ಲಿ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ 10 ರೂ.ಗೆ ಊಟ ದೊರೆಯಲಿದೆ. ಒಟ್ಟು 15 ರೂ.ಗಳಲ್ಲಿ ಒಬ್ಬ ವ್ಯಕ್ತಿ ದಿನದ ಮೂರು ಹೊತ್ತು ಆಹಾರ ಪಡೆಯಬಹುದಾಗಿದೆ.
ಒಟ್ಟು ಒಬ್ಬ ವ್ಯಕ್ತಿಗೆ ಆಹಾರ ತಯಾರು ಮಾಡಲು 57 ರೂ. ಸಖರ್ಚಾಗುತ್ತದೆ. ಸರ್ಕಾರ 32 ರೂ. ಸಬ್ಸಿಡಿ ನೀಡುತ್ತದೆ. ಪುರಸಭೆ,ನಗರಸಭೆ ವ್ಯಾಪ್ತಿಯ ಕ್ಯಾಂಟೀನ್ ಗಳ ಪೂರ್ಣ ಸಬ್ಸಿಡಿ ಸರಕಾರ ಭರಿಸಲಿದೆ. ಮಹಾನಗರಪಾಲಿಕೆ ವ್ಯಾಪ್ತಿಯ ಕ್ಯಾಂಟೀನ್ ಗಳ ಸಬ್ಸಿಡಿಯ ಶೇ.70 ರಷ್ಟು ಹಣ ಆ ಸಂಸ್ಥೆಗಳು ಭರಿಸಬೇಕು.
ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, 'ಮಹಾನಗರಪಾಲಿಕೆಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗಳ ಸಬ್ಸಿಡಿಯನ್ನೂ ಸಹ ಸಂಪೂರ್ಣವಾಗಿ ಸರಕಾರವೇ ಭರಿಸಬೇಕು. ಪಿಂಚಣಿಯ ಬಾಕಿ ವೇತನದ ಮೊತ್ತ ಸರಕಾರ ಒದಗಿಸಬೇಕು' ಎಂದು ಒತ್ತಾಯಿಸಿದರು.












Click it and Unblock the Notifications