ಕೆಜಿಎಫ್ 2 ಸಿನಿಮಾ ವೇಳೆ ಥಿಯೇಟರ್ನಲ್ಲೇ ಶೂಟೌಟ್: ಯುವಕನಿಗೆ ಗುಂಡೇಟು
ಹಾವೇರಿ, ಏಪ್ರಿಲ್ 20: ಕೆಜಿಎಫ್ 2 ಸಿನಿಮಾ ವೀಕ್ಷಣೆ ವೇಳೆಯೇ ಶೂಟೌಟ್ ನಡೆದು ಯುವಕನೋರ್ವನಿಗೆ ಗಾಯವಾಗಿರುವ ಘಟನೆಯು ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ 10.30ಗೆ ನಡೆದಿದೆ.
ಗಾಯಗೊಂಡ ಯುವಕನನ್ನು ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ (28) ಎಂದು ಗುರುತಿಸಲಾಗಿದೆ. ಯುವಕನಿಗೆ ಗಂಭೀರವಾಗಿ ಗಾಯವಾಗಿದ್ದು ಆ ಕೂಡಲೇ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನು ಇಬ್ಬರ ನಡುವೆ ಸಿನಿಮಾ ಮಂದಿರದಲ್ಲೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಅದು ಬಳಿಕ ಪಿಸ್ತೂಲು ಬಳಕೆವರೆಗೂ ತಲುಪಿದೆ ಎಂದು ತಿಳಿದು ಬಂದಿದೆ. ಗುಂಡು ಹಾರಿಸಿದ ಆರೋಪಿ ಪರಾರಿಯಾಗಿದ್ದು ಆತನ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ಕುರ್ಚಿ ಮೇಲೆ ಕಾಲಿಟ್ಟಿದ್ದಕ್ಕೆ ಗುಂಡೇಟು!
ಗಾಯಾಳು ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ ಸಿನಿಮಾ ವೀಕ್ಷಣೆ ವೇಳೆ ಆರೋಪಿ ಕುಳಿತಿದ್ದ ಮುಂದಿನ ಕುರ್ಚಿಯ ಮೇಲೆ ಕಾಲಿಟ್ಟಿದ್ದ. ಈ ವಿಚಾರದಲ್ಲೇ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ. ಮುಂದಿನ ಕುರ್ಚಿಯಲ್ಲಿ ಕುಳಿತಿದ್ದ ಆರೋಪಿ ವಸಂತಕುಮಾರ ಬಳಿ ಕಾಲು ತೆಗೆಯುವಂತೆ ಹೇಳಿದ್ದಾನೆ.
ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿ ಸಿನಿಮಾ ಮಂದಿರದಿಂದ ಹೊರಗಡೆ ಹೋಗಿ ಹತ್ತು ನಿಮಿಷದ ನಂತರ ಮತ್ತೆ ಚಿತ್ರಮಂದಿರದ ಒಳಗೆ ಬಂದು, ವಸಂತಕುಮಾರನ ಮೇಲೆ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ.
Recommended Video
ಗುಂಡು ಹಾರಿಸುತ್ತಿದ್ದಂತೆ ಚಿತ್ರಮಂದಿರದಲ್ಲಿದ್ದ ಪ್ರೇಕ್ಷಕರು ಗಾಬರಿಯಾಗಿ ಹೊರಗಡೆ ಓಡಿ ಹೋಗಿದ್ದಾರೆ. ಈ ಪೈಕಿ ಎರಡು ಗುಂಡುಗಳು ವಸಂತಕುಮಾರ ಕಾಲಿಗೆ ಬಿದ್ದಿದ್ದು, ಮತ್ತೊಂದು 'ಮಿಸ್ಫೈರ್' ಆಗಿದೆ. ಇನ್ನು ಸ್ನೇಹಿತರ ಜೊತೆಯಲ್ಲಿ ವಸಂತಕುಮಾರ ಥಿಯೇಟರ್ಗೆ ಬಂದಿದ್ದರು. ಆದರೆ ಘಟನೆ ಬಳಿಕ ಸ್ನೇಹಿತರ ಮಾಹಿತಿ ಕೂಡಾ ದೊರೆತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.