ರಾಜ್ಯ ಹೆದ್ದಾರಿ ಅಗಲೀಕರಣ; ಧರೆಗುರುಳಿದ ಶತಮಾನದ ಮರಗಳು
ರಾಣೆಬೆನ್ನೂರು, ಜನವರಿ 28: ರಾಜ್ಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿ ಬೆಳೆದು ನಿಂತಿದ್ದ ಶತಮಾನದ ನೂರಾರು ಮರಗಳನ್ನು ಕಡಿಯಲಾಗಿದೆ. ಒಂದು ಕಡೆ ಸರ್ಕಾರ ಅರಣ್ಯ ಕಾಪಾಡಬೇಕು, ಸಸ್ಯಗಳನ್ನು ನೆಡಬೇಕು ಎಂದು ಹೇಳುತ್ತಿದ್ದರೆ, ಇತ್ತ ಅದೇ ಸರ್ಕಾರ ರಸ್ತೆ ಅಗಲೀಕರಣ ನೆಪದಲ್ಲಿ ಮರಗಳಿಗೆ ಕೊಡಲಿ ಏಟು ನೀಡಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮಾರ್ಗವಾಗಿ ತೆರಳುವ ಸಮ್ಮಸಗಿ-ಬಿಳಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ರಾಣೇಬೆನ್ನೂರು ತಾಲ್ಲೂಕಿನ ದೇರವರಗುಡ್ಡ ಹತ್ತಿರದ ರಸ್ತೆಯ ಬದಿಯಲ್ಲಿದ್ದ ನೂರಾರು ಗಿಡಗಳನ್ನು ಧರೆಗುರುಳಿಸಲಾಗಿದೆ.
ಕೇಂದ್ರ ಬಜೆಟ್-2021 ನಿರೀಕ್ಷೆ: ರಾಣೇಬೆನ್ನೂರು-ಶಿವಮೊಗ್ಗ ರೈಲು ಯೋಜನೆ ಕಾಮಗಾರಿ ಯಾವಾಗ?
ರಾಣೇಬೆನ್ನೂರು ಮಾರ್ಗವಾಗಿ ದೇವರಗುಡ್ಡ, ಹೊನ್ನತ್ತಿ, ಗುತ್ತಲ ಹಾಗೂ ಮೈಲಾರ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಗಿಡಗಳನ್ನು ಹಲವು ಸುಮಾರು ವರ್ಷಗಳ ಹಿಂದೆ ನೆಡಲಾಗಿತ್ತು.
ಇವುಗಳಿಂದ ದೇವರಗುಡ್ಡ, ಹೊನ್ನತ್ತಿ ಹಾಗೂ ಮೈಲಾರಲಿಂಗೇಶ್ವರ ದೇವಸ್ಥಾನಗಳಿಗೆ ಹೋಗುವ ಭಕ್ತರು ಮರಗಳ ಕೆಳಗೆ ವಿಶ್ರಾಂತಿಗೆ ನಿಲ್ಲುತ್ತಿದ್ದರು. ಆದರೆ ಈಗ ರಸ್ತೆ ನಿರ್ಮಾಣದ ನೆಪದಲ್ಲಿ ನೂರಾರು ಗಿಡಗಳನ್ನು ಕಡಿಯುವ ಮೂಲಕ ರಸ್ತೆಯ ಪಕ್ಕದಲ್ಲಿ ನೆರಳು ಕಾಣದಾಗಿದೆ. ಈ ರೀತಿಯಾಗಿ ಪರಿಸರವನ್ನು ಹಾಳು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಹಲವು ಮರಗಳನ್ನು ಕಡಿದು ಸಾಗಿಸಲಾಗಿದ್ದು, ಉಳಿದ ಮರಗಳನ್ನು ಸ್ಥಳಾಂತರ ಅಥವಾ ಮರಗಳನ್ನು ಮಧ್ಯ ಭಾಗದಲ್ಲಿ ಬರುವ ರೀತಿಯಾಗಿ ಮಾಡಬೇಕು ಎಂದು ಕೆಲ ಪರಿಸರ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಮರಗಳನ್ನು ಗುತ್ತಿಗೆ ತೆಗೆದುಕೊಂಡು ಸರ್ಕಾರಕ್ಕೆ ಹಣ ನೀಡಿ ತೆರವು ಮಾಡಲಾಗುತ್ತಿದೆ ಎಂದು ರಸ್ತೆ ಉಸ್ತುವಾರಿ ಎಂಜಿನಿಯರ್ ಹೇಳಿದ್ದಾರೆ.