Karnataka Elections 2023: ಸಿಎಂ ಬೊಮ್ಮಾಯಿಗೂ ಸಲೀಸಾಗಿ ಉಳಿದಿಲ್ಲ ಶಿಗ್ಗಾವಿ ಕ್ಷೇತ್ರ, ತಾಜಾ ಸಮೀಕ್ಷೆ ವರದಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾವಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಇದೆ ಎಂದು ಸಮೀಕ್ಷೆ ಹೇಳಿದೆ.
ಶಿಗ್ಗಾವಿ, ಮಾರ್ಚ್ 20: ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ನಡೆಯಲಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವಲ್ಲಿ ನಿರತವಾಗಿವೆ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯು ದೇಶದ ಗಮನ ಸೆಳೆದಿದೆ. ಬಿಜೆಪಿ, ( BJP ) ಕಾಂಗ್ರೆಸ್ ( Congress ) ಹಾಗೂ ಜೆಡಿಎಸ್ ( JDS ) ಪಕ್ಷಗಳ ನಡುವೆ ಮತ್ತೆ ಪೈಪೋಟಿ ಏರ್ಪಟ್ಟಿದೆ.
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಕೆಲವೇ ಕ್ಷೇತ್ರಗಳ ಪೈಕಿ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರವೂ ಒಂದು. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Basavaraj Bommai ) ಅವರು ಪ್ರತಿನಿಧಿಸುವ ಕ್ಷೇತ್ರವಾಗಿದೆ. ಜೆಡಿಎಸ್ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಬಸವರಾಜ ಬೊಮ್ಮಾಯಿ ಅವರು 2008ರಲ್ಲಿ ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 2008, 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಅವರು ಶಾಸಕರಾಗಿ ಆಯ್ಕೆಯಾದರು.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಸಮೀಕ್ಷೆ ಮಾಡಿರುವ ಲೋಕ್ ಪೋಲ್ ( Lok Poll ) ಸಂಸ್ಥೆಯು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದೆ. 116 ರಿಂದ 122 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಆಡಳಿತಾರೂಢ ಬಿಜೆಪಿಯು 77 ರಿಂದ 83 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಜೆಡಿಎಸ್ 21 ರಿಂದ 27 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾವಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಇದೆ ಎಂದು ಸಮೀಕ್ಷೆ ಹೇಳಿದೆ. ಶೇ 47ರಷ್ಟು ಮತಗಳಲ್ಲಿ ಬಿಜೆಪಿ ಗಳಿಸಲಿದ್ದು, ಶೇ 44 ಮತಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಲಿದೆ. ಜೆಡಿಎಸ್ ಕೇವಲ ಶೇ 3ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಕಾರಣಕ್ಕೆ ಜನರು ಮತ ಹಾಕಬಹುದು. ಇದು ಬಸವರಾಜ ಬೊಮ್ಮಾಯಿ ಅವರಿಗೆ ವರವಾಗಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಬೊಮ್ಮಾಯಿ ಅವರಿಗೆ ಸಂಕಷ್ಟ ತಂದೊಡ್ಡಬಹುದಾದ ಅಂಶವೆಂದರೆ, ಪಂಚಮಸಾಲಿ ಸಮುದಾಯದ ಜನರ ಆಕ್ರೋಶ.
ಶಿಗ್ಗಾವಿ ಕ್ಷೇತ್ರದಲ್ಲಿ ಲಿಂಗಾಯತ ಉಪ ಪಂಗಡವಾದ ಪಂಚಮಸಾಲಿ ಸಮುದಾಯದ ಜನರು ಅಧಿಕವಾಗಿದ್ದಾರೆ. ಮೀಸಲಾತಿಗಾಗಿ ಬೇಡಿಕೆ ಇಟ್ಟಿರುವ ಪಂಚಮಸಾಲಿ ಸಮುದಾಯದ ಜನರು ಸಿಎಂ ಬೊಮ್ಮಾಯಿ ಮೇಲೆ ಆಕ್ರೋಶಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಮುದಾಯದ ಬೇಡಿಕೆ ಸಿಎಂ ಈಡೇರಿಸಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.

ಈ ಅಂಶವನ್ನು ಗಂಭೀರವಾಗಿ ಪರಿಣಮಿಸಿರುವ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ವಿನಯ್ ಕುಲಕರ್ಣಿ ಪ್ರಬಲ ಮುಖಂಡರಾಗಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವಾರ ನಡೆದ ಕಾಂಗ್ರೆಸ್ನ ಉನ್ನತ ಮಟ್ಟದ ನಾಯಕರ ಸಭೆಯಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಕಟ್ಟಿಹಾಕುವ ಬಗ್ಗೆ ಚರ್ಚೆಗಳು ನಡೆದಿವೆ. ಧಾರವಾಡದ ವಿನಯ್ ಕುಲಕರ್ಣಿ ಅವರನ್ನು ಶಿಗ್ಗಾವಿಯಲ್ಲಿ ಕಣಕ್ಕಿಳಸಬೇಕೆಂಬುದು ನಾಯಕರ ಒತ್ತಾಸೆಯಾಗಿದೆ ಎಂದು ತಿಳಿದುಬಂದಿದೆ. ಒಂದು ವೇಳೆ, ಬೊಮ್ಮಾಯಿ ವಿರುದ್ಧ ಕುಲಕರ್ಣಿ ಕಣಕ್ಕಿಳಿದರೆ, ಶಿಗ್ಗಾವಿ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಡಲಿದೆ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ 65, 000 ಲಿಂಗಾಯತರಿದ್ದಾರೆ. 52, 000 ಮುಸ್ಲಿಂ ಮತದಾರರಿದ್ದಾರೆ. 32, 000 ಕುರುಬ ಸಮುದಾಯ, 22, 000 ಲಂಬಾನಿಗಳು ಹಾಗೂ 25, 000 ದಲಿತರಿದ್ದಾರೆ.












Click it and Unblock the Notifications