ಬಿಜೆಪಿ ಸರಕಾರ ಸೂರ್ಯಚಂದ್ರರಷ್ಟೇ ಸತ್ಯ : ಯಡಿಯೂರಪ್ಪ
ಹಾವೇರಿ, ಡಿಸೆಂಬರ್ 23 : ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟು ಸತ್ಯ. ಒಂದು ಲಕ್ಷ ಕೋಟಿಯನ್ನು ಕೇಂದ್ರದಿಂದ ತಂದು ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರೈಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಶನಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ನನಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಾವಿರ ಬಾರಿ ಹೇಳಿದರೂ ಈ ರಾಜ್ಯ ರೈತರು ಸಿದ್ದರಾಮಯ್ಯ ಅವರ ಮಾತನ್ನು ಒಪ್ಪುವುದಿಲ್ಲ.

ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರಿಗೆ ಪ್ರತ್ಯೇಕ ಬಜೆಟ್ ಮಾಡಿದ ನಾನು ರೈತರ ವಿರೋಧಿಯೇ? ಕೃಷ್ಣೆಯ ಮೇಲೆ ಆಣೆ ಮಾಡಿ ಹೇಳುತ್ತೇನೆ. ಕೃಷ್ಣೆಗಾಗಿ ಒಂದು ಲಕ್ಷ ಕೋಟಿ ಹಣ ಖರ್ಚು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಸವರಾಜ್ ಬೊಮ್ಮಾಯಿ ಅವರನ್ನು ಶಿಗ್ಗಾಂವ್-ಸವಣೂರು ಕ್ಷೇತ್ರದ ಜನ ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ, ಸೋಮಣ್ಣ ಬೇವಿನಮರದ ಅವರಿಗೆ ಸೂಕ್ತ ಸ್ಥಾನಮಾನ ಕೊಡುತ್ತೇನೆ ಎಂದರು.
ಉತ್ತರ ಪ್ರದೇಶದಂತೆ ಕರ್ನಾಟಕ ಜಂಗಲ್ ರಾಜ್ಯ ಆಗಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರೆ, ನಿಮ್ಮ ಕಾಂಗ್ರೆಸ್ ಸ್ಥಿತಿ ನೋಡಿದ್ದೀರಾ? ಉತ್ತರ ಪ್ರದೇಶದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲಸಮವಾಗಿದೆ. ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ಹೇಳಿಕೆಗೆ ಧಿಕ್ಕಾರ ಎಂದು ಹೇಳಿದರು.












Click it and Unblock the Notifications