ಶಿಗ್ಗಾವಿ ಕರ್ನಾಟಕ ರಾಜ್ಯದ ನಂಬರ್ 1 ಕ್ಷೇತ್ರವಾಗಲಿದೆ: CM ಬೊಮ್ಮಾಯಿ
ಶಿಗ್ಗಾಂವಿ, ಏಪ್ರಿಲ್ 24: ಮುಂದಿನ ಒಂದು ವರ್ಷದೊಳಗೆ ಸವಣೂರಿನ ಎಲ್ಲಾ ವಾರ್ಡ್ ಗಳಿಗೆ ನಿತ್ಯ 24 ಗಂಟೆಯು ಕುಡಿಯುವ ನೀರು ಸಿಗುವಂತೆ ಮಾಡಲಾಗುವುದು. ಹೀಗೆ ಅಭಿವೃದ್ಧಿ ಮೂಲಕ ಕರ್ನಾಟಕದಲ್ಲೇ ಶಿಗ್ಗಾವಿಯನ್ನು ನಂಬರ್ ಒನ್ ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದದಿಂದ ಈ ಕ್ಷೇತ್ರದ ಸೇವೆ ಮಾಡುವ ಅವಕಾಶ ನನಗೆ ಧಕ್ಕಿದೆ. ಕಳೆದ 15 ವರ್ಷದಲ್ಲಿ ಇಲ್ಲಿ ಆಗಿರುವ ಅಭಿವೃದ್ಧಿ ನೋಡಿದ್ದೀರಿ. 6-7 ವರ್ಷಗಳಲ್ಲಿ ಮೋತಿ ತಾಲಾಬ್ ಕೆರೆ ಸಹಿತ 120 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮೋತಿ ತಾಲಾಬ್ ಕೆರೆ ಅಭಿವೃದ್ಧಿಗೆ ಕಾಂಗ್ರೆಸ್ ಇದ್ದಾಗ ಹೋರಾಟ ಮಾಡಿದ್ದೆವು ಎಂದರು.

ಇಲ್ಲಿನ ಕೆರೆಯಲ್ಲಿ ಗೋಲಿ, ಚಿನ್ನಿದಾಂಡು ಆಡುತ್ತಿದ್ದರು. ಈಗ ಏತ ನೀರಾವರಿಗೆ ಬಳಕೆ ಆಗುತ್ತಿದೆ. ಶಿಗ್ಗಾಂವ್ ಸವಣೂರು ರಸ್ತೆ ಸೇರಿದಂತೆ ಹಲವಾರು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸವಣೂರು ತಾಲೂಕು ವ್ಯಾಪ್ತಿಯಲ್ಲಿ ಅಭಿವೃದ್ಧಿ ಪರ್ವ
ಸವಣೂರಿನಲ್ಲಿ 67 ಕೋಟಿ ರೂಪಾಯಿ ವೆಚ್ಚದಲ್ಲಿ ಆಯುರ್ವೇದಿಕ್ ಕಾಲೇಜು, 37 ಕೋಟಿ ರೂಪಾಯಿ ವೆಚ್ಚದಲ್ಲಿ ಐಟಿಐ ಕಾಲೇಜು ಆಧುನೀಕರಣಗೊಳಿಸಲಾಗಿದೆ. 120 ಕೋಟಿ ರೂಪಾಯಿ ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಕಾಲೇಜು ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ಶಿಕ್ಷಣ, ಆರೋಗ್ಯ, ಉದ್ಯೋಗ, ಕುಡಿಯುವ ನೀರು, ರಸ್ತೆ ಸಂಪರ್ಕ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿ ಮಾಡಿದ್ದೇನೆ.
ನವಾಬರ ಅರಮನೆ ಮ್ಯೂಸಿಯಂ ಆಧುನಿಕರಣಕ್ಕೆ 8 ಕೋಟಿ ನೀಡಿದ್ದೇನೆ. ಎಲ್ಲ ಮಠ - ಮಂದಿರ, ಮಸೀದಿಗಳಿಗೆ ಭೇದಭಾವ ಇಲ್ಲದೇ ಅನುದಾನ ಒದಗಿಸಲಾಗಿದೆ. ಬೊಮ್ಮಾಯಿ ಇದ್ದರೆ ಶಾಂತಿ ಸೌಹಾರ್ದತೆ ಇರುತ್ತದೆ ಎಂದು ಜನರಿಗೆ ಗೊತ್ತಾಗಿದೆ. ಹಲವು ಮಹನೀಯರ ತತ್ವ ಆದರ್ಶಗಳನ್ನು ಇಟ್ಟುಕೊಂಡು ಆಡಳಿತ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಬಡವರ ವಸತಿ ಸಮಸ್ಯೆಗೆ ಪರಿಹಾರ
ಶಿಗ್ಗಾಂವ್ ಸವಣೂರು ಕ್ಷೇತ್ರ ಇಡೀ ರಾಜ್ಯದಲ್ಲಿ ನಂಬರ್ 1 ಆಗಲು ನಾನು ಕಂಕಣಬದ್ಧನಾಗಿದ್ದೇನೆ. ಕಳೆದ 15 ವರ್ಷದಲ್ಲಾದ ಅಭಿವೃದ್ಧಿಯನ್ನು ಮುಂದಿನ 5 ವರ್ಷಗಳಲ್ಲಿ ಮಾಡುತ್ತೇನೆ. ಬಡವರ ವಸತಿ ಸಮಸ್ಯೆ ಬಗೆಹರಿಸಲು 1200 ಮನೆಗಳನ್ನು ಕಟ್ಟುತ್ತಿದ್ದೇವೆ. ಪ್ರತಿಯೊಬ್ಬರ ಮನೆಗೂ ಹೋಗಿ ಕೇಂದ್ರ ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ ಹೇಳಿ. ರಾಜ್ಯದ ಉದ್ದಗಲಕ್ಕೂ ನಾನು ತಿರುಗಾಡುತ್ತಿದ್ದೇನೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದರಲ್ಲಿ ಅನುಮಾನವೇ ಬೇಡ. ಶಿಗ್ಗಾಂವಿ ಸವಣೂರು ಬಂಕಾಪುರದ ಎಲ್ಲ ಬಡವರಿಗೂ ಸೂರು ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ದಶಕಗಳ ಸಾಮಾಜಿಕ ನ್ಯಾಯದ ಬೇಡಿಕೆ ಈಡೇರಿಕೆ
ಸಾಮಾಜಿಕ ನ್ಯಾಯ ಅಂತ ಕಾಂಗ್ರೆಸ್ ಹೇಳುತ್ತಲೇ ಬಂದಿದೆ. ಆದರೆ ಇದುವರೆಗೆ ಅವರಿಂದ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಎಸ್ಸಿ ಎಸ್ಟಿ ಸಮುದಾಯದ 30 ವರ್ಷದ ಬೇಡಿಕೆಯನ್ನು ನಿಮ್ಮ ಬಸವರಾಜ ಬೊಮ್ಮಾಯಿ ಸರ್ಕಾರ ಈಡೇರಿಸಿದೆ. ನಾನು ಮೀಸಲಾತಿ ಹೆಚ್ಚಿಸುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಆದರೂ ನಾನು ಜೇನು ಗೂಡಿಗೆ ಕೈ ಹಾಕಿ ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಕಾನೂನು ತಂದಿದ್ದೇನೆ ತಮ್ಮ ಸಾಧನೆ ವಿವರಿಸಿದರು.
ಕಾಂಗ್ರೆಸ್ ಬಂದ ಮೇಲೆ ಪಡಿತರ ಪ್ರಮಾಣ ಇಳಿಕೆ
ಜನರಿಗೆ 10 ಕೆಜಿ ಕೊಡುತ್ತೇವೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಆಡಳಿತಕ್ಕೆ ಬರುವ ಮುನ್ನವೇ ಬಿಜೆಪಿ ಸರ್ಕಾರ 10 ಕೆ.ಜಿ. ಅಕ್ಕಿ ಕೊಡುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದನ್ನು 5 ಕೆಜಿ ಗೆ ಇಳಿಸಿ, ಚುನಾವಣೆ ಸಮಯದಲ್ಲಿ 7 ಕೆಜಿಗೆ ಏರಿಸಿದರು. ಆದ್ರೆ ಅದರಲ್ಲಿ ಇರೋದು ಮೋದಿ ಕೊಡುವ 30 ರೂಪಾಯಿ ಅಕ್ಕಿ. ಅದಕ್ಕೆ 3 ರೂಪಾಯಿ ಚೀಲ ಹಾಕಿ ಸಿದ್ದರಾಮಯ್ಯನ ಫೋಟೊ ಹಾಕಿ ಕೊಟ್ಟರು ಎಂದು ಲೇವಡಿ ಮಾಡಿದರು.
ಕರೆಂಟ್ 200 ಯುನಿಟ್ ಕೊಡುತ್ತೇನೆ ಎಂದು ಹೇಳುತ್ತಾರೆ. ಆದರೆ ಪ್ರತಿ ಮನೆಯಲ್ಲಿ ವಿದ್ಯುತ್ ಬಳಕೆ ಆಗುವುದೇ ಸುಮಾರು 75 ಯುನಿಟ್. ಚುನಾವಣೆ ಮುಗಿಯುವವರೆಗೂ ಗ್ಯಾರಂಟಿ, ಆಮೇಲೆ ಗಳಗಂಟಿ. ನಾನು ಇನ್ನಷ್ಟು ಕ್ಷೇತ್ರದ ಅಭಿವೃದ್ಧಿ ಮಾಡಲು ಎಲ್ಲರೂ ಮತ ನೀಡಿ ಆಶೀರ್ವದಿಸಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.












Click it and Unblock the Notifications