ಹಾವೇರಿ, 2ನೇ ಹಂತದ ಚುನಾವಣೆ: ಕಾಂಗ್ರೆಸ್ಸಿನ ಅತೃಪ್ತರೇ ಬಿಜೆಪಿ ಪಾಲಿನ ರಕ್ಷಕರು
Recommended Video
ಇದುವರೆಗಿನ ಹದಿನಾರು ಲೋಕಸಭಾ ಚುನಾವಣೆಯಲ್ಲಿ ಹನ್ನೆರಡು ಬಾರಿ ಗೆದ್ದಿದ್ದ ಕಾಂಗ್ರೆಸ್ಸಿಗೆ ಕಳೆದ ಹದಿನೈದು ವರ್ಷಗಳಿಂದ ಹಾವೇರಿ ಲೋಕಸಭಾ ಕ್ಷೇತ್ರ ಗಗನ ಕುಸುಮ. ಹೇಗಾದರೂ ಮಾಡಿ, ಕ್ಷೇತ್ರವನ್ನು ಮತ್ತೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದಿರುವ ಕಾಂಗ್ರೆಸ್ಸಿಗೆ, ಬಿಜೆಪಿಗಿಂತ ದೊಡ್ಡ ಚಿಂತೆ ಪಕ್ಷದೊಳಗಿನ ಟಿಕೆಟ್ ಹಂಚಿಕೆ ಗೊಂದಲ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕ್ಷೇತ್ರದಲ್ಲಿ ತಂದೆ ಸಿಎಂ ಉದಾಸಿಯ ಪ್ರಭಾವ ಜೊತೆಗೆ ವೈಯಕ್ತಿಕ ವರ್ಚ್ಚಸ್ಸನ್ನು ಹೊಂದಿರುವ ಶಿವಕುಮಾರ ಉದಾಸಿ ಇಲ್ಲಿನ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕ್ಶೇತ್ರಕ್ಕೆ ಅಷ್ಟೇನೂ ಪರಿಚಯವಿಲ್ಲದ ಡಿ ಆರ್ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ.
ಸಾಮಾನ್ಯ ಕಾರ್ಯಕರ್ತರ ಕೈಗೆ ಶಿವಕುಮಾರ ಉದಾಸಿ ಸಿಗುವುದಿಲ್ಲ ಎನ್ನುವ ಅಪವಾದದ ನಡುವೆ, ಉದಾಸಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆ, ಎಚ್ ಕೆ ಪಾಟೀಲ್ ಅವರ ಸಹೋದರ ಸಂಬಂಧಿಯೂ ಆಗಿರುವ ಡಿ ಆರ್ ಪಾಟೀಲ ಕೂಡಾ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ.
ಟಿಕೆಟ್ ಸಂಬಂಧ ವಿಚಾರದಲ್ಲಿ ಕಾಂಗ್ರೆಸ್ ಅತೃಪ್ತರ ಕೋಪ ಇನ್ನೂ ಶಮನವಾದಂತಿಲ್ಲ. ಬಹಿರಂಗ ಪ್ರಚಾರಕ್ಕೆ ಒಂದೇ ಒಂದು ದಿನ ಬಾಕಿಯುಳಿದಿದ್ದರೂ, ಪೂರ್ಣ ಪ್ರಮಾಣದಲ್ಲಿ ಪಾಟೀಲ್ ಪರ ಪ್ರಚಾರಕ್ಕೆ ಕಾಂಗ್ರೆಸ್ಸಿಗರು ಉತ್ಸಾಹ ತೋರದೇ ಇರುವುದು, ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಿದೆ. ಮೇಲ್ನೋಟಕ್ಕೆ ಐಕ್ಯತೆ ಪ್ರದರ್ಶಿಸುತ್ತಿದ್ದರೂ, ಕೆಲವೊಂದು ಸಮುದಾಯದ ಮುಖಂಡರ ಬೇಗುದಿ ಇನ್ನೂ ಕಮ್ಮಿಯಾದಂತಿಲ್ಲ.

ಸತತವಾಗಿ ನಾಲ್ಕು ಬಾರಿ ಶಾಸಕರಾಗಿರುವ ಡಿ ಆರ್ ಪಾಟೀಲ
ಸತತವಾಗಿ ನಾಲ್ಕು ಬಾರಿ ಶಾಸಕರಾಗಿರುವ ಡಿ ಆರ್ ಪಾಟೀಲ, ಗದಗ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದರೂ, ಹಾವೇರಿ ಜಿಲ್ಲಾ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ಅಷ್ಟಾಗಿ ರಾಜಕೀಯ ನೆಲೆಹೊಂದಿದವರಲ್ಲ. ಲಿಂಗಾಯತ ಧರ್ಮ ವಿಭಜನೆ ಪ್ರಯತ್ನದ ವಿಚಾರಗಳು ಮತ್ತೆ ಚರ್ಚೆಯ ವಿಷಯವಾಗಿರುವುದು, ಮೋದಿ ಹವಾ ಕೂಡಾ ಈ ಕ್ಷೇತ್ರದಲ್ಲಿ ತಣ್ಣಗೆ ಬೀಸುತ್ತಿರುವುದರಿಂದ, ಈ ಕ್ಷೇತ್ರವನ್ನು ಮತ್ತೆ ತನ್ನ ಮಡಿಲಿಗೆ ಹಾಕಿಕೊಳ್ಳಲು, ಕಾಂಗ್ರೆಸ್ ಹರಸಾಹಸವನ್ನು ಪಡಬೇಕಿದೆ.

ಶಾಸಕರಾದ ಬಿ ಸಿ ಪಾಟೀಲ್ ಅಲ್ಲೂ ಇದ್ದಾರೆ, ಇಲ್ಲೂ ಇದ್ದಾರೆ
ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ, ಐದರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಕೆಪಿಜೆಪಿಯ ಶಂಕರ್ ಜಯಗಳಿಸಿದ್ದರು. ಕಾಂಗ್ರೆಸ್ ಗೆದ್ದಿರುವ ಎರಡು ಕ್ಷೇತ್ರಗಳಲ್ಲಿ ಒಂದು ಹಿರೇಕೆರೂರು, ಅಲ್ಲಿನ ಶಾಸಕರಾದ ಬಿ ಸಿ ಪಾಟೀಲ್ ಮತ್ತು ರಾಣೆಬೆನ್ನೂರಿನ ಶಂಕರ್, ಅಲ್ಲೂ ಇದ್ದಾರೆ, ಇಲ್ಲೂ ಇದ್ದಾರೆ. ಹಾಗಾಗಿ, ಇವರಿಬ್ಬರನ್ನೂ ಕಾಂಗ್ರೆಸ್ ನೆಚ್ಚಿಕೊಂಡುವ ಹೋಗುವ ಸಾಧ್ಯತೆ ಕಮ್ಮಿ.

ಸಲೀಂ ಅಹಮದ್ ಈ ಬಾರಿಯೂ ಟಿಕೆಟ್ ಬಯಸಿದ್ದರು
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು ಸಲೀಂ ಅಹಮದ್. ಈ ಬಾರಿಯೂ ಅವರು ಟಿಕೆಟ್ ಬಯಸಿದ್ದರು. ಆದರೆ, ಎಚ್ ಕೆ ಪಾಟೀಲ್ ಲಾಬಿ ಸರಿಯಾಗಿ ವರ್ಕೌಟ್ ಆದನಂತರ ಇವರಿಗೆ ಟಿಕೆಟ್ ತಪ್ಪಿತ್ತು. ಇದು ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದವರ ಕೋಪಕ್ಕೆ ಕಾರಣವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಸಲೀಂ ಅವರನ್ನು ವಾಯಿನಾಡ್ ನಲ್ಲಿ ರಾಹುಲ್ ಗಾಂಧಿ ಪರ ಪ್ರಚಾರದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಎಲ್ಲಾ ಕೋಮಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಪಾಟೀಲ್ ಮಾಡುತ್ತಿದ್ದಾರೆ
ಇವೆಲ್ಲದರ ನಡುವೆ, ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಸಲೀಂ ಅಹಮದ್ ಗೆ, ಎಚ್ ಕೆ ಪಾಟೀಲ್ ಅವರಿಂದ ಹಿಂದೆ ಸರಿಯಾದ ಸಹಕಾರ ಸಿಕ್ಕಿರಲಿಲ್ಲ ಎನ್ನುವ ಸಿಟ್ಟು ಅಲ್ಪಸಂಖ್ಯಾತ ಸಮುದಾಯದಲ್ಲಿದೆ ಎನ್ನುವ ಮಾತೂ ಕೇಳಿಬರುತ್ತಿದೆ. ತಮ್ಮ ಸಹೋದರ ಸಂಬಂಧಿ, ಅಭ್ಯರ್ಥಿ ಡಿ ಆರ್ ಪಾಟೀಲ್ ಅವರನ್ನು ದಡ ಸೇರಿಸಲು, ಎಚ್ಕೆಪಿ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲಾ ಕೋಮಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.

ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಬಸವರಾಜು ಬೊಮ್ಮಾಯಿಗೆ
ಇತ್ತ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಬಸವರಾಜ ಬೊಮ್ಮಾಯಿ ವಹಿಸಿಕೊಂಡಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್, ಜೊತೆಗೆ ಉದಾಸಿ ಲಿಂಗಾಯತ ಸಮುದಾಯದವರು. ಇನ್ನು ಕಾಂಗ್ರೆಸ್ಸಿನಲ್ಲಿ, ತಮ್ಮ ಸಮುದಾಯದ ಬಿ ಶಿವಣ್ಣನವರಿಗೆ ಟಿಕೆಟ್ ಸಿಗುತ್ತದೆ ಎಂದು ನಂಬಿದ್ದ ಕುರುಬ ಸಮುದಾಯ ಕೂಡಾ, ಕಾಂಗ್ರೆಸ್ ಮೇಲೆ ಸಿಟ್ಟಿನಲ್ಲಿದೆ. ಇಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ ಹ್ಯಾಟ್ರಿಕ್ ವಿಜಯ ಸಾಧಿಸುತ್ತಾರಾ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.












Click it and Unblock the Notifications