ಹಾನಗಲ್ ಉಪ ಚುನಾವಣೆ; ಪ್ರಚಾರಕಣಕ್ಕಿಳಿದ ಸಿದ್ದರಾಮಯ್ಯ
ಹಾವೇರಿ, ಅಕ್ಟೋಬರ್ 15; ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರಂಭಿಸಿದ್ದಾರೆ. ಶನಿವಾರ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಅಕ್ಟೋಬರ್ 30ರಂದು ಉಪ ಚುನಾವಣೆ ನಡೆಯಲಿದೆ.
ಅಕ್ಟೋಬರ್ 16ರ ಶನಿವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಅಕ್ಟೋಬರ್ 17ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ಕೈಗೊಳ್ಳಲಿದ್ದಾರೆ.

ಸಿದ್ದರಾಮಯ್ಯ ಶನಿವಾರ 10.30ಕ್ಕೆ ಮಲಗುಂದ, 12 ಗಂಟೆಗೆ ಹೇರೂರ, ಮಧ್ಯಾಹ್ನ 3 ಗಂಟೆಗೆ ತಿಳವಳ್ಳಿ, ಸಂಜೆ 5.30ಕ್ಕೆ ಗೊಂದಿಯಲ್ಲಿ ಚುನಾವಣಾ ಪ್ರಚಾರವನ್ನು ನಡೆಸಲಿದ್ದಾರೆ. ಉಪ ಚುನಾವಣೆ ಅಭ್ಯರ್ಥಿಯಾದ ಶ್ರೀನಿವಾಸ ಮಾನೆ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಲಿದ್ದಾರೆ.
ಹಾನಗಲ್ ಕ್ಷೇತ್ರದ ಶಾಸಕರಾಗಿದ್ದ ಬಿಜೆಪಿಯ ಸಿ. ಎಂ. ಉದಾಸಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಅಕ್ಟೋಬರ್ 30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಹಾನಗಲ್ ಕ್ಷೇತ್ರದ ಉಪ ಚುನಾವಣೆ ಚಿತ್ರಣ ಅಂತಿಮಗೊಂಡಿದೆ. ಪ್ರಚಾರದ ಭರಾಟೆ ಶನಿವಾರದಿಂದ ಕಾವು ಪಡೆದುಕೊಳ್ಳಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜೆಡಿಎಸ್ನ ನಿಯಾಜ್ ಶೇಖ್, ಬಿಜೆಪಿಯ ಶಿವರಾಜ ಶರಣಪ್ಪ ಸಜ್ಜನರ, ಕಾಂಗ್ರೆಸ್ನ ಮಾನೆ ಶ್ರೀನಿವಾಸ ಅಭ್ಯರ್ಥಿಗಳು. ಈಗಾಗಲೇ ಹಲವು ಕಾಂಗ್ರೆಸ್ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಶನಿವಾರ ಸಿದ್ದರಾಮಯ್ಯ ಪ್ರಚಾರ ಕಣಕ್ಕೆ ಧುಮುಕಲಿದ್ದು, ಉಪ ಚುನಾವಣೆ ರಂಗೇರಲಿದೆ.
2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ನಿಂದ ಶ್ರೀನಿವಾಸ ಮಾನೆ ಅಭ್ಯರ್ಥಿಯಾಗಿದ್ದರು.
74,015 ಮತಗಳನ್ನು ಪಡೆದು 80,529 ಮತಗಳನ್ನು ಪಡೆದ ಸಿ. ಎಂ. ಉದಾಸಿ ವಿರುದ್ಧ ಸೋಲು ಕಂಡಿದ್ದರು. ಉಪ ಚುನಾವಣೆಯಲ್ಲಿ ಪುನಃ ಅವರೇ ಅಭ್ಯರ್ಥಿಯಾಗಿದ್ದಾರೆ.
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿತ್ತು. ಬಂಡಾಯ ಅಭ್ಯರ್ಥಿಯಾಗಿದ್ದ ಬಿಜೆಪಿ ಮುಖಂಡ ಚನ್ನಪ್ಪ ಬಳ್ಳಾರಿ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿ ನಾಯಕರು ನಿಟ್ಟುಸಿರುವ ಬಿಟ್ಟಿದ್ದು, ಪ್ರಚಾರದತ್ತ ಗಮನ ಹರಿಸಿದ್ದಾರೆ.
ಮುಖ್ಯಮಂತ್ರಿಗಳ ಪ್ರವಾಸ; ಹಾನಗಲ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರದ ಪಕ್ಕದ ಕ್ಷೇತ್ರವಾಗಿದೆ. ಅಲ್ಲದೇ ಅವರು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಸಹ ಅವರ ಮೇಲಿದೆ.
ಅಕ್ಟೋಬರ್ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾನಗಲ್ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಅಭ್ಯರ್ಥಿ ಶಿವರಾಜ ಶರಣಪ್ಪ ಸಜ್ಜನರ ಪರವಾಗಿ ಮತ ಕೇಳಲಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರದ ಕಾವು ಹೆಚ್ಚಿಸಲಿದ್ದಾರೆ.
ಕೃಷಿ ಸಚಿವ ಬಿ. ಸಿ. ಪಾಟೀಲ್ ಮಾತನಾಡಿದ್ದು, "ಇದೇ ತಿಂಗಳ 17ರಂದು ಹಾನಗಲ್ ಉಪಚುನಾವಣಾ ಪ್ರಚಾರಕ್ಕೆ ಬಸವರಾಜ ಬೊಮ್ಮಾಯಿ ಬರುತ್ತಾರೆ. ನಾವು ಗೆದ್ದೇ ಗೆಲ್ಲುತ್ತೇವೆ, ಇದರಲ್ಲಿ ಅನುಮಾನ ಬೇಡ. ಕಾಂಗ್ರೆಸ್ನವರು ಕೇವಲ ಪ್ರಚಾರಕ್ಕಾಗಿ ವಿನಾಕಾರಣ ಆರೋಪ ಮಾಡುತ್ತಾರೆ" ಎಂದು ಹೇಳಿದ್ದಾರೆ.
ಸಿ. ಎಂ. ಉದಾಸಿ ಕುಟುಂಬ ಸದಸ್ಯರಿಗೆ ಉಪ ಚುನಾವಣೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಬಿಜೆಪಿ ಹೈಕಮಾಂಡ್ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದ್ದು, ಶಿವರಾಜ ಶರಣಪ್ಪ ಸಜ್ಜನರಗೆ ಟಿಕೆಟ್ ನೀಡಿದೆ.
ಹಾನಗಲ್ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಜೆಡಿಎಸ್ ಪಕ್ಷ ನಿಯಾಜ್ ಶೇಖ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಉಪ ಚುನಾವಣೆಯಲ್ಲಿ ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆ ಇದೆ.












Click it and Unblock the Notifications