ಬಿಜೆಪಿಗೆ ಮತ ಹಾಕಿ ಎಂದು ಕೈ ಅಭ್ಯರ್ಥಿಯನ್ನೇ ಕೇಳುವುದೇ?
ಹಾವೇರಿ, ಡಿಸೆಂಬರ್ 02: ಕಾಂಗ್ರೆಸ್ ನ ಅಭ್ಯರ್ಥಿಯನ್ನೇ 'ಬಿಜೆಪಿ ಮತ ಹಾಕಿ' ಎಂದು ಬಿಜೆಪಿಯ ಅಭ್ಯರ್ಥಿಯ ಪತ್ನಿ ಕೈ ಮುಗಿದು ಮನವಿ ಮಾಡಿದ್ದಾರೆ. ಘಟನೆ ನಡೆದಿರುವುದು ಉಪಚುನಾವಣೆ ಕಾವೇರಿರುವ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರದಲ್ಲಿ.
ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿರುವ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ.ಕೋಳಿವಾಡ ಅವರನ್ನು ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ್ ಅವರ ಪತ್ನಿ ಕೇಳಿದ್ದಾರೆ.
ಕೋಳಿವಾಡ ಅವರು ಚುನಾವಣಾ ಪ್ರಚಾರಕ್ಕೆಂದು ರಾಣೆಬೆನ್ನೂರು ಕ್ಷೇತ್ರದ ಕರೂರು ಗ್ರಾಮಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಪತ್ನಿ, ಜಿಲ್ಲಾ ಪಂಚಾಯಿತಿ ಸದಸ್ಯೆಯೂ ಆಗಿರುವ ಮಂಗಳಗೌರಿ ಅವರು ಗ್ರಾಮದಲ್ಲಿ ಬಿಜೆಪಿ ಪರ ಮತ ಯಾಚನೆ ಮಾಡುತ್ತಿದ್ದರು.

ಪ್ರಚಾರ ಸಭೆ ಮುಗಿಸಿ ಕಾರಿನಲ್ಲಿ ಹೊರಟಿದ್ದ ಕೋಳಿವಾಡ ಅವರನ್ನು ಭೇಟಿಯಾದ ಮಂಗಳಗೌರಿ ಅವರು ಕೆಲ ಕಾಲ ಕುಶಲೋಪರಿ ಮಾತನಾಡಿ, ಕೋಳಿವಾಡ ಹೊರಡುವ ಸಮಯಕ್ಕೆ 'ಬಿಜೆಪಿಗೆ ಮತ ಹಾಕಿ ಸಾರ್' ಎಂದು ಕೈಮುಗಿದು ಮನವಿ ಮಾಡಿದರು. ಇದಕ್ಕೆ ನಗುತ್ತಲೇ ತಲೆ ಆಡಿಸಿದ ಕೋಳಿವಾಡ ಅವರು ಕಾರಿನಲ್ಲಿ ತೆರಳಿದರು.
ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ್ ಅವರ ಪತ್ನಿ ಮಂಗಳಗೌರಿ ಅವರು ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿದ್ದು, ಬಿಜೆಪಿ ಪರ ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದಿಂದ ಕಳೆದ ವಿಧಾನಸಭೆಯಲ್ಲಿ ಆಯ್ಕೆ ಆಗಿದ್ದ ಆರ್.ಶಂಕರ್ ನಂತರದಲ್ಲಿ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಂಪಾದಿಸಿದ್ದರು. ಆದರೆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣ ಈಗ ಉಪಚುನಾವಣೆ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.












Click it and Unblock the Notifications