ಸೋಮಲಾಪುರ ಗ್ರಾಮದಲ್ಲಿ ನಡೆಯಿತು ರೋಚಕ ಬೆಲ್ಲದ ಬಂಡಿ ಉತ್ಸವ, ಜಾತ್ರೆಯ ಉದ್ದೇಶ ತಿಳಿಯಿರಿ
ಹಾವೇರಿ ಜಿಲ್ಲೆಯ ಸೋಮಲಾಪುರ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಸಹಾಸ್ರಾರು ಭಕ್ತರು ಭಾಗವಹಿಸಿ ಸಂಭ್ರಸಿದರು.
ಹಾವೇರಿ, ಫೆಬ್ರವರಿ, 03: ಕರ್ನಾಟಕದಲ್ಲಿ ಹೋರಿ ಬೆದರಿಸುವ ಹಬ್ಬ, ಚಕ್ಕಡಿ ಓಟದ ಸ್ಪರ್ಧೆಯನ್ನೂ ಜನರು ನೋಡಿದ್ದಾರೆ. ಇದೇ ರೀತಿಯಾಗಿ ಹಾವೇರಿ ಜಿಲ್ಲೆಯ ಸೋಮಲಾಪುರ ಗ್ರಾಮದಲ್ಲಿ ಬೆಲ್ಲದ ಬಂಡಿ ಉತ್ಸವ ಅದ್ದೂರಿಯಾಗಿ ನಡೆದಿದ್ದು, ಈ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗಿಯಾಗಿ ಸಂಭ್ರಮಿಸಿದರು.
ಹೀಗೆ ಒಂದೇಡೆ ಲಕ್ಷಾಂತರ ಭಕ್ತರ ದಂಡು, ಮತ್ತೊಂದಡೆ ನದಿದಡದಲ್ಲಿ ರೋಚಕ ಬೆಲ್ಲದ ಬಂಡಿ ಉತ್ಸವ ನಡೆಯಿತು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಹಾವೇರಿ ಜಿಲ್ಲೆ ರಾಣೆಬೇನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ ಇತಿಹಾಸ ಪ್ರಸಿದ್ಧಿ ಪಡೆದ ಹೊನಕೆರಿ ಮಲ್ಲಯ್ಯನ ಜಾತ್ರೆಯಲ್ಲಿ. ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಮಹತ್ವ ಪಡೆದ ಈ ಜಾತ್ರೆ ಅನೇಕ ಕಾರಣಗಳಿಗೆ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಜಾತ್ರೆಗಳು ವಿವಿಧ ಸಂಪ್ರದಾಯ ಆಚರಣೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಭಿನ್ನವಾಗಿ ತಮ್ಮದೇ ಆದ ಇತಿಹಾಸ ಪರಂಪರೆ ಹೊಂದಿದೆ.
ಬಂಡಿ ಉತ್ಸವವನ್ನ ಕಣ್ತುಂಬಿಕೊಂಡ ಭಕ್ತರು
ಪ್ರತಿವರ್ಷ ಜರುಗುವ ಹಬ್ಬದ ಜಾತ್ರೆಗಳ ಮೂಲಕ ಧಾರ್ಮಿಕತೆಯನ್ನ ಅನಾವರಣಗೊಳಿಸಲಾಗುತ್ತವೆ. ಹೌದು, ಇದಕ್ಕೆ ಉತ್ತರ ಕರ್ನಾಟಕದ ರಾಣೆಬೆನ್ನೂರಿನ ಸುಕ್ಷೇತ್ರ ಸೋಮಲಾಪುರದ ಶ್ರೀ ಹೊನಕೇರಿ ಮಲ್ಲೇಶ್ವರನ ಭರತ ಹುಣ್ಣಿಮೆಯ ಜಾತ್ರಾ ಮಹೋತ್ಸವದ ಬಂಡಿ ಉತ್ಸವ ಸಾಕ್ಷಿಯಾಗಿದೆ. ವರ್ಷಪೂರ್ತಿ ರೈತನ ಪ್ರತಿಯೊಂದು ಕೃಷಿ ಚಟುವಟಿಕೆಯಲ್ಲಿ ತನ್ನದೇ ಆದ ಪಾತ್ರ ನಿಭಾಯಿಸಿ ಬಸವಲಿದ ರಾಸುಗಳಿಗೆ ಕೊಂಚ ವಿಶ್ರಾಂತಿಯ ಮೂಲಕ ಜಾತ್ರೆಗೆ ಬಂಡಿ ಕಟ್ಟಿಕೊಂಡು ಪ್ರಯಾಣ ಬೆಳೆಸಲಾಗುತ್ತದೆ. ಹಾಗೆಯೇ ರೊಟ್ಟಿ ಬುತ್ತಿಯೊಂದಿಗೆ, ಸಂಬಂಧಿಕರ ಜೊತೆಗೆ ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಜಾತ್ರೆಯನ್ನು ವೀಕ್ಷಣೆ ಮಾಡುತ್ತಾರೆ.

ಜಾತ್ರೆಯ ವಿಶೇಷತೆ ಏನು?
ಈ ಜಾತ್ರೆಯಲ್ಲಿ ಮೊದಲ ದಿನ ರಾತ್ರಿ ಇಡೀ ಹೊಳೆ ಪೂಜೆ, ಪಾಲಿಕೆ ಉತ್ಸವ, ದೇವರ ಮೆರವಣಿಗೆ, ವಿವಿಧ ಕಲಾತಂಡಗಳ ವಾದ್ಯಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತದೆ. ಮಾರನೇ ದಿನ ದಿಡ ನಮಸ್ಕಾರ, ಉರುಳುಸೇವೆ, ಹಣ್ಣು ತುಪ್ಪ ನೈವೇದ್ಯ, ಮರಡಿ ಚಾಕರಿಯೊಂದುಗೆ ಬೆಲ್ಲದ ಬಂಡೆ ಉತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಬೆಲ್ಲದ ಬಂಡಿ ಉತ್ಸವವು ಇನ್ನು ಅದೇ ಸೊಗಡನ್ನು ಉಳಿಸಿಕೊಂಡು ಬಂದಿದೆ. ಸೋಮಲಾಪುರದ ಬೆಲ್ಲದ ಬಂಡಿ ಉತ್ಸವ ಇತರೆ ಜಾತ್ರೆಗಳಿಗಿಂತ ವಿಭಿನ್ನವಾಗಿ ನಡೆಯುತ್ತದೆ. ರೈತಾಪಿ ವರ್ಗ ಗಟ್ಟಿಮುಟ್ಟಾದ ಕಟ್ಟಿಗೆ ಅಚ್ಚಿನಿಂದ ತಯಾರಿಸಿದ ದೊಡ್ಡ ಬಂಡಿಯಲ್ಲಿ ಒಂದು ಹಂಡೆ ತುಂಬ ಬೆಲ್ಲದ ನೀರು ತುಂಬಿಕೊಂಡು ಬರುತ್ತಾರೆ. ತುಂಗಭದ್ರ ನದಿ ದಡದಿಂದ ಅಂಡಿ ಹಾರಿಸುವ ಎತ್ತುಗಳ ಓಟವು ನೆರೆದ ಭಕ್ತರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.

ಬಂಡಿ ಉತ್ಸವದಲ್ಲಿ ಪಾಲ್ಗೊಂಡ ಭಕ್ತಸಾಗರ
ಇನ್ನು ಜಾತ್ರೆ ತನ್ನದೇ ಆದ ಸುಧೀರ್ಘ ಇತಿಹಾಸವನ್ನು ಹೊಂದಿದ್ದು, ಪ್ರತಿವರ್ಷ ಈ ಅಪರೂಪದ ಬಂಡಿ ಉತ್ಸವ ನಡೆಯುತ್ತದೆ. ಇನ್ನು ಈ ಉತ್ಸವದಲ್ಲಿ ಸದ್ದು- ಗದ್ದಲ ಹಾಗೂ ಯಾವುದೇ ಅಹಿತಕರ ಘಟನೆ ನಡೆದಂತೆ ಕಾಪಾಡಿಕೊಂಡು ಬಂದಿರುವುದು ಪವಾಡವೇಸರಿ ಎನ್ನುತ್ತಾರೆ ಭಕ್ತರು. ಹಾಗೆಯೇ ತುಂಗಭದ್ರಾ ನದಿಯಲ್ಲಿ ದೇವರ ಜಲಾಭಿಷೇಕ ನೋಡಲು ಎರಡು ಕಣ್ಣುಗಳೇ ಸಾಲದು. ಈ ಜಾತ್ರೆಯೂ ತುಂಬಾ ಸರಳ ಮತ್ತು ಸಂಭ್ರಮದಿಂದ ನಡೆಯುತ್ತಿದ್ದು, ಈ ಜಾತ್ರೆಗೆ ಲಕ್ಷಾಂತರ ಭಕ್ತರ ದಂಡೇ ನೆರೆಯುತ್ತದೆ.












Click it and Unblock the Notifications