ರಾಣೇಬೆನ್ನೂರಲ್ಲಿ 'ಅರುಣೋ'ದಯ, ಕೋಳಿವಾಡಗೆ ಸೋಲು
ಹಾವೇರಿ, ಡಿಸೆಂಬರ್ 09: ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 'ಅರುಣೋದಯವಾಗಿದೆ'. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಕಾಳಗದಲ್ಲಿ ಕಮಲ ಪಕ್ಷ ಭರ್ಜರಿಯಾಗಿ ಜಯ ಕಂಡಿದೆ.
ರಾಣೇಬೆನ್ನೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು 21,061 ಮತಗಳಿಂದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಪರಾಭವಗೊಳಿಸಿ ಗೆಲುವಿನ ಕೇಕೆ ಹಾಕಿದ್ದಾರೆ.
ರಾಣೇಬೆನ್ನೂರು ಉಪ ಚುನಾವಣೆ: ಗೆಲುವಿನತ್ತ ಬಿಜೆಪಿಯ ಪೂಜಾರ್?
"ಇದೇ ನನ್ನ ಕೊನೆಯ ಚುನಾವಣೆ, ನನಗೆ ಗೆಲುವಿನ ಬೀಳ್ಕೊಡಿಗೆ ನೀಡಿ" ಎಂದು ರಾಣೇಬೆನ್ನೂರು ಕ್ಷೇತ್ರದ ಮತದಾರರಿಗೆ ಕೆ.ಬಿ.ಕೋಳಿವಾಡರು ಕೇಳಿಕೊಂಡಿದ್ದರು. ಆದರೆ ರಾಣೇಬೆನ್ನೂರಿನ ಮತದಾರರು ಹೊಸ ಮುಖ ಅರುಣ್ ಕುಮಾರ್ ಅವರನ್ನು ಬೆಂಬಲಿಸಿದ್ದಾರೆ.
ಫಲಿಸಿದ ಬೊಮ್ಮಾಯಿ ತಂತ್ರ
ಅರುಣ್ ಕುಮಾರ್ ಪರವಾಗಿ ಖುದ್ದು ಯಡಿಯೂರಪ್ಪ ಅವರೇ ಕ್ಷೇತ್ರದಲ್ಲಿ ಎರಡು ಬಾರಿ ಪ್ರಚಾರ ಕೈಗೊಂಡಿದ್ದು ಬಿಜೆಪಿ ಲಾಭವಾಗಿದೆ. ಅಲ್ಲದೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಸಂಸದ ಶಿವಕುಮಾರ್ ಉದಾಸಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರು.
ಇನ್ನು ರಾಣೇಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರನ್ನು ಈ ಬಾರಿ ಗೆಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆ ಕರೆ ನೀಡಿದ್ದರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕೆ.ಬಿ.ಕೋಳಿವಾಡ ಅವರ ಪರವಾಗಿ ಬಹಿರಂಗ ಪ್ರಚಾರ ಕೈಗೊಂಡಿದ್ದರೂ ಮತದಾರರು 'ಕೈ' ಹಿಡಿಯಲಿಲ್ಲ.
ಆರ್.ಶಂಕರ್ ಗೆ ಮಂತ್ರಿಗಿರಿ ಸಿಗುತ್ತಾ..?
ರಾಣೇಬೆನ್ನೂರು ಕ್ಷೇತ್ರದಲ್ಲಿ ಒಟ್ಟು 2,33,137 ಮತದಾರರಿದ್ದು, ಉಪ ಚುನಾವಣೆಯಲ್ಲಿ 1,72,368 ಜನ ಮತ ಚಲಾಯಿಸಿದ್ದರು. ಶೇಕಡಾವಾರು 73.93% ಮತದಾನವಾಗಿತ್ತು. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಅವರು 95,408 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರು 72,186 ಮತಗಳನ್ನು ಪಡೆದು 23,222 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಅನರ್ಹ ಶಾಸಕ ಆರ್.ಶಂಕರ್ ಅವರಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಶಂಕರ್ ಅವರು ಬಿಜೆಪಿ ಸೇರಿದ್ದರೂ ಪಕ್ಷ ಟಿಕೆಟ್ ನೀಡಿರಲಿಲ್ಲ. ಅವರ ಬದಲಾಗಿ 2013 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಅರುಣ್ ಕುಮಾರ್ ಪೂಜಾರ್ ಅವರಿಗೆ ಪಕ್ಷ ಮಣೆ ಹಾಕಿತ್ತು.
ರಾಣೇಬೆನ್ನೂರು ಕದನ: ನದಿ ಪಾತ್ರದ ಮತದಾರರೇ ನಿರ್ಣಾಯಕ
ಯಡಿಯೂರಪ್ಪಗೆ ಬಲ ತುಂಬಿದ ರಾಣೇಬೆನ್ನೂರು ಜನ
ಇವರಿಗೆ ಆರಂಭದಲ್ಲಿ ಸ್ಥಳೀಯ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ಬಾರಿಯ ಬಿಜೆಪಿ ಪರಾಜಿತ ಅಭ್ಯರ್ಥಿ ಬಸವರಾಜ ಕೇಲಗಾರ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಅದೇ ರೀತಿ ಅನರ್ಹ ಶಾಸಕ ಆರ್.ಶಂಕರ್ ಅವರಿಗೆ ಟಿಕೆಟ್ ಕೊಡಬೇಕಿತ್ತೆಂದು ಅವರ ಬೆಂಬಲಿಗರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದರು.
ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ವಿರುದ್ದ ವಂಚನೆಯ ಪ್ರಕರಣ ದಾಖಲಾಗಿತ್ತು. ಈ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಗೃಹ ಬಸವರಾಜ ಬೊಮ್ಮಾಯಿ ಅವರು ತಂತ್ರ ಕ್ಷೇತ್ರದಲ್ಲಿ ಕೆಲಸ ಮಾಡಿದೆ.
ಇದ್ದು ಇಲ್ಲದಂತಾದ ಜೆಡಿಎಸ್
ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮೂರು ಪಕ್ಷಗಳಿಂದ ಘಟಾನುಘಟಿ ರಾಜ್ಯ ನಾಯಕರು ಆಗಮಿಸಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಿದ್ದರು. ಕೊನೆಗೆ ರಾಣೇಬೆನ್ನೂರಿನ ಮತದಾರ ಭಾರತೀಯ ಜನತಾ ಪಕ್ಷಕ್ಕೆ ಗೆಲುವಿನ ಸಿಹಿ ನೀಡಿದ್ದಾರೆ.
ಇನ್ನು ರಾಜಕೀಯ ಜೀವನದ ಕೊನೆಯ ಚುನಾವಣೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿದ್ದ ಅವರ ಮುಂದಿನ ನಡೆ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ.