Cauvery: ತುಲಾಮಾಸದಲ್ಲಿ ರಾಮನಾಥಪುರದ ಕಾವೇರಿ ಸ್ನಾನ ಪಾವನ ಯಾಕೆ
ಹಾಸನ, ಅಕ್ಟೋಬರ್ 25: ತುಲಾಸಂಕ್ರಮಣದ ಒಂದು ತಿಂಗಳ ಕಾಲ ಗಂಗೆ ಸೇರಿದಂತೆ ಸಮಸ್ತ ದೇವತೆಗಳು ಕಾವೇರಿಯೊಂದಿಗೆ ಇರುವುದರಿಂದ ಈ ಸಮಯದಲ್ಲಿ ಪವಿತ್ರ ಸ್ನಾನ ಮಾಡಿದರೆ ಜೀವನ ಪಾವನವಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾದರೆ ಎಲ್ಲಿ ಸ್ನಾನ ಮಾಡಬೇಕು? ಎಂಬ ಪ್ರಶ್ನೆಗಳು ಕಾಡುವುದು ಸಹಜವೇ.
ನಮಗೆಲ್ಲರಿಗೂ ಗೊತ್ತಿರುವಂತೆ ತುಲಾಸಂಕ್ರಮಣದಂದು ಕಾವೇರಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಉಕ್ಕಿ ಬರುವುದರೊಂದಿಗೆ ಭಕ್ತರಿಗೆ ದರ್ಶನ ನೀಡುತ್ತಾಳೆ. ಅಲ್ಲಿಂದ ಒಂದು ತಿಂಗಳ ಕಾಲ ಅಲ್ಲಿಯೇ ಇರುವ ಮೂಲಕ ಭಕ್ತರನ್ನು ಪಾವನಗೊಳಿಸುತ್ತಾಳೆ. ಅದನ್ನು ಹೊರತುಪಡಿಸಿದರೆ ಆಕೆ ಹರಿದು ಹೋಗುವ ಹಲವೆಡೆ ಪವಿತ್ರ ಕ್ಷೇತ್ರಗಳು ಸೃಷ್ಟಿಯಾಗಿದ್ದು, ಈ ಎಲ್ಲ ತಾಣಗಳಿಗೂ ಪೌರಾಣಿಕ ಹಿನ್ನಲೆ ಮತ್ತು ದೇವಾನು ದೇವತೆಗಳ ನಂಟು ಇರುವುದು ಕಂಡು ಬರುತ್ತದೆ. ಅದರಂತೆ ಹಾಸನ ಜಿಲ್ಲೆಯ ರಾಮನಾಥಪುರಕ್ಕೂ ನಂಟಿದೆ.

ಇಲ್ಲಿ ಹರಿಯುವ ಕಾವೇರಿ ನದಿ ಹಲವು ಮಹಿಮೆಯನ್ನು ಸೃಷ್ಟಿಸಿದ್ದಾಳೆ. ಇಲ್ಲಿ ಪತ್ನಿ ಕಾವೇರಿಯನ್ನು ಹಿಂಬಾಲಿಸಿಕೊಂಡು ಬಂದ ಪತಿ ಅಗಸ್ತ್ಯಮುನಿಗಳು ಶಿವಲಿಂಗವನ್ನು ಸೃಷ್ಟಿಸಿ ಪೂಜಿಸಿದ ಪವಿತ್ರ ಸ್ಥಳವೂ ಇದಾಗಿದೆ. ಹೀಗಾಗಿ ತುಲಾಸಂಕ್ರಮಣದ ಒಂದು ತಿಂಗಳ ಅವಧಿಯಲ್ಲಿ ಇಲ್ಲಿನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ನೆರವೇರಿಸಿದರೆ ಸಂಕಷ್ಟ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ.
ತುಲಾ ಮಾಸದ ಕಾವೇರಿ ಪುಣ್ಯ ಸ್ನಾನ
ಹಾಗೆನೋಡಿದರೆ, ಕಾವೇರಿ ನದಿಯಲ್ಲಿ ಇತರೆ ದಿನಗಳಲ್ಲಿ ಸ್ನಾನ ಮಾಡುವುದು ಪುಣ್ಯವೇ ಆಗಿದ್ದರೂ ತುಲಾಮಾಸದಲ್ಲಿ ಸ್ನಾನ ಮಾಡುವುದರಿಂದ ಹತ್ತು ಹಲವು ಪ್ರಯೋಜನಗಳಿದ್ದು, ಜೀವನ ಪಾವನವಾಗುತ್ತವೆ ಎಂಬ ನಂಬಿಕೆಯೂ ಇದೆ. ಇಷ್ಟೇ ಅಲ್ಲದೆ ನಮ್ಮ ದೋಷಗಳು ಕೂಡ ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇದೆ. ಇನ್ನು ತ್ರೇತ್ರಾಯುಗದಲ್ಲಿ ರಾಮಣನನ್ನು ಕೊಂದು ಸೀತೆಯನ್ನು ಲಂಕೆಯಿಂದ ಕರೆತಂದ ಶ್ರೀರಾಮನು ಬ್ರಹ್ಮಹತ್ಯಾದೋಷದ ಪರಿಹಾರಕ್ಕಾಗಿ ಇಲ್ಲಿ ಸ್ನಾನ ಮಾಡಿ ಶಿವನನ್ನು ಪೂಜಿಸಿ ದೋಷ ಕಳೆದು ಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಇದೆಲ್ಲದರ ನಡುವೆ ಉತ್ತರದಲ್ಲಿ ಗಂಗೆ ಹೇಗೆ ಪಾವನಳೋ ಹಾಗೆಯೇ ದಕ್ಷಿಣ ಗಂಗೆ ಎಂದು ಕರೆಯಿಸಿ ಕೊಳ್ಳುವ ಕಾವೇರಿ ನದಿ ಕೂಡ ಪಾವನವಾಗಿದ್ದು ಅದರಂತೆ ಗಂಗಾ ನದಿಯಲ್ಲಿ ಸ್ನಾನಮಾಡಿ ಕಾಶಿ ರಾಮೇಶ್ವರನ ದರ್ಶನ ಪಡೆದರೆ ಪಾಪನಿವಾರಣೆಯಾಗುತ್ತದೆ ಎಂಬ ನಂಬಿಕೆ ಹೇಗೆ ಉತ್ತರಭಾರತದಲ್ಲಿದೆಯೋ ಹಾಗೆಯೇ ದಕ್ಷಿಣದ ಕಾವೇರಿ ನದಿಯಲ್ಲಿ ಮಿಂದು ರಾಮೇಶ್ವರನ ದರ್ಶನ ಪಡೆದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯು ದಕ್ಷಿಣದವರಲ್ಲಿದೆ.

ಕಾವೇರಿಯೊಂದಿಗೆ ಸಪ್ತದೇವತೆಗಳ ಸಂಗಮ
ಸ್ಕಂದ ಪುರಾಣದಲ್ಲಿ ಬರುವ ಕಾವೇರಿ ಮಹಾತ್ಮೆಯಲ್ಲಿ ವರ್ಷಕೊಮ್ಮೆ ಅದರಲ್ಲೂ ತುಲಾಮಾಸದಲ್ಲಿ ಶ್ರೀ ಗಂಗಾದಿ ಸಮಸ್ತ ದೇವತೆಗಳು ತುಲಾಸಂಕ್ರಮಣದ ಶುಭ ಮುಹೂರ್ತದಲ್ಲಿ ಕಾವೇರಿಯನ್ನು ಸೇರಿ ಒಂದು ತಿಂಗಳು ಅವಳೊಡನೆ ನೆಲೆಸಿರುತ್ತಾರೆ ಎಂಬ ಉಲ್ಲೇಖವಿದೆ. ಅಲ್ಲದೆ ಪ್ರಾಚೀನ ಋಷಿಗಳು ಸ್ಮರಿಸುತ್ತಾ ಬಂದ ಸಪ್ತನದಿಗಳಲ್ಲಿ ಶ್ರೀ ಕಾವೇರಿಯು ಸೇರಿದ್ದಾಳೆ. ಈ ಕ್ಷೇತ್ರದ ಕಾವೇರಿ ನದಿಯಲ್ಲಿ ಪವಿತ್ರ ವಹ್ನಿಪುಷ್ಕರಣಿ, ಗಾಯಿತ್ರಿ ಶಿಲೆ, ಗೋಗರ್ಭ, ಮೇನಕಾಶಿಲೆ, ಹನುಮಂತನ ಗೋವು, ಕಪಿಲಾತೀರ್ಥ, ಕುಮಾರಧಾರಾ ತೀರ್ಥಗಳು ಇಲ್ಲಿರುವುದು ಮತ್ತೊಂದು ವಿಶೇಷವಾಗಿದೆ.
ಮೂಲಗಳ ಪ್ರಕಾರ ಕಾವೇರಿ ನದಿಯಲ್ಲಿ ಗೌತಮ ಮಹರ್ಷಿಗಳ ಪಾದದ ಗುರುತುಗಳ ಗೌತಮಶಿಲೆ ಇತ್ತಂದೂ ಅದನ್ನು ಕ್ರಿ.ಶ 1935ರ ಡಿಸೆಂಬರ್ 9ರಂದು ರಾಮನಾಥಪುರ ಮತ್ತು ಮಲ್ಲಿಪಟ್ಟಣ ನಡುವೆ ಸೇತುವೆಯನ್ನು ನಿರ್ಮಾಣ ಮಾಡುವ ವೇಳೆ ಬ್ರೀಟಿಷ್ ಅಧಿಕಾರಿ 5ನೆಯ ಜಾರ್ಜ್ನ ಅಜ್ಞೆಯಂತೆ ಸಿಡಿಮದ್ದು ಮೂಲಕ ಸ್ಪೋಟಿಸಲಾಯಿತೆಂದೂ ಶಿಲೆ ಸ್ಪೋಟಗೊಳ್ಳುವ ವೇಳೆ ಮೂರು ಬಾರಿ ರಾಮ-ಕೃಷ್ಣ-ಗೋವಿಂದ ಎಂಬ ಧ್ವನಿ ಕೇಳಿ ಬಂದಿತೆಂಬ ಮಾತುಗಳು ಜನವಲಯದಲ್ಲಿದೆ. ರಾಮನಾಥಪುರವು ಹಾಸನದಿಂದ 49ಕಿ.ಮೀ ದೂರದಲ್ಲಿದ್ದು, ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿದೆ.












Click it and Unblock the Notifications