ಯಾವ ಮಂತ್ರಿಗಳನ್ನು ಮನೆಗೆ ಕರೆಯಲ್ಲ; ಎಚ್. ಡಿ. ರೇವಣ್ಣ
ಹಾಸನ, ಆಗಸ್ಟ್ 17; "ಮುಖ್ಯಮಂತ್ರಿಗಳು ಒಂದು ಪಕ್ಷಕ್ಕೆ ಸೀಮಿತರಾದವರಲ್ಲ. ಅವರು ಏನೆಂದು ಪ್ರಮಾಣ ವಚನ ಸ್ವೀಕಾರ ಮಾಡಿರುತ್ತಾರೆ. ದಯವಿಟ್ಟು ಯಾವ ಸಚಿವರು ಸಹ ವಿಪಕ್ಷ ನಾಯಕರ ಮನೆಗೆ ಹೋಗಬೇಡಿ" ಎಂದು ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಹೇಳಿದರು.
ಮಂಗಳವಾರ ಹಾಸನದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, "ಸಚಿವರು ಬಂದರೆ ಒಂದು ಊಟ ಹಾಕ್ತಿವಿ. ಬರದಿದ್ದರೆ ಅದೇ ದುಡ್ಡು ಉಳೀತು ಬಿಡಿ ಅಂತೀವಿ. ನಾವು ನಮ್ಮ ಹಣ ಖರ್ಚು ಮಾಡಿ ಅವರಿಗೆ ಏಕೆ ಬೈಯೋಹಾಗೆ ಮಾಡಬೇಕು?"ಎಂದು ಪ್ರಶ್ನಿಸಿದರು.
"ಯಾವ ಮಂತ್ರಿಗಳನ್ನು ಮನೆಗೆ ಬನ್ನಿ ಎಂದು ಕರೆಯಲ್ಲ. ಬಂದರೆ ಚೆನ್ನಾಗಿ ನೋಡಿಕೊಳ್ಳುತ್ತೇವೆ. ಬರದೆ ಇದ್ದರೆ ನಮ್ಮಪ್ಪನ ಮನೆ ಗಂಟು ಏನೂ ಹೋಗಲ್ಲ" ಎಂದು ಎಚ್. ಡಿ. ರೇವಣ್ಣ ತಿಳಿಸಿದರು.
ಚುನಾವಣೆ ಬೇಕಾಗಿಲ್ಲ; "ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಬೇಕಿದೆ. ಆದರೆ ಎರಡೂ ರಾಜಕೀಯ ಪಕ್ಷಗಳಿಗೆ ಚುನಾವಣೆ ಬೇಕಾಗಿಲ್ಲ. ಚುನಾವಣಾ ಆಯೋಗ ಇದನ್ನು ಗಮನಿಸಬೇಕು" ಎಂದು ಎಚ್. ಡಿ. ರೇವಣ್ಣ ಹೇಳಿದರು.

ಎಚ್. ಡಿ. ರೇವಣ್ಣ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿಯನ್ನು ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದರು. ಇದಕ್ಕೆ ಪ್ರೀತಂ ಗೌಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಚಿವ ವಿ. ಸೋಮಣ್ಣ ಸಹ ಮುಖ್ಯಮಂತ್ರಿಗಳ ಜೊತೆ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದರು. ಪ್ರೀತಂ ಗೌಡ ಹೇಳಿಕೆಗೆ ಸೋಮಣ್ಣ ಅಸಮಧಾನ ವ್ಯಕ್ತಪಡಿಸಿದ್ದರು. ಬಳಿಕ ಪ್ರೀತಂ ಗೌಡ ಸಹ ವಾಗ್ದಾಳಿ ನಡೆಸಿದ್ದರು. ಯಡಿಯೂರಪ್ಪ ಮಧ್ಯ ಪ್ರವೇಶದಿಂದ ಜಟಾಪಟಿ ಅಂತ್ಯಗೊಂಡಿತ್ತು.
ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಎಚ್. ಕೆ. ಸುರೇಶ್ ಮಾತನಾಡಿ, "ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಭೇಟಿಯಾಗಿದ್ದು ತಪ್ಪು ಎನ್ನಲು ಆಗಲ್ಲ" ಎಂದು ಹೇಳಿದ್ದರು.
"ಈ ಹಿಂದೆ ಯಡಿಯೂರಪ್ಪ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರೂ ಸಹ ದೇವೇಗೌಡರ ಮನೆಗೆ ಭೇಟಿ ನೀಡಿದ್ದರು. ನಾಡಿನ ಮುಖ್ಯಮಂತ್ರಿಗಳು ದೂರದೃಷ್ಟಿಯಿಂದ ಏನೇ ಮಾಡಿದರೂ ಅದನ್ನು ಬೇಡ ಅನ್ನಲು ಆಗವುದಿಲ್ಲ" ಎಂದು ಎಚ್. ಕೆ. ಸುರೇಶ್ ಸ್ಪಷ್ಟಪಡಿಸಿದ್ದರು.
ಸಚಿವ ಗೋವಿಂದ ಕಾರಜೋಳ ಸಹ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. "ದೇವೇಗೌಡರು ಈ ದೇಶದ ಮಾಜಿ ಪ್ರಧಾನಿ, ಹಿರಿಯರು. ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಬಂದಿರುವುದು ಅದೊಂದು ಸೌಜನ್ಯದ ಭೇಟಿ ಅಷ್ಟೇ. ಅದು ಹೊಂದಾಣಿಕೆ ರಾಜಕಾರಣವಲ್ಲ" ಎಂದು ಹೇಳಿದ್ದರು.
ದೇವೇಗೌಡರ ಮನೆಗೆ ಹೋಗಿದ್ದು ಏಕೆ?; ಹಾಸನ ಶಾಸಕ ಪ್ರೀತಂ ಗೌಡ ಮಾತನಾಡಿ, "ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ದೇವೇಗೌಡರ ಮನೆಗೆ ಹೋಗಿದ್ದು ಏಕೆ ಎಂದು ಕಾರ್ಯಕರ್ತರು ಕೇಳಿದ್ದರು. ಇದರಿಂದಾಗಿ ಕಾರ್ಯಕರ್ತರಿಗೆ ನೋವಾಗಿದೆ. ಅದನ್ನೇ ನಾನು ಕೇಳಿದ್ದೇನೆ" ಎಂದು ಹೇಳಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪ್ರೀತಂ ಗೌಡ ಹೇಳಿಕೆ ಬಗ್ಗೆ ಮಾತನಾಡಿದ್ದರು. "ಪ್ರೀತಂ ಗೌಡ ನನ್ನ ಯುವ ಮಿತ್ರ. ಅವರು ಆತುರದಲ್ಲಿ ಮಾತನಾಡಿದ್ದಾರೆ. ದೇವೇಗೌಡರ ಜೊತೆ ಯಾವುದೇ ರಾಜಕೀಯ ಮಾತನಾಡಿಲ್ಲ" ಎಂದು ಸ್ಪಷ್ಟಪಡಿಸಿದ್ದರು.
"ಹಾಸನದ ಎಲ್ಲಾ ಬಿಜೆಪಿ ಪದಾಧಿಕಾರಿಗಳನ್ನು ಭೇಟಿ ಮಾಡಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವೆ" ಎಂದು ಮುಖ್ಯಮಂತ್ರಿಗಳು ಹೇಳಿದ್ದರು.












Click it and Unblock the Notifications