ಹಾಸನ; ಮತ್ತೆ ಮಳೆ, ಕೊಚ್ಚಿ ಹೋದ ರಸ್ತೆ, ಕೆರೆ ಏರಿ ಬಿರುಕು
ಹಾಸನ, ಡಿಸೆಂಬರ್ 05; ಹಾಸನ ಜಿಲ್ಲೆಯ ಹಲವೆಡೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಬಳಿ ರಸ್ತೆ ಕೊಚ್ಚಿ ಹೋಗಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ರಸ್ತೆ ಸಂಪರ್ಕ ಕಡಿತದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ.
ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತೋಟ, ಗದ್ದೆಗಳು ಜಲಾವೃತವಾಗಿವೆ. ರಸ್ತೆಯಲ್ಲಿ ನೀರು ರಭಸವಾಗಿ ಹರಿದ ಪರಿಣಾಮ ರಸ್ತೆ ಕೊಚ್ಚಿ ಹೋಗಿದೆ. ಹೀಗಾಗಿ ಸಾರಿಗೆ ಬಸ್ಗಳ ಸಂಚಾರವೂ ಸ್ಥಗಿತವಾಗಿದೆ. ಇನ್ನು ಮಳೆ ಅವಾಂತರದಿಂದ ಅರಸೀಕೆರೆ ತಾಲೂಕಿನ ಅಗ್ಗುಂದ ತಾಂಡಾದಲ್ಲಿ ವೃದ್ಧ ದಂಪತಿ ಪರದಾಟ ಪರದಾಡುತ್ತಿದ್ದಾರೆ.
ಮಳೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ದಿನಸಿ ವಸ್ತುಗಳು ನೀರುಪಾಲಾಗಿವೆ. ಹಾಸನ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಅರಸೀಕೆರೆ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಮನೆವೊಂದು ಕುಸಿದ್ದು ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರುಳಸಿದ್ದಪ್ಪ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು ಮನೆ ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ.

ಕೆರೆ ಬಳಿ ಬಿರುಕು ಬಿಟ್ಟ ಭೂಮಿ
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದಲ್ಲಿ ನೂರಾರು ಮೀಟರ್ ಭೂಮಿ ಬಿರುಕು ಬಿಟ್ಟಿದೆ. ಗಂಡಸಿ ಗ್ರಾಮದ ದೊಡ್ಡ ಕೆರೆಯ ಬಳಿಯೇ ಬಿರುಕು ಬಿಟ್ಟಿದೆ. ಘಟನಾ ಸ್ಥಳಕ್ಕೆ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 1.5 ಅಡಿ ಅಗಲ, 200 ಮೀ. ಉದ್ದಕ್ಕೆ 15 ಅಡಿ ಆಳ ಭೂಮಿ ಬಿರುಕು ಬಿಟ್ಟಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಮುಖಂಡರ ಕಿತ್ತಾಟ
ಕೆರೆ ಏರಿ ವಿಚಾರವಾಗಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಎದುರು ಕಾಂಗ್ರೆಸ್ ಮುಖಂಡರ ಕಿತ್ತಾಟ ನಡೆಸಿದ್ದಾರೆ. ಕೆರೆ ಏರಿ ಬಿರುಕು ಬಿಟ್ಟ ಸ್ಥಳಕ್ಕೆ ಭೇಟಿ ನೀಡಿದಾಗ ಘಟನೆ ನಡೆದಿದೆ. ಕೆರೆ ಏರಿ ಏನು ಆಗಿಲ್ಲ ಎಂದ ಕಾಂಗ್ರೆಸ್ ಮುಖಂಡ ನಾಗರಾಜ್, ಇದರಿಂದ ಸಿಟ್ಟಿಗೆದ್ದ ಮತ್ತೊಬ್ಬ ಮುಖಂಡ ಮಂಜಣ್ಣ ಊರು, ಕೆರೆ ವಿಚಾರದಲ್ಲಿ ರಾಜಕೀಯ ತರಬೇಡ, ಇಷ್ಟು ದಿನ ನೀನು ಏನು ಮಾಡುತ್ತಿದ್ದೆ, ನೀನೆ ಕೆರೆ ರಿಪೇರಿ ಮಾಡಿಸು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಅವಾಚ್ಯ ಶಬ್ದಗಳಿಂದ ನಾಗರಾಜ್ಗೆ ಮಂಜಣ್ಣ ನಿಂದಿಸಿದ್ದಾರೆ. ಶಾಸಕರೆದುರೇ ಪರಸ್ಪರ ಕಿತ್ತಾಡಿಕೊಂಡ ಕಾಂಗ್ರೆಸ್ ನಾಯಕರನ್ನು ಕಂಡು ಸ್ಥಳೀಯರು ಅಸಮಾಧಾನಗೊಂಡರು.

20 ವರ್ಷಗಳ ಬಳಿಕ ತುಂಬಿದ ಕೆರೆ
ಅರಸೀಕೆರೆ ತಾಲ್ಲೂಕಿನ ಗಂಡಸಿ ಕೆರೆ 20 ವರ್ಷಗಳ ಬಳಿಕ ತುಂಬಿದೆ. ಆದರೆ ನಿಧಾನವಾಗಿ ಕೆರೆ ಏರಿ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.125 ಎಕರೆ ವಿಸ್ತಾರವಾದ ಕೆರೆ ಇದಾಗಿದ್ದು, ಒಡೆಯುವ ಆತಂಕ ಎದುರಾಗಿದೆ. ಸ್ಥಳಕ್ಕೆ ಶಾಸಕ ಕೆ. ಎಂ. ಶಿವಲಿಂಗೇಗೌಡ, ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆ ಕೆಳಭಾಗದಲ್ಲಿ ಹೆಗ್ಗಟ್ಟ ಗ್ರಾಮದ ನೂರಾರು ಮನೆಗಳಿವೆ. ತಾತ್ಕಾಲಿಕವಾಗಿ ಕೆರೆ ಏರಿ ದುರಸ್ಥಿ ಮಾಡಿ. ತುಂಬಿರುವ ಕೆರೆ ನೀರು ಪೋಲಾಗದಂತೆ ತಡೆಯಿರಿ ಎಂದು ಜನರ ಮನವಿ ಮಾಡಿದರು.
Recommended Video

ಕುಸಿದು ಬಿದ್ದ ಮನೆ
ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅರಸೀಕೆರೆ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಮನೆವೊಂದು ಕುಸಿದ್ದು ಬಿದ್ದಿದೆ. ಮರುಳಸಿದ್ಧಪ್ಪ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಮನೆ ಕುಸಿದು ಬಿದ್ದರೂ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಮಣ್ಣುಪಾಲಾಗಿದ್ದು, ಕುಟುಂಬಸ್ಥರು ಕಂಗಲಾಗಿದ್ದಾರೆ.












Click it and Unblock the Notifications