ರಾಗಿ ಕಳ್ಳತನ ಆರೋಪ: ಆಣೆ ಮಾಡಲು ಧರ್ಮಸ್ಥಳಕ್ಕೆ ತೆರಳಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ
ಹಾಸನ, ಆಗಸ್ಟ್, 29: ಬಿಜೆಪಿ ನಾಯಕರು ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ರಾಗಿ ಕಳ್ಳ ಎಂದು ಆರೋಪ ಮಾಡಿದ್ದರು. ತಮ್ಮ ಮೇಲೆ ಮಾಡಿರುವ ಆರೋಪ ನಿರಾದಾರ ಎಂದು ದೇವರ ಮೇಲೆ ಆಣೆ ಮಾಡಲು ಇಂದು ಕೆ.ಎಂ.ಶಿವಲಿಂಗೇಗೌಡ ತಮ್ಮ ಅಪಾರ ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ತೆರಳಿದರು.
ಆಗಸ್ಟ್ 8ರಂದು ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ರಾಗಿ ಕಳ್ಳ ಎಂದು ಆರೋಪ ಮಾಡಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಬಿಜೆಪಿ ಎಂಎಲ್ಸಿ ರವಿಕುಮಾರ್, ಶಿವಲಿಂಗೇಗೌಡರನ್ನು ರಾಗಿ ಕಳ್ಳ, ಸಿಮೆಂಟ್ ಕಳ್ಳ, ಕಬ್ಬಿಣ ಕಳ್ಳ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಆಗಸ್ಟ್ 22ರಂದು ಕೆ.ಎಂ.ಶಿವಲಿಂಗೇಗೌಡರು ಅರಸೀಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ನಾನು ಒಂದು ಕೆಜಿ ರಾಗಿ ಕಳ್ಳತನ ಮಾಡಿಲ್ಲ. ಮಾಡಿದ್ದರೆ ದಾಖಲೆ ಸಮೇತ ಸಾಬೀತು ಮಾಡಲಿ. ಇಲ್ಲ ಧರ್ಮಸ್ಥಳಕ್ಕೆ ಬನ್ನಿ ದೇವರ ಮೇಲೆ ಆಣೆ ಮಾಡೋಣ ಎಂದು ಸವಾಲು ಹಾಕಿದ್ದರು.
ಬಿಜೆಪಿ ನಾಯಕರು ಬಾರದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅರಸೀಕೆರೆಯ ಮೈಸೂರು ರಸ್ತೆಯಿಂದ ನೂರಾರು ವಾಹನಗಳಲ್ಲಿ ತಮ್ಮ ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳ ಜೊತೆ ಕೆ.ಎಂ.ಶಿವಲಿಂಗೇಗೌಡ ಧರ್ಮಸ್ಥಳಕ್ಕೆ ತೆರಳಿದರು. ಶಾಸಕರ ತಂಡ ಅರಸೀಕೆರೆ, ಬಾಣಾವರ, ಬೇಲೂರು, ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳ ತಲುಪಲಿದ್ದು, ತಮ್ಮ ಮೇಲೆ ಬಿಜೆಪಿ ನಾಯಕರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ದೇವರ ಮೇಲೆ ಆಣೆ ಮಾಡಿ ವಾಪಾಸ್ಸಾಗಲಿದ್ದಾರೆ.

ಆಣೆ ಪ್ರಮಾಣ ಸವಾಲ್ ಹಾಕಿದ್ದ ಅರಸಿಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಕಾರ್ಯಕರ್ತರು ಹಾಗೂ ಅಭಿಮಾಗಳ ಜೊತೆ ಧರ್ಮ ಸ್ಥಳಕ್ಕೆ ಹೀಗಿದ್ದು, ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಲಿದ್ದಾರೆ.

ರಾಗಿ ಕಳ್ಳ ಎಂದು ಆರೋಪಿಸಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ನಾನು ಒಂದು ಹಿಡಿ ರಾಗಿಯನ್ನೂ ಕದ್ದಿಲ್ಲ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ. ಸತ್ಯ ಪರೀಕ್ಷೆ ನಡೆದೇ ಬಿಡಲಿ, ಆರೋಪ ಮಾಡಿದವರು ನನ್ನೆದುರು ಬರಲಿ. ತಮ್ಮ ವಿರುದ್ಧ ಬಿಜೆಪಿಯವರು ಮಾಡಿದ ಆರೋಪದ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಪ್ರತ್ಯುತ್ತರ ನೀಡಿದ ಶಾಸಕರು, 'ನಾನು ಒಂದು ಹಿಡಿ ರಾಗಿ ದುರುಪಯೋಗ ಮಾಡಿಕೊಂಡಿರುವುದನ್ನು ಸಾಬೀತು ಮಾಡಿ. ಆಮೇಲೆ ಅವರು ಯಾವುದೇ ಶಿಕ್ಷೆ ವಿಧಿಸಿದರೂ ಅನುಭವಿಸುತ್ತೇನೆ ಎಂದಿದ್ದರು.












Click it and Unblock the Notifications