Prajwal Revanna: ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರಜ್ವಲ್ ರೇವಣ್ಣ ಹೇಳಿದ್ದಿಷ್ಟು
ಹಾಸನ, ಆಗಸ್ಟ್, 01: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಇಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೆ ಪ್ರಜ್ವಲ್ ರೇವಣ್ಣ ಅವರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡಿದ್ದು, ಇದಕ್ಕೆ ಪ್ರಜ್ವಲ್ ರೇವಣ್ಣ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಹೊಳೆನರಸೀಪುರದಲ್ಲಿ ಈ ಬಗ್ಗೆ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, ಹೈಕೋರ್ಟ್ ತೀರ್ಪು ಕೊಟ್ಟಿದೆ ಎಂದು ಈಗ ನನಗೆ ಗೊತ್ತಾಯ್ತು. ಇನ್ನು ನನಗೆ ಪೂರ್ತಿ ವಿಚಾರ ತಿಳಿದಿಲ್ಲ. ಆದೇಶ ಕಾಫಿಯನ್ನು ನೋಡಿಲ್ಲ. ವಕೀಲರ ಜೊತೆ ಚರ್ಚಿಸಿದ ನಂತರ ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದರು.

ನಮಗೆ ಪ್ರೊಸಿಡಿಂಗ್ಸ್ ಏನಾಗಿದೆ ಅನ್ನೋದು ಇನ್ನು ಗೊತ್ತಿಲ್ಲ. ಆದ್ದರಿಂದ ವಕೀಲರ ಜೊತೆ ಮೊದಲು ಮಾತನಾಡುತ್ತೇನೆ. ಈಗಾಗಲೇ ಅವರಿಗೆ ಕರೆ ಮಾಡಿದ್ದೇನೆ. ನಮ್ಮ ವಕೀಲರು ಬ್ಯುಸಿ ಇದ್ದೇನೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಇನ್ನು ಎ ಮಂಜು ಅವರು ಏನು ಹೇಳಿಕೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಹಾಗೂ ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಅಂತಲೂ ಗೊತ್ತಿಲ್ಲ. ಅದನ್ನು ತಿಳಿದುಕೊಂಡ ನಂತರ ಪ್ರತಿಕ್ರಿಯಿಸುತ್ತೇನೆ. ಆದರೆ ಕೋರ್ಟ್ ಆದೇಶ ಕೊಟ್ಟಾಗ ಎಲ್ಲರೂ ಸ್ವೀಕಾರ ಮಾಡಲೇಬೇಕು. ಕಾನೂನಿಗಿಂತ ಮೇಲೆ ಯಾರೂ ಕೂಡ ಇಲ್ಲ ಎಂದರು.
ನಾನು ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರಿಂದ ಜಡ್ಜ್ಮೆಂಟ್ ಕಾಫಿಯನ್ನು ಇನ್ನು ನೋಡಿಲ್ಲ. ಜಡ್ಜ್ಮೆಂಟ್ ಕಾಫಿ ಬಂದ ನಂತರ ನಾನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಅಲ್ಲದೆ ದೊಡ್ಡವರು ರೇವಣ್ಣ ಸಾಹೇಬರು ಇಂದು ಹೊಳೆನರಸೀಪುರಕ್ಕೆ ಬರುತ್ತಿದ್ದಾರೆ. ಅವರ ಸಲಹೆಯನ್ನೂ ತೆಗೆದುಕೊಂಡು ಮುಂದುವರೆಯುತ್ತೇನೆ ಎಂದರು.












Click it and Unblock the Notifications