ತಮ್ಮ ವಿರುದ್ಧ ಬಿಜೆಪಿ ದೂರು, ಚುನಾವಣಾಧಿಕಾರಿ ಕುಮ್ಮಕ್ಕು ಎಂದ ರೇವಣ್ಣ
ಬೆಂಗಳೂರು, ಏಪ್ರಿಲ್ 29: ಅಕ್ರಮ ಮತದಾನ ಮಾಡಿಸಿದ್ದಾರೆಂದು ರೇವಣ್ಣ ವಿರುದ್ಧ ದೂರು ನೀಡಲು ಹಾಸನ ಜಿಲ್ಲಾಧಿಕಾರಿ ಕುಮ್ಮಕ್ಕೇ ಕಾರಣ ಎಂದು ಸಚಿವ ರೇವಣ್ಣ ಅವರು ಆರೋಪಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ನೀಡಿರುವ ಕುಮ್ಮಕ್ಕಿನಿಂದಲೇ ಬಿಜೆಪಿ ತಮ್ಮ ವಿರುದ್ಧ ಅಕ್ರಮ ಮತದಾನಕ್ಕೆ ಕುಮ್ಮಕ್ಕಿನ ದೂರು ನೀಡಿದೆ ಎಂದು ರೇವಣ್ಣ ಅವರು ಆರೋಪಿಸಿದ್ದಾರೆ.
ಹಾಸನದ ಡಿಸಿ ಪ್ರಿಯಾಂಕಾ ಅವರು ಒಂದು ಪಕ್ಷದ ಏಜೆಂಟ್ರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿರುವ ರೇವಣ್ಣ, ಹೊಸ ಡಿಸಿ ಅವರು ಇಲ್ಲಿಂದ ವರ್ಗಾವಣೆಯಾದ ಜಿಲ್ಲಾಧಿಕಾರಿಗಳನ್ನು ಭೇಟಿ ಆಗಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ರೋಹಿಣಿ ಸಿಂಧೂರಿ ಅವರನ್ನು ಭೇಟಿಯಾಗಿದ್ದರು ಎಂಬುದು ರೇವಣ್ಣ ಅವರ ಆರೋಪ.
ಚುನಾವಣಾ ಆಯೋಗದ ಅನುಮತಿ ಇಲ್ಲದೆ ಏಕೆ ಹಳೆಯ ಡಿಸಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು, ವರ್ಗಾವಣೆ ಆಗಿರುವ ಡಿಸಿ ಹೊಸ ಡಿಸಿಯನ್ನು ಚುನಾವಣೆ ಸಮಯದಲ್ಲಿ ಭೇಟಿ ಮಾಡಿದುದರ ಉದ್ದೇಶವೇನು? ಹೊಸ ಡಿಸಿಗೆ ಎಲ್ಲಿಂದ ಆದೇಶಗಳು ಬರುತ್ತಿವೆಯೆಂದು ಹೇಳಲಿ ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ಆರು ದಿನದ ನಂತರ ದೂರು ನೀಡಿದ್ದು ಏಕೆ: ರೇವಣ್ಣ
ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಅರೋಪಿಸುವ ಬಿಜೆಪಿ, ಚುನಾವಣೆ ಮುಗಿದು ಆರು ದಿನದ ಬಳಿಕ ದೂರು ನೀಡಿದೆ ಇದರ ಉದ್ದೇಶ ಏನು?, ಒಂದು ವೇಳೆ ಅಕ್ರಮ ಮತದಾನ ಮಾಡಿದ್ದಾಗಿದ್ದರೆ ಆ ಮತಗಟ್ಟೆಯಲ್ಲಿ ಶೇಕಡಾ 100ರಷ್ಟು ಮತದಾನವಾಗಬೇಕಿತ್ತು ಅಲ್ಲವೆ? ಈಗ ಅಲ್ಲಿ ಆಗಿರುವುದು 86% ಮತದಾನ ಎಂದು ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳನ್ನು ಬದಲಾಯಿಸಿ: ರೇವಣ್ಣ ಆಗ್ರಹ
ಇದೇ ಜಿಲ್ಲಾಧಿಕಾರಿಗಳು ಚುನಾವಣಾ ಎಣಿಕೆ ಸಂದರ್ಭದಲ್ಲಿಯೂ ಇದ್ದರೆ ನ್ಯಾಯಯುತವಾಗಿ ಎಣಿಕೆ ನಡೆಯುವುದಿಲ್ಲ ಎಂದು ರೇವಣ್ಣ ಹೇಳಿದರು. ಕೂಡಲೇ ಹಾಸನ ಜಿಲ್ಲಾಧಿಕಾರಿಯನ್ನು ಬದಲಾಯಿಸಬೇಕು ಎಂದು ರೇವಣ್ಣ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದರು.

ಅಕ್ರಮ ಮತಚಲಾಯಿಸಲು ರೇವಣ್ಣ ಕುಮ್ಮಕ್ಕು
ಏಪ್ರಿಲ್ 18 ರಂದು ನಡೆದ ಲೋಕಸಭೆ ಚುನಾವಣೆ ಕರ್ನಾಟಕದ ಮೊದಲ ಹಂತದ ಮತದಾನದ ವೇಳೆ ಹಾಸನ ಕ್ಷೇತ್ರದ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಮತಮಾಡಿದ ನಂತರ, ಅದೇ ಮತಗಟ್ಟೆಯಲ್ಲಿ ತಮ್ಮ ಬೆಂಬಲಿಗರು ಕೆಲವರು ಮತಚಲಾಯಿಸುವಂತೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ರೇವಣ್ಣ ಅವರ ಸೂಚನೆಯಂತೆ ಮತಚಲಾಯಿಸಿದ ಮೂವರು ಆ ಮತಗಟ್ಟೆಯಲ್ಲಿ ಮತಹೊಂದಿರಲೇ ಇಲ್ಲವೆಂದು ಬಿಜೆಪಿ ಬೂತ್ ಏಜೆಂಟ್ ಚುನಾವಣಾಧಿಕಾರಿಗೆ ದೂರು ನೀಡಿದ್ದರು, ಇದೇ ವಿಷಯಕ್ಕೆ ಬಿಜೆಪಿ ಸಹ ದೂರು ದಾಖಲಿಸಿತ್ತು.

ಅಕ್ರಮ ಮತದಾನ: ರೇವಣ್ಣಗೆ ಕಂಟಕ
ಪಡುವಲಹಿಪ್ಪಿ ಮತಗಟ್ಟೆಯ ವಿಡಿಯೋ ಚಿತ್ರೀಕರಣ ಗಮನಸಿದ ಚುನಾವಣಾಧಿಕಾರಿ ಅವರು ಆ ಬೂತ್ನಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲರನ್ನೂ ಕರ್ತವ್ಯ ಲೋಪದ ಆರೋಪದಡಿ ಅಮಾನತ್ತು ಮಾಡಿದ್ದಾರೆ. ಅಲ್ಲದೆ ಪ್ರಕರಣದ ಬಗ್ಗೆ ತನಿಖೆ ಸಹ ನಡೆಯುತ್ತಿದೆ. ಇದು ರೇವಣ್ಣ ಅವರಿಗೂ ಸಹ ಕಂಟಕ ತರುವ ಸಾಧ್ಯತೆ ಇದೆ. ಅಕ್ರಮ ಮತದಾನ ನಡೆದಿರುವುದು ಸಾಬೀತಾದರೆ ಮರುಚುನಾವಣೆಯ ಭಯವೂ ಇದೆ.












Click it and Unblock the Notifications