ದೇಶದ ಸಂಸ್ಕೃತಿ ಗೊತ್ತಿಲ್ಲದವರು ಭಾರತ್ ಜೋಡೋ ಮಾಡುತ್ತಿರುವುದು ದುರ್ದೈವ- ಸಚಿವ ನಾಗೇಶ್
ಹಾಸನ, ಅಕ್ಟೋಬರ್ 18: ಭಾರತ್ ಜೋಡೋ ಯಾತ್ರೆ ಯಾವ ಸಂದರ್ಭದಲ್ಲಿ ಆಗಿದೆ ಎನ್ನುವುದು ಜನರಿಗೆ ಗೊತ್ತಿದೆ. ಯಾವಾಗ ಹಿರಿಯ ನಾಯಕರು ಪಕ್ಷ ಬಿಡಲು ಶುರು ಮಾಡಿದರು, ಆಗ ಭಾರತ್ ಜೋಡೋ ಯಾತ್ರೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಹಿರಿಯ ನಾಯಕರು ನಲವತ್ತರಿಂದ ಐವತ್ತು ವರ್ಷ ಕಾಂಗ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರು ಕಾಂಗ್ರೆಸ್ನಿಂದ ಈ ದೇಶಕ್ಕೆ ಭವಿಷ್ಯ ಇಲ್ಲ ಎಂದು ಗೊತ್ತಾದಾಗ ಪಕ್ಷ ಬಿಡಲು ಶುರು ಮಾಡಿದ್ದಾರೆ ಎಂದು ಕಾಂಗ್ರೆಸ್ ಪರಿಸ್ಥಿತಿಯನ್ನು ಅಣುಕಿಸಿದರು.
ಇನ್ನು ಇದುವರೆಗೂ ಒಂದು ಕುಟುಂಬದ ಅಧ್ಯಕ್ಷತೆಯಲ್ಲಿದ್ದ ಪಕ್ಷದಲ್ಲಿ, ಈಗ ಆ ಅಧ್ಯಕ್ಷರ ವಿರುದ್ಧ ಮಾತನಾಡಲು ಅನೇಕ ಕಾಂಗ್ರೆಸ್ನ ನಾಯಕರು ತಯಾರಾದರು. ಈ ಸಂದರ್ಭದಲ್ಲಿ ಭಾರತ್ ಜೋಡೋ ಶುರುವಾಯಿತು ಎಂದು ಕಾಂಗ್ರೆಸ್ ಭಾರತ್ ಜೋಡೋ ವಿಚಾರದಲ್ಲಿ ವ್ಯಂಗ್ಯವಾಡಿದ್ದಾರೆ.

ಭಾರತ ಅಂದರೆ ಏನು ಅಂತ ಗೊತ್ತಿಲ್ಲದೇ ಇರುವವರಿಂದ ಭಾರತ್ ಜೋಡೋ
ಭಾರತ್ ಜೋಡೋ ಆರಂಭ ಮಾಡುವಂತಹ ಯಾವುದೇ ಸಂದರ್ಭ ದೇಶದಲ್ಲಿ ಇರಲಿಲ್ಲ. ದೇಶ ಒಡೆಯುತ್ತಿದೆ ಎಂದಾಗ ಸಮಾಜದ ಹಿರಿಯ ನಾಯಕರು ದೇಶವನ್ನು ಕೂಡಿಸುತ್ತೇನೆ ಅಥವಾ ಜಾತಿಗಳು, ಭಾಷೆ ಮಧ್ಯೆ ಸಂಘರ್ಷ ಇದ್ದರೆ ಅದನ್ನು ಸರಿ ಮಾಡುತ್ತೇನೆ ಎಂದರೆ ಅದಕ್ಕೆ ಅರ್ಥವಿದೆ. ಆದರೆ ದುರಾದೃಷ್ಟ, ಭಾರತ ಅಂದರೆ ಏನು ಅಂತ ಗೊತ್ತಿಲ್ಲದೇ ಇರುವವರು, ಈ ದೇಶದ ಸಂಸ್ಕೃತಿ ಅಂದರೆ ಏನು ಅಂತಾ ಗೊತ್ತಿಲ್ಲದಂತವರು. ಈ ಮಣ್ಣಿನ ವಾಸನೆ ಬಗ್ಗೆ ಗೊತ್ತಿಲ್ಲದಂತಹವರು ಭಾರತ್ ಜೋಡೋ ಮಾಡುತ್ತೇನೆ ಅಂತಾ ಹೊರಟಿರುವುದು ದುರ್ದೈವ ಸ್ಥಿತಿ ಎಂದು ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದರು.

ದೇಶದಲ್ಲಿ ವಿರೋಧ ಪಕ್ಷ ವಿಫಲವಾಗಿದೆ
ಗುಜರಾತ್ನಲ್ಲಿ ಬೈ ಎಲೆಕ್ಷನ್, ಹಿಮಾಚಲದಲ್ಲಿ ಚುನಾವಣೆ ಘೋಷಣೆಯಾಗಿದೆ. ಒಂದು ರಾಜಕೀಯ ಪಕ್ಷದ ನಾಯಕನಾಗಿ ಅಲ್ಲಿ ಏನಾದರೂ ಪ್ರವಾಸ ಮಾಡಿದರೆ, ಅವರನ್ನು ಒಂದು ರಾಷ್ಟ್ರೀಯ ಪಕ್ಷದ ನಾಯಕ ಅಂತಾ ಒಪ್ಪಿಕೊಳ್ಳಬಹುದಿತ್ತು. ಆದರೆ ಅವರು ಅಲ್ಲಿಗೆ ಹೋಗುತ್ತಿಲ್ಲ. ಗುಜರಾತ್ ಹಾಗೂ ಹಿಮಾಚಲ ಪ್ರವಾಸ ಮಾಡುತ್ತಿಲ್ಲ. ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ. ಹೀಗಾಗಿ ಅಲ್ಲಿ ಪ್ರವಾಸ ಮಾಡುತ್ತಿಲ್ಲ. ಕಾಂಗ್ರೆಸ್ನ ದುರ್ದೈದ ಸ್ಥಿತಿಯನ್ನು ತೋರಿಸುತ್ತದೆ ಇನ್ನು ನಾನು ವೈಯಕ್ತಿಕವಾಗಿ ಯಾರ ಬಗ್ಗೆನೂ ಮಾತನಾಡಲ್ಲ. ಆದರೆ ಒಂದು ರಾಷ್ಟ್ರೀಯ ಪಕ್ಷ, ಅದರಲ್ಲೂ ವಿರೋಧ ಪಕ್ಷ ದೇಶದಲ್ಲಿ ಏನು ಮಾಡಬೇಕು ಆ ಕೆಲಸವನ್ನು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿ.ಸಿ ನಾಗೇಶ್ ಕಿಡಿಕಾರಿದದರು.

ಆರ್ಎಸ್ಎಸ್ಗೂ ಭಾರತ್ ಜೋಡೋಗೂ ಏನು ಸಂಬಂಧ
ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಹೇಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ ಅನವಶ್ಯಕ ಶಬ್ದ ಬಳಸುತ್ತಾರೆ. ಮುಸ್ಲಿಂಮರ ಮತ ಸೆಳೆಯಲು ಮಾತನಾಡಿದ್ದಾರೆ. ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರೆ, ಆರ್ಎಸ್ಎಸ್ಗೂ ಭಾರತ್ ಜೋಡೋಗೂ ಏನು ಸಂಬಂಧ. ಆರ್ಎಸ್ಎಸ್ ಬಗ್ಗೆ ಮಾತನಾಡಿದರೆ ಮುಸ್ಲಿಂಮರ ಓಟು ನಮಗೆ ಬರುತ್ತದೆ ಎನ್ನುವ ಯೋಚನೆಗಳಿಂದ ಮತ್ತೊಮ್ಮೆ ತಪ್ಪು ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ದೇಶದ ಜನ ಅಭಿವೃದ್ಧಿ, ಏಳಿಗೆ ಪರ ಇದ್ದಾರೆ. ಈ ದೇಶದ ಜನಸಾಮಾನ್ಯರ ನೆಮ್ಮದಿಯನ್ನು ಯಾರು ನೋಡುತ್ತಾರೆ ಅವರ ಪರ ಇದ್ದಾರೆ. ಒಂದು ಖುಷಿಯ ವಿಚಾರ ಅಂದರೆ ಭಾರತ್ ಜೋಡೋ ಯಾತ್ರೆ ಮೂಲಕ ಒಂದು ತಾಲೂಕಿನ ಮೂರು, ನಾಲ್ಕು ಕಿಲೋಮೀಟರ್ ನಡೆಯುವ ಮೂಲಕ ಈ ದೇಶದ ಹೇಗಿದೆ ಅಂತಾ ರಾಹುಲ್ ಗಾಂಧಿಗೆ ಅರ್ಥವಾಗುತ್ತದೆ ಎಂದು ಹೇಳಿದರು.

ಜನರಿಗೆ ಭಾರತ್ ಜೋಡೋ ಬಗ್ಗೆ ಉತ್ಸಾಹ ಇಲ್ಲ.
ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಭಾರತ್ ಜೋಡೋ ಹೆಸರು ತೆಗೆದು ಹಾಕಿ ಕರ್ನಾಟಕ ಕಾಂಗ್ರೆಸ್ನ ಆಡಳಿತಕ್ಕಾಗಿ ಮಾಡುತ್ತಿರುವ ಯಾತ್ರೆ ಅಂತಾ ಇಟ್ಟುಕೊಳ್ಳಲಿ. ಜನರಿಗೆ ಇದರ ಬಗ್ಗೆ ಉತ್ಸಾಹ ಇಲ್ಲ ಎನ್ನುವುದಕ್ಕೆ ಸಾಕ್ಷಿ ಎಂದರೆ, ಯಾವುದೇ ತಾಲೂಕಿನಲ್ಲಿ ಅಲ್ಲಿಯ ಜನ ಸೇರದೆ ಇರುವುದು. ಬೇರೆ ಬೇರೆ ಕಡೆಯಿಂದ ಬಸ್ನಲ್ಲಿ ತುಂಬಿಕೊಂಡು ಬಂದು, ಯಾವುದೋ ಕಲ್ಯಾಣಮಂಟಪದಲ್ಲಿ ಮಲಗಿಸಿ, ಬೆಳಗ್ಗೆ ಎದ್ದು ಹೊರಡಿಸುವುದನ್ನು ನಾವು ನೋಡುತ್ತಿದ್ದೇವೆ. ಕಾಂಗ್ರೆಸ್ನ ಆಂತರಿಕ ಕಲಹಗಳು ಮತ್ತು ಅವರ ಕಾರ್ಯಕರ್ತರ ಉತ್ಸಾಹ ಹೋಗಿದ್ದ ಕಾರಣಕ್ಕಾಗಿ ಭಾರತ್ ಜೋಡೋ ಮಾಡುತ್ತಿದ್ದಾರೆ. ಎರಡೆರಡು ಕೈಯನ್ನು ಎಳೆದುಕೊಂಡು ಬಂದು ಜೋಡಿಸೋ ಪ್ರಯತ್ನವನ್ನು ರಾಹುಲ್ಗಾಂಧಿ ಗಾಂಧಿಯವರು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿರುದ್ಧ ಬಿ.ಸಿ ನಾಗೇಶ್ ಲೇವಡಿ ಮಾಡಿದ್ದಾರೆ.












Click it and Unblock the Notifications