ಶ್ರವಣಬೆಳಗೊಳದಲ್ಲಿ ಜನಪ್ರತಿನಿಧಿಗಳ ಇದೆಂಥ ಪ್ರತಿಷ್ಠೆ ಮೇಲಾಟ?
Recommended Video

ಶ್ರವಣಬೆಳಗೊಳ, ಫೆಬ್ರವರಿ 15: ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾ ವಿರಾಗಿಯ ಮಹಾಮಸ್ತಕಾಭಿಷೇಕಕ್ಕೆ ಎರಡು ದಿನವಷ್ಟೇ ಬಾಕಿ ಇದೆ. ಮಹಾಮಸ್ತಕಾಭಿಷೇಕ್ಕೆ ಈಗಾಗಲೇ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರಿಂದ ಚಾಲನೆ ದೊರೆತಾಗಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಶುಭ ಹಾರೈಸಿದ್ದಾರೆ.
ಫೆಬ್ರವರಿ 19ರಂದು ಶ್ರವಣಬೆಳಗೊಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಬರಲಿದ್ದಾರೆ. ಇನ್ನು ಮಹಾಮಸ್ತಕಾಭಿಷೇಕ ಕಣ್ಣೆದುರು ಇಟ್ಟುಕೊಂಡು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರವೂ ಚುನಾವಣೆ ಆಯೋಗದ ಮಧ್ಯಪ್ರವೇಶದಿಂದ ತಣ್ಣಗಾಗಿದೆ.
ಹೀಗೆ ಪ್ರತಿಷ್ಠಿತ ಹಾಗೂ ಶ್ರದ್ಧಾ- ಭಕ್ತಿಯ ಧಾರ್ಮಿಕ ಕಾರ್ಯಕ್ರಮವೊಂದು ಎಲ್ಲ ರೀತಿ ಸುಸೂತ್ರವಾಗಿ ಸಾಗುತ್ತಿದೆ ಎಂಬ ಭಾವನೆ ಮೂಡಿಸುವ ಹೊತ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣರ ಮಧ್ಯೆ ಕಮಿಷನ್ ಬಗ್ಗೆ ಮಾಡಿದ ಪರಸ್ಪರ ಆರೋಪ- ಪ್ರತ್ಯಾರೋಪಗಳು ಕಪ್ಪು ಚುಕ್ಕೆಯಂತೆ ಆಗಿದೆ.

ಬುಧವಾರ ಸಂಜೆ ನಡೆದ ಸಭೆಯಲ್ಲಿ ಪರಸ್ಪರ ಕಚ್ಚಾಡಿಕೊಂಡ ಪ್ರಸಂಗ ಮುಜುಗರ ತರಿಸಿದೆ. ನನಗೆ ಗೊತ್ತಿಲ್ಲದೇ ಟೆಂಡರ್ ಯಾಕೆ ನೀಡಿದೆ ಎಂದು ಸಚಿವ ಎ ಮಂಜು ಅವರು ಶಾಸಕ ಬಾಲಕೃಷ್ಣರನ್ನು ಪ್ರಶ್ನೆ ಮಾಡಿದರೆ, ಮಹಾ ಮಸ್ತಕಾಭಿಷೇಕದ ಟೆಂಡರ್ ಕೆಆರ್ ಡಿಸಿಎಲ್ಗೆ ನಮಗೆ ಗೊತ್ತಿಲ್ಲದೆ ಏಕೆ ನೀಡಿದಿರಿ ಎಂದು ಬಾಲಕೃಷ್ಣ, ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ.
ಈ ವಿಚಾರಕ್ಕೆ 15 ನಿಮಿಷಕ್ಕೂ ಹೆಚ್ಚು ಸಮಯ ಇಬ್ಬರೂ ಕಚ್ಚಾಡಿಕೊಂಡಿದ್ದಾರೆ. ಇವರಿಬ್ಬರ ಮಾತುಕತೆ ಮಾಧ್ಯಮದವರು, ಅಧಿಕಾರಿಗಳ ಎದುರಿಗೇ ನಡೆದಿದೆ. ಈ ಸಂದರ್ಭದಲ್ಲಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೂಡ ಸುಮ್ಮನೆ ನೋಡಿದ್ದಾರೆ.
ಮಹಾಮಸ್ತಕಾಭಿಷೇಕದ ಅಭೂತಪೂರ್ವ ಯಶಸ್ಸಿಗಾಗಿ ಹಗಲಿರುಳು ಎನ್ನದೇ ಶ್ರಮಿಸುತ್ತಿರುವ ಚಾರುಕೀರ್ತಿ ಭಟ್ಟಾರಕರಿಗೆ ಕಾಲಿಗೆ ಗಂಭೀರವಾದ ಪೆಟ್ಟಾಗಿದೆ. ಸದ್ಯಕ್ಕೆ ಅವರು ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಆದರೂ ಇದ್ಯಾವುದಕ್ಕೂ ತಲೆ ಕೆಡಿಸದೆ ಚಾರುಕೀರ್ತಿ ಭಟ್ಟಾರಕರು ವಿಂಧ್ಯಗಿರಿಯ 650 ಮೆಟ್ಟಿಲು ಬರಿಗಾಲಲ್ಲೇ ಹತ್ತಿ, ವಿಶೇಷವಾಗಿ ನಿರ್ಮಿಸಿದ ಅಟ್ಟಣಿಗೆ ನೋಡುತ್ತಾರೆ.
ಜೈನಕಾಶಿಗೆ ಬರುವವರಿಗೆ ಯಾವುದೇ ತೊಂದರೆ ಆಗದಂತೆ ತಂಗಲು ವ್ಯವಸ್ಥೆ ಮಾಡಿದ್ದು, ಉಪನಗರಗಳಿಗೆ ಹೋಗಿ ಮಧ್ಯರಾತ್ರಿಯಲ್ಲಿಯೂ ಪರಿಶೀಲಿಸುತ್ತಾರೆ. ಹೀಗೆ ಎಲ್ಲ ಕೆಲಸ- ಕಾರ್ಯ ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಮಹಾಮಸ್ತಕಾಭಿಷೇಕ ಅಂದರೆ ಕೆಲವರ ಪಾಲಿಗೆ ಜೋಳಿಗೆ ತುಂಬಿಸುವ ಜಾತ್ರೆ. ಆದರೆ ಚಾರುಕೀರ್ತಿ ಭಟ್ಟಾರಕರಿಗೆ ನಿದ್ದೆಯೂ ಮಾಡಲಾರದಂಥ ಜವಾಬ್ದಾರಿ ಹಾಗೂ ನಿರ್ವಹಿಸಲೇ ಬೇಕಾದ ಸವಾಲು.












Click it and Unblock the Notifications