ಹಾಸನ ಟಿಕೆಟ್ ವಿಚಾರದಲ್ಲಿ' ಶಕುನಿಗಳು ನನ್ನ ಅಣ್ಣನ ಬ್ರೈನ್ ವಾಶ್ ಮಾಡುತ್ತಿದ್ದಾರೆ': ಎಚ್ ಡಿ ಕುಮಾರಸ್ವಾಮಿ
ಹಾಸನ, ಏಪ್ರಿಲ್ 12 : ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹಾಸನ ಟಿಕೆಟ್ ವಿಚಾರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದೊಳಗಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಲೇಯಿದೆ. ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಮಹಾಭಾರತದ ಮಹಾಕಾವ್ಯದ ಕುರುಕ್ಷೇತ್ರದ ಯುದ್ಧವನ್ನು ಪ್ರಸ್ತಾಪಿಸಿ ಕೆಲವು 'ಶಕುನಿಗಳು' ಅಣ್ಣ ಎಚ್ ಡಿ ರೇವಣ್ಣನವರ ಬ್ರೈನ್ ವಾಶ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್.ಡಿ.ಕುಮಾರಸ್ವಾಮಿ, ತಮ್ಮ ತಂದೆ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಸಹ ತಮ್ಮ ಅಣ್ಣ, ಮಾಜಿ ಸಚಿವ ರೇವಣ್ಣ ಅವರನ್ನು ಮನವೊಲಿಸಲು ಸಾಧ್ಯವಾಗಲಿಲ್ಲ ಮತ್ತು ಇದು "ದುರದೃಷ್ಟ" ಎಂದು ಹೇಳಿದ್ದಾರೆ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವುದಿಲ್ಲ ಎಂದು ಕುಮಾರಸ್ವಾಮಿ ಪದೇ ಪದೇ ಸ್ಪಷ್ಟಪಡಿಸುತ್ತಿದ್ದರೂ ಮಣಿಯದೇ ಇರುವುದರಿಂದ ಹಾಸನ ಕ್ಷೇತ್ರ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ. ಅವರಿಗೆ ಪತಿ ಹಾಗೂ ಹಾಸನದಿಂದ ಲೋಕಸಭಾ ಸದಸ್ಯರಾಗಿರುವ ಅವರ ಪುತ್ರರಾದ ಪ್ರಜ್ವಲ್ ಮತ್ತು ಎಂಎಲ್ಸಿ ಸೂರಜ್ ರೇವಣ್ಣ ತಮ್ಮ ತಾಯಿಗೆ ಬೆಂಬಲ ನೀಡಿದ್ದಾರೆ. ಹಾಸನದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡಬೇಕು ಎಂಬುದು ತಮ್ಮ ಸ್ಪಷ್ಟ ನಿಲುವಾಗಿದ್ದು, ಇದರಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.
'ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ನಮ್ಮ ಕುಟುಂಬದವರು ಅಭ್ಯರ್ಥಿಯಾಗುವ ಅಗತ್ಯವಿಲ್ಲ ಎಂದು ಒಂದೂವರೆ ವರ್ಷಗಳ ಹಿಂದೆಯೇ ಹೇಳಿದ್ದೆ, ಹಾಸನದಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುವ ಧೈರ್ಯ ಪಕ್ಷಕ್ಕಿದೆ" ಎಂದಿದ್ದಾರೆ.
"ಹಾಸನದಲ್ಲಿ ಶಕುನಿಗಳಿದ್ದಾರೆ. ಕುಟುಂಬವನ್ನು ಹಾಳುಮಾಡಲು. ಶಕುನಿಗಳು ಮನಸ್ಸನ್ನು ಕಲಕುತ್ತಾರೆ. ಕುರುಕ್ಷೇತ್ರ ಯುದ್ಧ ಏಕೆ ಸಂಭವಿಸಿತು ಹೇಳಿ. ಶಕುನಿಯ ನಡತೆಯೇ ಇದು. ಇದು ಈ ಮಣ್ಣಿನ ಇತಿಹಾಸವಾಗಿದೆ ಮತ್ತು ಅಂತಹ ಸಂಗತಿಗಳು ಈ ದೇಶದಲ್ಲಿ ನಡೆದಿವೆ. ಶಕುನಿಗಳು ಕುಟುಂಬದಲ್ಲಿಲ್ಲ .ಆದರೆ ಬೇರೆ ಪಕ್ಷದವರು ಮತ್ತು ಅಭಿಮಾನಿಗಳು ಮತ್ತು ಹಿತೈಷಿಗಳು ಎಂದು ಹೇಳಿಕೊಳ್ಳುವವರ ರೂಪದಲ್ಲಿ ಬಂದಿದ್ದಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

"ಬೆಳಗ್ಗೆಯಿಂದ ಸಂಜೆಯವರೆಗೆ ಶಕುನಿಗಳು ರೇವಣ್ಣ ಮತ್ತು ಕುಟುಂಬದ ಬ್ರೈನ್ ವಾಶ್ ಮಾಡಿದ್ದಾರೆ. ಏನು ನಡೆಯುತ್ತಿದೆ ಎಂದು ನನಗೆ ತಿಳಿದಿದೆ. ನೀವು ದೇವೇಗೌಡರ ಕುಟುಂಬದ ಹಿತೈಷಿಗಳಂತೆ ನಟಿಸುತ್ತಾ, ವಾಸ್ತವದಲ್ಲಿ ಅದನ್ನು ಮುಗಿಸುವ ಉದ್ದೇಶವನ್ನು ಹೊಂದಿದ್ದರೆ, ನಾನು ಏನು ಮಾಡಲು ಸಾಧ್ಯ?" ಎಂದು ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರೇವಣ್ಣ ಅವರ ಮನವೊಲಿಸಲು ದೇವೇಗೌಡರು ಪ್ರಯತ್ನಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಅವರು ಪ್ರಯತ್ನಿಸಿದರು, ಆದರೆ ಇಂದು ರೇವಣ್ಣ ಅವರನ್ನು ಒಪ್ಪಿಸುವ ಶಕ್ತಿ ದೇವೇಗೌಡರಿಗೂ ಇಲ್ಲ, ಇದು ನಮ್ಮ ದುರಾದೃಷ್ಟ, ಏನು ಮಾಡಬೇಕು..? ಎಂದಿದ್ದಾರೆ.
ಹಾಸನ ಟಿಕೆಟ್ ವಿಚಾರವಾಗಿ ಕುಟುಂಬದಲ್ಲಿ ಬಿರುಕು ಮೂಡುವ ಲಕ್ಷಣಗಳಿದ್ದು, ವಯೋಸಹಜ ಕಾಯಿಲೆಯಿಂದ ಕೆಲ ದಿನಗಳಿಂದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದ ಗೌಡರು ಇತ್ತೀಚೆಗೆ ತಮ್ಮ ಇಬ್ಬರು ಪುತ್ರರು ಹಾಗೂ ಭವಾನಿ ಜತೆ ಮಾತುಕತೆ ನಡೆಸಿದರು. ಆದರೂ, ಈ ಬಿಕ್ಕಟ್ಟನ್ನು ಮುರಿಯಲು ಅವರು ವಿಫಲಲಾಗಿದ್ದಾರೆ.
ಕುಮಾರಸ್ವಾಮಿ ಮತ್ತು ರೇವಣ್ಣ ಇಬ್ಬರೂ ಹಾಸನ ಟಿಕೆಟ್ ವಿಚಾರದಲ್ಲಿ ಗೌಡರ ಮಾತೇ ಅಂತಿಮ ಎಂದು ಸಮರ್ಥಿಸಿಕೊಂಡಿದ್ದಾರೆ. ರೇವಣ್ಣ ಅವರು ಈ ವಿಷಯವಾಗಿ ಇಲ್ಲಿಯವರೆಗೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ರೇವಣ್ಣ ಅವರು ಈ ವಿಚಾರದಲ್ಲಿ ಎಲ್ಲೋ ಭಯದಲ್ಲಿರುವಂತೆ ತೋರುತ್ತಿದೆ. ಭವಾನಿ ಅವರ ಸ್ಪರ್ಧೆಯ ಆಧಾರದ ಬಗ್ಗೆ ನನಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
''ನನ್ನ ನಿಲುವು ಏನೆಂದು ಹಲವಾರು ಬಾರಿ ಹೇಳಿದ್ದೇನೆ. ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕು. ಸುಮಾರು ನಾಲ್ಕೂವರೆ ತಿಂಗಳಿಂದ ಈ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ದಿನದ 17 ಗಂಟೆ ಶ್ರಮಿಸಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ, ಗುರಿ ಸಾಧಿಸಲು ಅಡ್ಡಿಪಡಿಸುವ ಪ್ರಯತ್ನ ಮಾಡುವವರಿಗೆ ದೇವರು ಉತ್ತಮ ಬುದ್ಧಿಯನ್ನು ನೀಡಬೇಕು" ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ತಮ್ಮ ಹಾಗೂ ರೇವಣ್ಣ ನಡುವೆ ಪ್ರತಿಷ್ಠೆ, ಅಹಂಕಾರದ ಪ್ರಶ್ನೆಯೇ ಇಲ್ಲ ಎಂದ ಅವರು, ಪಕ್ಷ ಗೆಲ್ಲಬೇಕು ಎಂಬ ಉದ್ದೇಶದಿಂದ ನಾನು ಹೇಳುತ್ತಿರುವುದನ್ನು ಕ್ಷೇತ್ರದ ವಾಸ್ತವದ ಆಧಾರದ ಮೇಲೆ ಹೇಳುತ್ತಿದ್ದೇನೆ, ಪಕ್ಷಕ್ಕಿಂತ ಸ್ವಾರ್ಥವೇ ಮುಖ್ಯ. ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ದೇವೇಗೌಡರನ್ನು ರೇವಣ್ಣ ಭೇಟಿ ಮಾಡಿದ್ದಾರೆ.
ಹಾಸನವು ದೇವೇಗೌಡರ ತವರು ಜಿಲ್ಲೆಯಾಗಿದ್ದು, 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂ ಗೌಡ ಅವರು ಗೆದ್ದಿರುವ ಹಾಸನ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ಜಯಗಳಿಸಿತ್ತು. ಇದು ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಜಿಲ್ಲೆಯಾಗಿದ್ದು, ಕೇಸರಿ ಪಕ್ಷಕ್ಕೆ ಇದು ಮೊದಲ ಜಯವಾಗಿದೆ.












Click it and Unblock the Notifications