ಜೆಡಿಎಸ್ ಉಪ ಚುನಾವಣೆ ಸೋಲು ಒಪ್ಪಿಕೊಂಡಿದೆ; ಸಿದ್ದರಾಮಯ್ಯ
ಹಾಸನ, ನವೆಂಬರ್ 24 : " ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಮಸ್ಕಿ ಮತ್ತು ಬಸವಕಲ್ಯಾಣದಲ್ಲಿನ ಸೋಲನ್ನು ಜೆಡಿಎಸ್ ಪಕ್ಷ ಒಪ್ಪಿಕೊಂಡಿದೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಮಂಗಳವಾರ ಅರಸೀಕೆರೆ ತಾಲೂಕಿನ ಜಿ.ಮಂಗಳಾಪುರ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಸಿದ್ದರಾಮಯ್ಯ ಮಾತನಾಡಿದರು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಅವರು ಹಾಸನ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದರು.
"ಉಪ ಚುನಾವಣೆಗೆ ಘೋಷಣೆಗೂ ಮೊದಲೇ ಜೆಡಿಎಸ್ ಪಕ್ಷ ಸೋಲನ್ನು ಒಪ್ಪಿಕೊಂಡಿದೆ. ಆದ್ದರಿಂದಲೇ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ" ಎಂದು ಹೇಳಿದರು.
ಮಸ್ಕಿ ಮತ್ತು ಬಸವಕಲ್ಯಾಣ ಉಪ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ದುಡ್ಡಿನಿಂದ ಗೆಲ್ಲುತ್ತಿದ್ದಾರೆ
"ಆರ್. ಆರ್. ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ನಾನು ಸೇರಿದಂತೆ ಎಲ್ಲರೂ ಹೊಣೆಗಾರರು. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಉಪ ಚುನಾವಣೆ ಗೆದ್ದಿದ್ದೆ. ಆದರೆ, ಈಗ ಯಡಿಯೂರಪ್ಪ ಮತ್ತು ವಿಜಯೇಂದ್ರ ಕೋಟಿಗಟ್ಟಲೇ ದುಡ್ಡು ಕೊಟ್ಟು ಬೈ ಎಲೆಕ್ಷನ್ ಗೆಲ್ಲುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಆರೋಪಿಸಿದರು.

ವಿಜಯೇಂದ್ರ ಪ್ರಶ್ನೆ ಮಾಡಿದ ಸಿದ್ದರಾಮಯ್ಯ
"ಮಸ್ಕಿಯಲ್ಲಿ ನಮ್ಮ ಅಭ್ಯರ್ಥಿಯನ್ನು ಕಾಂಗ್ರೆಸ್ ಕರೆದುಕೊಂಡು ಹೋಗಿದೆ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಆದರೆ, ಪ್ರತಾಪ್ ಗೌಡ ಪಾಟೀಲ್ 2013ರಲ್ಲಿ ಯಾರ ಅಭ್ಯರ್ಥಿಯಾಗಿದ್ದರು?" ಎಂದು ಸಿದ್ದರಾಮಯ್ಯ ಬಿ. ವೈ. ವಿಜಯೇಂದ್ರರನ್ನು ಪ್ರಶ್ನಿಸಿದರು.

ಜೆಡಿಎಸ್ ಸೋಲೊಪ್ಪಿಕೊಂಡಿದೆ
"ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಅಭ್ಯರ್ಥಿ ಕಣಕ್ಕಿಳಿಸದೇ ಜೆಡಿಎಸ್ ಸೋಲೊಪ್ಪಿಕೊಂಡಿದೆ. ಜೆಡಿಎಸ್ ವೀಕ್ ಆಗಿರುವುದರಿಂದ ಅವರ ಮತಗಳು ಬಿಜೆಪಿಗೆ ಬರುತ್ತಿವೆ. ಇದರಿಂದಾಗಿ ಬಿಜೆಪಿ ಉಪ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತಿದೆ" ಎಂದು ಸಿದ್ದರಾಮಯ್ಯ ಹೇಳಿದರು.

ಎಲ್ಲರ ಅಭಿಪ್ರಾಯ ಪಡೆಯಲಿದ್ದೇವೆ
"ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸತೀಶ್ ಜಾರಕಿಹೊಳಿ ಅಭ್ಯರ್ಥಿ ಆಗಬೇಕು ಎಂದು ಚರ್ಚೆ ನಡೆದಿದೆ. ಎಂ. ಬಿ. ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯ ಪಡೆದು ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ" ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications