ಭದ್ರಕೋಟೆಯಲ್ಲಿ ಜೆಡಿಎಸ್ ಕೈ ತಪ್ಪಿದ ಅಧಿಕಾರ!
ಹಾಸನ, ಅಕ್ಟೋಬರ್ 09: ಹಾಸನ ನಗರಸಭೆ ಚುನಾವಣೆಯಲ್ಲಿ 17 ಸ್ಥಾನ ಗೆದ್ದು ಅಧಿಕಾರ ಹಿಡಿಯುವ ಉತ್ಸಾಹದಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ನಿರಾಸೆಯಾಗಿದೆ. ಜೆಡಿಎಸ್ ಭದ್ರಕೋಟೆಯಲ್ಲಿ 13 ಸ್ಥಾನ ಗೆದ್ದರೂ ಮೀಸಲಾತಿ ಬಲದಿಂದ ಬಿಜೆಪಿ ಅಧಿಕಾರ ಹಿಡಿಯಲಿದೆ.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ಕರ್ನಾಟಕ ಸರ್ಕಾರ ಗುರುವಾರ ಪ್ರಕಟಿಸಿದೆ. ಹಾಸನ ಜಿಲ್ಲೆಯಲ್ಲಿ ಹಾಸನ ಮತ್ತು ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಅಭ್ಯರ್ಥಿಗೆ ಮೀಸಲಿಡಲಾಗಿದೆ.
ಇದರಿಂದಾಗಿ ಹಾಸನ ಮತ್ತು ಅರಸೀಕೆರೆ ನಗರಸಭೆಯಲ್ಲಿ ಅಧಿಕಾರ ಹಿಡಿಯುವ ಜೆಡಿಎಸ್ ಉತ್ಸಾಹ ಕುಗ್ಗಿ ಹೋಗಿದೆ. ಎರಡೂ ಕಡೆ ಎಸ್ಟಿ ವರ್ಗದಿಂದ ಅಧ್ಯಕ್ಷರಾಗಲು ಯಾವುದೇ ಸದಸ್ಯರು ಇಲ್ಲ. ಇದರಿಂದಾಗಿ ಪಕ್ಷದ ನಾಯಕರಿಗೆ ನಿರಾಸೆಯಾಗಿದೆ.

ಹಾಸನ ನಗರ ಸಭೆ ಸದಸ್ಯ ಬಲ 35. ಜೆಡಿಎಸ್ 17 ಸ್ಥಾನದಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ 13 ಸ್ಥಾನದಲ್ಲಿ ಜಯಗಳಿಸಿದೆ. ಅರಸೀಕರೆ ನಗರಸಭೆಯಲ್ಲೂ ಜೆಡಿಎಸ್ 22 ಸ್ಥಾನದಲ್ಲಿ ಗೆದ್ದಿದೆ. ಬಿಜೆಪಿ ಐದು ಸ್ಥಾನ ಗೆದ್ದರೂ ಅಧ್ಯಕ್ಷ ಸ್ಥಾನ ಪಕ್ಷದ ಪಾಲಾಗಿದೆ.
ಬಿಜೆಪಿ ಶಾಸಕರ ಕೈವಾಡ; ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಕೈವಾಡದಿಂದ ಮೀಸಲಾತಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಜೆಡಿಎಸ್ ಆರೋಪ ಮಾಡುತ್ತಿದೆ. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು, "ಪ್ರಭಾಪ್ರಭುತ್ವದ ಕಗ್ಗೊಲೆಯಾಗಿದೆ" ಎಂದು ದೂರಿದ್ದಾರೆ.
"ರಾಜಕೀಯ ದುರುದ್ದೇಶದಿಂದ ಮೀಸಲಾತಿ ನಿಗದಿ ಮಾಡಲಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಸುಪ್ರೀಂಕೋರ್ಟ್ ತನಕ ಬೇಕಾದರೂ ಹೋಗುತ್ತೇವೆ ಹಿಂಬಂದಿ ರಾಜಕಾರಣ ಮಾಡುವವರು ಹೀಗೆ ಮಾಡಿದ್ದಾರೆ" ಎಂದು ಶಿವಲಿಂಗೇಗೌಡ ಹೇಳಿದ್ದಾರೆ.












Click it and Unblock the Notifications