ನಾನು ಶಿವಲಿಂಗೇಗೌಡರ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ: ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ?
ನಾನು ಶಿವಲಿಂಗೇಗೌಡರ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ ಎಂದು ಸಿದ್ದರಾಮಯ್ಯ ಹೀಗೆ ಹೇಳಲು ಕಾರಣವೇನು? ಇಲ್ಲಿದೆ ನೋಡಿ ವಿವರ.
ಹಾಸನ, ಮಾರ್ಚ್, 06: ನಾನು ಶಿವಲಿಂಗೇಗೌಡರ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ. ಹಾಗೆಯೇ ಶಾಸಕರಾಗಿ ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಕಾಂಗ್ರೆಸ್ ಸೇರಿದರೆ ಅವರೇ ಅರಸೀಕೆರೆ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಅವರಿಗೆ ನೀಡುವ ಒಂದೊಂದು ವೋಟು ಕೂಡ ನನಗೆ ಕೊಟ್ಟಂತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಶಿವಲಿಂಗೇಗೌಡರು ಬಡಕುಟುಂಬದಿಂದ ಬಂದು ಶಾಸಕರಾದವರಾಗಿದ್ದಾರೆ. ನೀವು ಅವರನ್ನು ಮೂರು ಬಾರಿ ಗೆಲ್ಲಿಸಿದ್ದೀರ. ಗೆಲ್ಲಿಸಿದ್ದು ಸಾರ್ಥಕ ಆಗಿದೆ ಎಂದರು. ವಿಧಾನಸಭಾ ಸದಸ್ಯರು ಆಗುವುದು ಶೋಕಿ ಮಾಡುವುದಕ್ಕೆ ಅಲ್ಲ, ಸದನದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು. ಜನರ ಪ್ರತಿನಿಧಿಯಾಗಿ ಅವರ ಸೇವೆ ಮಾಡಲು ಅಲ್ಲಿಗೆ ಹೋಗುತ್ತೇವೆ. ಇದನ್ನು ಶಿವಲಿಂಗೇಗೌಡರು ಶಾಸಕರಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಸದನದಲ್ಲಿ ಯಾವುದೇ ವಿಚಾರ ಬಂದರೂ ಕೂಡ ಭಾಗಿಯಾಗಿ ಮಾತನಾಡುತ್ತಾರೆ ಎಂದು ಶಿವಲಿಂಗೇಗೌಡರನ್ನು ಹೊಗಳಿದರು.

ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿದ್ದು ನಾನು
ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿದ್ದು ನಾನು, ಕುಮಾರಸ್ವಾಮಿ ಅಲ್ಲ. ಎತ್ತಿನಹೊಳೆ ಯೋಜನೆಯನ್ನೇ ಕುಮಾರಸ್ವಾಮಿ ವಿರೋಧಿಸಿದರು. ಉದ್ಘಾಟನೆಗೂ ಕೂಡ ಕುಮಾರಸ್ವಾಮಿ ಅವರು ಬರಲಿಲ್ಲ. ಶಿವಲಿಂಗೇಗೌಡ ಅವರನ್ನೂ ಹೋಗದಂತೆ ಹೇಳಿದ್ದರು. ಆದರೂ ಶಿವಲಿಂಗೇಗೌಡ ಬಂದಿದ್ದರು. ಈಗ ಎತ್ತಿನಹೊಳೆ ಯೋಜನೆ ನಿಂತಿದೆ. ಶಿವಲಿಂಗೇಗೌಡ ನನ್ನ ಹೊಗಳಿದ ಎನ್ನುವ ಒಂದೇ ಕಾರಣಕ್ಕೆ ಜೆಡಿಎಸ್ನವರು ದೂರ ಮಾಡಿದರು ಎಂದರು.
ನಮ್ಮ ಪಕ್ಷಕ್ಕೆ ಬಂದು ಸೇರಿಕೊಳ್ಳಿ
ನಾನು ನಿನಗೆ ಆಹ್ವಾನ ಕೊಡುತ್ತೇನೆ. ನಮ್ಮ ಪಕ್ಷಕ್ಕೆ ಬಂದು ಸೇರಿಕೊಳ್ಳಿ. ಈ ಬಗ್ಗೆಯೂ ಅವರ ಜೊತೆ ನಾನು ಮಾತನಾಡಿದ್ದೇನೆ. ಅವರು ನಮ್ಮ ಜೊತೆ ಬರುವುದಕ್ಕೆ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿಯನ್ನು ನಾವು ಬೆಂಬಲ ನೀಡಿ ಸಿಎಂ ಮಾಡಿದ್ದೆವು. ಅವರು ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಇರುವುದಕ್ಕೆ ಶುರು ಮಾಡಿದರು. ಅವರನ್ನು ಭೇಟಿ ಆಗುವುದಕ್ಕೆ ಹೋದರೆ ಸೆಕ್ಯೂರಿಟಿಗಳು ಬಿಡುತ್ತಿರಲಿಲ್ಲ. ಹಾಗಾಗಿಯೇ ಅವರು ಅಧಿಕಾರ ಕಳೆದುಕೊಂಡರು. ಅಲ್ಲಮಪ್ರಭು ಹೇಳಿದ್ದಾರೆ, ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನು ಅಲ್ಲ ಅಂತಾ ಹೇಳಿ ಲೇವಡಿ ಮಾಡಿದರು.

ಆರ್ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಬಹಳ ಜನ ದೇಶ ಭಕ್ತಿ ಬಗ್ಗೆ ಪಾಠ ಹೇಳುವುದಕೆ ಶುರುಮಾಡಿದಾರೆ. ಬಿಜೆಪಿ ಆರ್ಎಸ್ಎಸ್ನವರು ಯಾರೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರಲ್ಲಿ ಯಾರಾದರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಹೇಳಿ ನೋಡೋಣ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದರು. ನರೇಂದ್ರ ಮೋದಿ, ಅಮಿತ್ ಶಾ ಪುಂಕವಾಗಿ ದೇಶಪ್ರೇಮದ ಬಗ್ಗೆ ಮಾತಾಡುತ್ತಾರೆ ಎಂದು ಹರಿಹಾಯ್ದರು.
ಹಿಂದೆ ನಮ್ಮ ಅಪ್ಪ ಗ್ರಾಮ ಪಂಚಾಯತಿ ಚುನಾವಣೆಗೆ ನಿಂತು ಸೋತಿದ್ದರು. ನಾನು ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಕೇವಲ ಮೂರುವರೆ ಸಾವಿರದಲ್ಲಿ ಚುನಾವಣೆ ಮಾಡಿದ್ದೆ, ಆದರೆ ಈಗ ಮಹಾತ್ಮ ಗಾಂಧಿ ಕರೆತಂದು ಚುನಾವಣೆಗೆ ನಿಲ್ಲಿಸಿದರೂ ಕೂಡ ನಿಮ್ಮತ್ರ ಹಣ ಇದ್ಯಾ ಅಂತಾ ಕೇಳುತ್ತಾರೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ
ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಸುಮ್ಮನೆ ಪಂಚರತ್ನ ಯಾತ್ರೆ ಅಂತಾ ದುಡ್ಡಿದೆ ಅಂತಾ ಓಡಾಡುತ್ತಾ ಇದ್ದಾರೆ. ಅವರಿಗೆ ಮತ ನೀಡಿದರೆ ಅದು ವೇಸ್ಟ್ ಆಗುತ್ತದೆ. ಆ ಮತಗಳು ಬಿಜೆಪಿಗೆ ಹೋಗುತ್ತವೆ. ಬಿಜೆಪಿ, ಜೆಡಿಎಸ್ ಹಿಂದುಳಿದ, ದಲಿತರ, ಶೋಷಿತರ, ಅಲ್ಪ ಸಂಖ್ಯಾತರ ಪರ ಇರುವುದಿಲ್ಲ. ಬಿಜೆಪಿಯವರು ಇದುವರೆಗೆ ಬಡವರಿಗೆ ಒಂದು ಮನೆಯನ್ನು ಸಹ ಕೊಟ್ಟಿಲ್ಲ. ಹಾಗಿದ್ದರೆ ಇವರನ್ನು ಒದ್ದು ಓಡಿಸಬೇಕೋ ಬೇಡವೋ? ಅಧಿಕಾರದಿಂದ ಇಳಿಸಬೇಕೋ ಬೇಡವೋ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೆ ನಾವು ಅಧಿಕಾರಕ್ಕೆ ಬಂದರೆ ಎರಡೇ ವರ್ಷಕ್ಕೆ ಚಿಕ್ಕಬಳ್ಳಾಪುರ, ಕೋಲಾರ ಸೇರಿ ಉದ್ದೇಶಿತ ಜಿಲ್ಲೆಗೆ ನೀರು ಕೊಡುತ್ತೆವೆ ಎಂದು ಘೋಷಣೆ ಮಾಡಿದರು. ಇನ್ನು ಮಾಡಾಳು ವಿರೂಪಾಕ್ಷಪ್ಪ ಮಗನ ಲೋಕಾಯುಕ್ತ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಾಕ್ಷಿ ಕೇಳುತ್ತಿದ್ದರಲ್ಲ ಇದಕ್ಕಿಂತ ಸಾಕ್ಷಿ ಬೇಕಾ? ಒಂದೇ ಒಂದು ಕ್ಷಣ ನೀವು ಅಧಿಕಾರದಲ್ಲಿ ಇರಬಾರದು. ಮೊದಲು ರಾಜೀನಾಮೆ ನೀಡಿ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಮಗ ಮಾತ್ರ ಅಲ್ಲ. ಮಾಡಾಳು ವಿರೂಪಾಕ್ಷಪ್ಪನನ್ನೂ ಬಂಧಿಸಿ ಎಂದು ಒತ್ತಾಯಿಸಿದರು.












Click it and Unblock the Notifications