ಹಾಸನ- ಬೆಂಗಳೂರು ರೈಲಿನ ವೇಳಾಪಟ್ಟಿ, ಏನೆಂದು ಹೆಸರು?
ಬೆಂಗಳೂರು-ಹಾಸನ ರೈಲಿಗೆ ಯಾವ ಹೆಸರಿಡಬಹುದು? ಹಾಸನ ಹಾಗೂ ಬೆಂಗಳೂರು ರೈಲಿನ ವೇಳಾಪಟ್ಟಿ ಇಲ್ಲಿದೆ
ಹಾಸನ, ಮಾರ್ಚ್ 26: ಹಾಸನ-ಬೆಂಗಳೂರು(ಯಶವಂತಪುರ) ಮಾರ್ಗದ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಭಾನುವಾರದಂಡು ಚಾಲನೆ ನೀಡಿದ್ದಾರೆ. ಹಲವು ದಶಕಗಳ ಕನಸು ಈಡೇರಿದ ಖುಷಿಯಲ್ಲಿ ಹಾಸನ ಭಾಗದ ಜನತೆ ಸಂಭ್ರಮಾಚರಣೆಯಲ್ಲಿದ್ದಾರೆ. ರೈಲಿನ ವೇಳಾಪಟ್ಟಿ, ರೈಲಿಗೆ ಏನು ಹೆಸರಿಡಬೇಕು ಎಂಬ ಮಾಹಿತಿ ಇಲ್ಲಿದೆ.
1996ರಲ್ಲಿ ಪ್ರಧಾನಿ ದೇವೇಗೌಡರ ಸಚಿವ ಸಂಪುಟದಲ್ಲಿ ಅಂದಿನ ರೈಲ್ವೆ ಸಚಿವರಾದ ಜಾಫರ್ ಷರೀಫ್ ಅವರು ರಾಜಧಾನಿಯಿಂದ ಹಾಸನಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಇದಾದ ಬಳಿಕೆ ಹಲವು ಬಾರಿ ಯೋಜನೆಯ ಕಾಮಗಾರಿಗೆ ಚಾಲನೆ ಸಿಕ್ಕರೂ ವೇಗ ಕುಂಠಿತವಾಗಿತ್ತು. [ಎರಡು ದಶಕಗಳ ಕನಸು ನನಸು: ಹಾಸನ -ಬೆಂಗಳೂರು ರೈಲಿಗೆ ಚಾಲನೆ]
ಸಮಯ: ಬೆಳಗ್ಗೆ 6.30ಕ್ಕೆ ಹೊರಡುವ ರೈಲು 9.15ಕ್ಕೆ ಬೆಂಗಳೂರಿಗೆ ತೆರಳಲಿದೆ. ಸಂಜೆ 6.15ಕ್ಕೆ ಮತ್ತೆ ಬೆಂಗಳೂರಿನಿಂದ ತೆರಳಲಿದೆ.
ಈ ಹೊಸ ರೈಲು ಮಾರ್ಗದಿಂದ ಬೆಂಗಳೂರು-ಹಾಸನದ ಪ್ರಯಾಣ 50 ಕಿ.ಮೀ ನಷ್ಟು ತಗ್ಗಲಿದ್ದು, 167 ಕಿ.ಮೀ ದೂರ ಕ್ರಮಿಸಬಹುದಾಗಿದೆ. ಬೆಂಗಳೂರು ಮತ್ತು ಮಂಗಳೂರು ಸಂಚಾರದ ಸಮಯ ಸಹ ಕಡಿಮೆಯಾಗಲಿದೆ.
ನಿಲ್ದಾಣಗಳು: ಈ ರೈಲು ಚನ್ನರಾಯಪಟ್ಟಣ, ಬಿ.ಜಿ. ನಗರ, ಶ್ರವಣಬೆಳಗೊಳ, ಯಡಿಯೂರು, ಕುಣಿಗಲ್, ನೆಲಮಂಗಲ, ಚಿಕ್ಕಬಾಣಾವರಗಳಲ್ಲಿ ನಿಲ್ದಾಣ ಹೊಂದಿದೆ.
ಏನೆಂದು ಹೆಸರು? : ಈ ರೈಲಿಗೆ ಹೇಮಾವತಿ, ಹಾಸನಾಂಬೆ ಅಥವಾ ಗೊಮ್ಮಟೇಶ್ವರ ಎಂದು ನಾಮಕರಣ ಮಾಡಬೇಕೆಂದು ಮನವಿ ಬಂದಿದೆ.ಕೇಂದ್ರ ರೈಲ್ವೆ ಸಚಿವರು ಗೊಮ್ಮಟೇಶ್ವರ ರೈಲು ಎಂದು ಹೆಸರಿಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಅಧಿಕೃತವಾಗಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ: ಬೆಂಗಳೂರು-ಮಂಗಳೂರು ರೈಲಿಗೆ ಗೊಮ್ಮಟೇಶ್ವರ ರೈಲು ಎಂದು ಹೆಸರಿಡುವುದು ಸೂಕ್ತ. ಯಶವಂತಪುರ-ಹಾಸನ ರೈಲಿಗೆ ಹೇಮಾವತಿ ಹೆಸರಿಡಬೇಕೆಂಬ ಬೇಡಿಕೆ ಇದೆ. ಅದನ್ನು ನಂತರ ನಿರ್ಧರಿಸೋಣ ಎಂದಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ : ಬೆಂಗಳೂರು-ಹಾಸನ ರೈಲಿಗೆ ಹೇಮಾವತಿ, ಬೆಂಗಳೂರು-ಮಂಗಳೂರು ರೈಲಿಗೆ ಗೊಮಟೇಶ್ವರ, ಬೆಂಗಳೂರು-ಅರಸೀಕೆರೆ-ಮಂಗಳೂರು ರೈಲಿಗೆ ಕಾಲಭೈರವೇಶ್ವರ ಎಂದು ಹೆಸರಿಡುವಂತೆ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದರು.
ಖರ್ಚು ವೆಚ್ಚ: 1997ರಲ್ಲಿ ಬೆಂಗಳೂರು ಮತ್ತು ಹಾಸನ ರೈಲು ಮಾರ್ಗ ನಿರ್ಮಾಣಕ್ಕೆ 400 ಕೊಟಿ ರೂ. ಮಂಜೂರಾಗಿತ್ತು. 20 ವರ್ಷಗಳ ಬಳಿಕ ಯೋಜನೆ ಸಂಪೋರ್ಣವಾಗಿದ್ದು, 1300 ಕೋಟಿ ಖರ್ಚಾಗಿದೆ.(ಒನ್ಇಂಡಿಯಾ ಸುದ್ದಿ)