ಟೊಮೆಟೊ ಬೆಳೆದು 20 ಲಕ್ಷ ರೂ ಆದಾಯ ಗಳಿಸಿದ ಹಾಸನ ಪೊಲೀಸ್ ಕಾನ್ಸ್ಟೇಬಲ್
ಹಾಸನ, ಜುಲೈ 14: ಮಳೆ ಹಾಗೂ ಇನ್ನಿತರ ಕಾರಣಗಳಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೆಚ್ಚಾಗಿದ್ದು, ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಾರಿ ಟೊಮೆಟೊ ರೈತನ ಹಾಗೂ ವ್ಯಾಪಾರಿಗಳ ಕೈ ಹಿಡಿದಿದೆ. ಹೀಗಾಗಿ ರೈತರು ಟೊಮೆಟೊ ಬೆಳೆಯತ್ತ ಹೆಚ್ಚಿನ ಗಮನ ಕೊಡುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಹಾಸನ ಜಿಲ್ಲೆಯ ಪೊಲೀಸರೊಬ್ಬರು ಟೊಮೆಟೊ ಬೆಳೆಯಿಂದ ಉತ್ತಮ ಆದಾಯಗಳಿಸಿರುವುದನ್ನು ಬಹಿರಂಗಪಡಿಸಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ ಬೈರೇಶ್ ವೃತ್ತಿಯಲ್ಲಿ ಪೊಲೀಸ್ ಪ್ರವೃತ್ತಿಯಲ್ಲಿ ರೈತನಾಗಿದ್ದಾರೆ.

ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಈ ಬಾರಿ ತಮ್ಮ ಒಂದು ಎಕರೆ ಆರು ಗುಂಟೆ ಜಾಗದಲ್ಲಿ ಟೊಮೊಟೊ ಬೆಳೆದಿದ್ದು, ನಿರೀಕ್ಷೆಗೂ ಮೀರಿದ ಆದಾಯಗಳಿಸಿದ್ದಾರೆ. ಟೊಮೆಟೊ ದರ ಏರಿಕೆ ದಿನಗಳೂ ಸೇರಿದಂತೆ ಬೈರೇಶ್ ಟೊಮೆಟೊ ಬೆಳೆಯಿಂದ ಈವರಗೆ 20 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಪೊಲೀಸ್ ಕೆಲಸದ ಒತ್ತಡದ ನಡುವೆಯೂ ಒಳ್ಳೆಯ ಕೃಷಿ ಮಾಡಿ ಲಕ್ಷಾಂತರ ರೂಪಾಯಿ ಲಾಭ ಪಡೆದ ಬೈರೇಶ್, ಇನ್ನೂ ಸಾವಿರ ಬಾಕ್ಸ್ ಟೊಮೆಟೊ ಹಣ್ಣು ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಪೊಲೀಸ್ ಆಗಿರುವ ಬೈರೇಶ್ ಅವರ ಜಮೀನಿಗೂ ಕಳ್ಳರ ಕಾಟ ತಪ್ಪಿದಲ್ಲ.

ಇತ್ತೀಚಿಗೆ ಒಂದು ದಿನ ಬೈರೇಶ್ ಅವರ ಜಮೀನಿಗೆ ನುಗ್ಗಿರುವ ಕಳ್ಳರು ನೂರಕ್ಕೂ ಹೆಚ್ಚು ಬಾಕ್ಸ್ ಟೊಮೊಟೊ ಕಳ್ಳತನ ಮಾಡಿದ್ದಾರೆ. ಆ ನಂತರದಲ್ಲಿ ಎಚ್ಚೆತ್ತುಕೊಂಡ ಬೈರೇಶ್ ರಾತ್ರಿಯಿಡಿ ಹೊಲದಲ್ಲಿ ಕಾವಲು ಹಾಕಿ ಟೊಮೊಟೊ ಉಳಿಸಿಕೊಂಡಿದ್ದಾರೆ. ಮಳೆ ಕೊರತೆ, ರೋಗ ಭಾದೆ ಹಾಗೂ ಕಳ್ಳರ ಕಾಟ ನಡುವೆಯೂ ಬೈರೇಶ್ ಟೊಮೊಟೊ ಬೆಳೆದು ಭರ್ಜರಿ ಆದಾಯ ಗಳಿಸಿದ್ದು, ಜಿಲ್ಲೆ ಹಾಗೂ ಅಂತರ್ಜಿಲ್ಲೆಯ ವರ್ತಕರು ಇವರನ್ನು ಸಂರ್ಕಿಸಿ ಟೊಮೊಟೊ ಖರೀದಿ ಮಾಡುತ್ತಿದ್ದಾರೆ.
ಇನ್ನು ಟೊಮೆಟೊ ದರ ಹೆಚ್ಚುತ್ತಿದ್ದಂತೆ ರೈತರ ಜಮೀನಿಗೆ ಕಳ್ಳರ ಕಾಟವು ಕೂಡ ಹೆಚ್ಚಾಗಿದೆ. ಇತ್ತೀಚಿಗಷ್ಟೇ ಹಾಸನದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಟೊಮೊಟೊ ಕಳ್ಳತನ ನಡೆದಿತ್ತು. ಗೋಣಿ ಸೋಮನಹಳ್ಳಿಯ ಧರಣಿ ಎನ್ನುವ ರೈತನ ಜಮೀನಿನಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟೊಮೆಟೊವನ್ನು ಕಳ್ಳರು ಕದ್ದೊಯ್ದಿದ್ದರು. ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 50 ರಿಂದ 60 ಚೀಲದಷ್ಟು ಟೊಮೆಟೊ ಕಳ್ಳತನ ಮಾಡಿ ಪರಾರಿಯಾಗಿದ್ದರು. ಘಟನೆ ಸಂಬಂಧ ಹಳೇಬೀಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.












Click it and Unblock the Notifications