ಹಾಸನದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರ್ಭಟಕ್ಕೆ ಬೆಚ್ಚಿದ ಭ್ರಷ್ಟರು
ಹಾಸನ, ಜನವರಿ 24: ಹಾಸನ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆ ಸಹಮತಿ ಇಲ್ಲದೆ ಬಿ.ಎಂ.ರಸ್ತೆಯ ಅಭಿವೃದ್ದಿ ಸಂಬಂದ ರಸ್ತೆಯನ್ನು ಅಗೆದು ತುರ್ತಾಗಿ ಪೂರ್ಣಗೊಳಿಸದೆ ಸಾರ್ವಜನಿಕರಿಗೆ ನೀಡುತ್ತಿರುವ ಮೂಲಭೂತ ಸೌಕರ್ಯಗಳಲ್ಲಿ ತೊಂದರೆ ಆಗುತ್ತಿರುವ ಬಗ್ಗೆ ಕಾರಣ ಕೇಳಿ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಧಿಕಾರಿ ರೋಹಿಣಿ ಸಿಂಧೂರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾದ ಅಭಿಯಂತರರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದಾದ ಬೆನ್ನಲ್ಲೇ ಸಕಲೇಶಪುರ ತಾಲೂಕು ಅರೆಕೆರೆ ಬಳಿ ಅಕ್ರಮವಾಗಿ ಮರಳು ದಾಸ್ತಾನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಗುತ್ತಿಗೆ ಸಂಸ್ಥೆಗೆ 2 ಕೋಟಿ ರೂ. ದಂಡ ವಿಧಿಸುವ ಖಡಕ್ ತೀರ್ಮಾನ ಕೈಗೊಂಡಿದ್ದಾರೆ.
ಅಕ್ರಮ ಮರಳು ಸಂಗ್ರಹ ಪತ್ತೆ ಹಚ್ಚಿ, ವಶಕ್ಕೆ ಪಡೆದ ರೋಹಿಣಿ ಸಿಂಧೂರಿ
ಗುತ್ತಿಗೆ ಸಂಸ್ಥೆಯ ಮಾಲೀಕ ಶರ್ಪುದ್ದೀನ್ ಅವರಿಗೆ ಜ.21ರಂದು ನೋಟಿಸ್ ನೀಡಿರುವ ಜಿಲ್ಲಾಧಿಕಾರಿ, ಅಕ್ರಮವಾಗಿ ಮರಳು ಸಂಗ್ರಹಿಸಿದ ತಪ್ಪಿಗೆ 25 ಲಕ್ಷ ರೂ. ದಂಡ, ಅದೇ ಮರಳನ್ನು ಕಾಮಗಾರಿಗೆ ಬಳಸಲು ಇಚ್ಛಿಸಿದಲ್ಲಿ ಪ್ರತಿ ಕ್ಯೂ.ಮೀ.ಗೆ 1700 ರೂ. ನಂತೆ 82 ಲಕ್ಷ ರೂ. ರಾಜಧನ ಹಾಗೂ ಕೃಷಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡಿ ಜೀವ ಸಂಕುಲಕ್ಕೆ ಹಾನಿ ಮಾಡಿದ್ದಕ್ಕಾಗಿ 81 ಲಕ್ಷ ರೂ. ದಂಡ ಸೇರಿ ಒಂದು ವಾರದ ಒಳಗಾಗಿ ಒಟ್ಟು 2,00,29000 ರೂ.ಪಾವತಿಸುವಂತೆ ಸೂಚಿಸಿದ್ದಾರೆ.
ಅರೆಕೆರೆಯ ಸೌಭಾಗ್ಯ ಎಂಬವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಸುಮಾರು 9 ಸಾವಿರ ಮೆಟ್ರಿಕ್ ಟನ್ ಮರಳು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಆಧರಿಸಿ ಜ.10ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಕ್ರಮ ಮರಳನ್ನು ವಶಕ್ಕೆ ಪಡೆಯಲಾಗಿತ್ತು.
ನೌಕರರ ಬಳಿ ಯಾವುದೇ ದಾಖಲಾತಿ ಇರಲಿಲ್ಲ
ದಾಳಿ ವೇಳೆ ಸ್ಥಳದಲ್ಲಿದ್ದ ಓಷಿಯನ್ ಕನ್ಸ್ಟ್ರಕ್ಷನ್ ಸಂಸ್ಥೆಯ ನೌಕರರೆಂದು ಹೇಳಿಕೊಂಡ ಜಹೀರುದ್ದೀನ್ ಮತ್ತು ಮಹಮದ್ ಇರ್ಫಾನ್ ಎಂಬವರು ಒದಗಿಸಿದ ದಾಖಲೆಗಳು ಸಮಪರ್ಕವಾಗಿರಲಿಲ್ಲ. ಈ ಎಲ್ಲ ದಾಸ್ತಾನು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಡಿ ಮಂಜೂರಾದ ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಲಾಗಿದೆ ಎಂದು ಒದಗಿಸಿದ ದಾಖಲೆ ತಪ್ಪಾಗಿತ್ತು. ಮರಳು ದಾಸ್ತಾನು ಮಾಡಿರುವ ಪ್ರದೇಶ ಕೃಷಿ ಚಟುವಟಿಕೆಗೆ ಯೋಗ್ಯ ಸ್ಥಳವೆಂದು ಪರಿಶೀಲನೆಯಿಂದ ತಿಳಿದು ಬಂದಿದೆ. ಆದ್ದರಿಂದ ಅಲ್ಲಿ ಮರಳು ಸಂಗ್ರಹಿಸಿದ್ದು ಕಾನೂನು ಉಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿ ನೋಟಿಸ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಂದಾಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಮರಳು ದಾಸ್ತಾನು ಮಾಡಿದ್ದು ಕಾನೂನು ಬಾಹಿರವಾಗಿದೆ. ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸದಿರುವುದರಿಂದ ಸರ್ಕಾರಕ್ಕೆ ಬರಬೇಕಾಗಿದ್ದ ರಾಜಧನವನ್ನು ವಂಚಿಸಿ ಕಳ್ಳತನದಿಂದ ಗಣಿಗಾರಿಕೆ ನಡೆಸುರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ಕಾನೂನುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆದ್ದರಿಂದ ಮರಳನ್ನು ಜಪ್ತಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದ ಹಿಟಾಚಿ, ಪವರ್ ಜನರೇಟರನ್ನು ವಶಕ್ಕೆ ಪಡೆದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಸುಪರ್ದಿಗೆ ನೀಡಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ
ಕೃಷಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡಿದ ಆರೋಪ
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮರಳು ದಾಸ್ತಾನು ಜಪ್ತಿ ಮಾಡಿದಾಗ ತಾವೇ ಅದನ್ನು ದಾಸ್ತಾನು ಮಾಡಿರುವುದಾಗಿ ಓಷಿಯನ್ ಕನ್ಸ್ಟ್ರಕ್ಷನ್ ಸಂಸ್ಥೆ ಜಿಲ್ಲಾಡಳಿತಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಅಲ್ಪ ಪ್ರಮಾಣದ ದಂಡ ವಿಧಿಸಿ, ಮರಳು ಬಳಕೆಗೆ ಅವಕಾಶ ನೀಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಗುತ್ತಿಗೆ ಸಂಸ್ಥೆಗೆ ಜಿಲ್ಲಾಧಿಕಾರಿ ನಿರ್ಧಾರ ಆಘಾತಕಾರಿಯಾಗಿದೆ.
ಮರಳು ಸಂಗ್ರಹ ಮಾಡಿದ್ದಕ್ಕೆ ವಿಧಿಸಿರುವ ದಂಡಕ್ಕಿಂತಲೂ ಎರಡು ಪಟ್ಟು ಹೆಚ್ಚು ದಂಡವನ್ನು ಕೃಷಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡಿದ ತಪ್ಪಿಗಾಗಿ ವಿಧಿಸಿರುವುದು ವಿಶೇಷವಾಗಿದೆ. ಇದರಿಂದ ಗುತ್ತಿಗೆದಾರ 2 ಕೋಟಿ 29 ಸಾವಿರ ರೂ.ನಷ್ಟು ದೊಡ್ಡ ಮೊತ್ತವನ್ನು ಸರ್ಕಾರಕ್ಕೆ ಪಾವತಿಸುವುದು ಅನಿವಾರ್ಯವಾಗಿದೆ.
ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ
ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ಹೆದ್ದಾರಿ ಕಾಮಗಾರಿ
ಹಾಸನ ನಗರದ ಮಧ್ಯಬಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು (ಎನ್.ಆರ್.ವೃತ್ತದಿಂದ ತಣ್ಣೀರುಹಳ್ಳ ವೃತ್ತದ ವರೆಗಿನ ಬಿ.ಎಂ.ರಸ್ತೆ) ಅಭಿವೃದ್ದಿ ಪಡಿಸುವ ಸಂಬಂದ ರಸ್ತೆಯ ಒಂದು ಬಾಗವನ್ನು ಅಗೆಯಲಾಗಿರುತ್ತದೆ. ಹಲವಾರು ದಿನಗಳು ಕಳೆದರೂ ಅಗೆದಿರುವ ರಸ್ತೆಯ ಭಾಗದ ಅಭಿವೃದ್ದಿಯನ್ನು ಪೂರ್ಣಗೊಳಿಸದೇ ಇರುವುದರಿಂದ ಸಾರ್ವಜನಿಕರಿಗೆ ಓಡಾಡಲು ಮತ್ತು ವಾಹನಗಳು ಸಂಚಾರಕ್ಕೆ ಬಹಳಷ್ಟು ತೊಂದರೆ ಉಂಟಾಗಿರುತ್ತದೆ.
ಕರ್ನಾಟಕ ಮುನಿಸಿಪಾಲಿಟೀಸ್ ಆಕ್ಟ್ ಸೆಕ್ಷನ್ 218ರ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ, ಯಾವುದೇ ಅಭಿವೃದ್ದಿ ಅಥವಾ ಇನ್ನಾವುದೇ ನಿರ್ವಹಣೆ ಕೆಲಸ ಮಾಡುವಾಗ, ಸಾರ್ವಜನಿಕರಿಗೆ ನೀಡುವ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಒಳಚರಂಡಿ ಮತ್ತು ಬೀದಿ ದೀಪಗಳ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಆಗುವಂತಹ ಈ ಕೆಳಕಂಡ ಸಂದರ್ಭಗಳಲ್ಲಿ ಕಡ್ಡಾಯವಾಗಿ ನಗರಸಭೆಯಿಂದ ಅನುಮತಿ ಪಡೆಯಬೇಕಾಗಿರುತ್ತದೆ.
ನಗರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ
ಸಂಚಾರದ ಹಾಯುವಿಕೆ ಅಥವಾ ಮಾರ್ಗಪಲ್ಲಟನ, ಅಂಥ ಬೀದಿಯಿಂದ ಆವರಣಕ್ಕೆ ತಲುಪಲು ಸರಿಯಾದ ಪ್ರವೇಶಾವಕಾಶ, ಅಂಥ ಕೆಲಸದ ನಿರ್ಮಹಣೆಯಿಂದ ಅಡ್ಡಿಗೆ ಒಳಗಾದಂಥ ಯಾವುದೇ ಚರಂಡಿ ವ್ಯವಸ್ಥೆ ನೀರು ಸರಬರಾಜು ಅಥವಾ ಬೆಳಕಿನ ಸಾಧನಗಳು, ನಗರದ ಮಧ್ಯಬಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ (ಎನ್.ಆರ್.ವೃತ್ತದಿಂದ ತಣ್ಣೀರುಹಳ್ಳ ವೃತ್ತದ ವರೆಗಿನ ಬಿ.ಎಂ.ರಸ್ತೆ) ಅಭಿವೃದ್ದಿಯನ್ನು ಕೈಗೆತ್ತಿಕೊಳ್ಳುವ ಮೊದಲು ನೀವು ನಗರಸಭೆಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ. ಮತ್ತು ರಸ್ತೆಯ ಅಭಿವೃದ್ದಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತರಹದ ತೊಂದರೆಯಾಗದಂತೆ ಮುಂಜಾಗೃತ ಕ್ರಮವನ್ನು ವಹಿಸಿರುವುದಿಲ್ಲ.
ಮೇಲೆ ತಿಳಿಸಿರುವಂತಹ ಮೂಲಭೂತ ಸೌಕರ್ಯಗಳಿಗೆ ಅಡಚಣೆಯಾಗದಂತೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಸಹ ನಿಯಮಾನುಸಾರ ಮಾಡಿರುವುದಿಲ್ಲ. ಆದ್ದರಿಂದ ಈ ನೋಟೀಸ್ ತಲುಪಿದ ಕೂಡಲೆ ಈ ಕೆಳಕಂಡಂತೆ ಕ್ರಮ ವಹಿಸಿ ನಗರಸಭೆಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಸೂಚನಾ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಿ
ಅಗೆದಿರುವ ರಸ್ತೆಯ ಭಾಗವನ್ನು, ಸರ್ಕಾರದ ಅನುಮೋದಿತ ಯೋಜನೆಯಂತೆ ತ್ವರಿತವಾಗಿ ಪೂರ್ಣಗೊಳಿಸುವುದು. ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗುವಂತೆ ರಸ್ತೆಯ ಎರಡೂ ಬದಿಯಲ್ಲಿ ಪ್ರತಿನಿತ್ಯ ನಿರಂತವಾಗಿ ನೀರನ್ನು ಸಿಂಪಡಿಸಬೇಕು.
ರಸ್ತೆಯ ಉದ್ದಕ್ಕೂ ಬೀದಿ ದೀಪಗಳನ್ನು ತೆಗೆದು ಹಾಕಿರುವುದರಿಂದ, ರಾತ್ರಿಯ ಸಮಯದಲ್ಲಿ ಸಾರ್ವಜನಿಕರು ಓಡಾಡಲು ಅನುಕೂಲವಾಗುವ ದೃಷ್ಟಿಯಿಂದ ಪರ್ಯಾಯ ದೀಪದ ವ್ಯವಸ್ಥೆಯನ್ನು ಮಾಡುವುದು. ಈಗಾಗಲೇ ಅಗೆದಿರುವ ರಸ್ತೆಯ ಭಾಗದ ಅಭಿವೃದ್ದಿಯನ್ನು ಪೂರ್ಣಗೊಳಿಸದೇ ಯಾವುದೇ ರಸ್ತೆಯನ್ನು ಅಗೆದು ಸಾರ್ವಜನಿಕರಿಗೆ ತೊಂದರೆ ಕೊಡಬಾರದು.
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಕೂಡಲೇ ಸ್ಪಂದಿಸಿ, ತುರ್ತು ಕ್ರಮ ವಹಿಸಿ ಅಗತ್ಯವಿರುವ ಕಡೆ ಪರ್ಯಾಯ ವ್ಯವಸ್ಥೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಲ್ಪಿಸಿ ಮರುಟಪಾಲಿನಲ್ಲಿ ವರದಿ ಸಲ್ಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ