ಅನಗತ್ಯ ಹೆರಿಗೆ ಶಸ್ತ್ರ ಚಿಕಿತ್ಸೆ ಕಡಿವಾಣಕ್ಕೆ ಡಿಸಿ ರೋಹಿಣಿ ಸೂಚನೆ
Recommended Video

ಹಾಸನ ಆಗಸ್ಟ್ 07: ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ಅನಗತ್ಯ ಹೆರಿಗೆ ಶಸ್ತ್ರ ಚಿಕಿತ್ಸೆಗಳು ಸಂಪೂರ್ಣ ನಿಯಂತ್ರಣಗೊಳ್ಳಬೇಕು ಕನಿಷ್ಟ ಶೇ 50ರಷ್ಟು ಶಿಶುಗಳು ಸಹಜ ಜನ್ಮ ಪಡೆಯಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 45-50 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ 67ರಷ್ಟು ಹೆರಿಗೆಗಳು ಶಸ್ತ್ರ ಚಿಕಿತ್ಸೆ ಮೂಲಕ ಅಗುತ್ತಿವೆ. ಎಲ್ಲಾ ವೈದ್ಯರು ಆದಷ್ಟು ಸಹಜ ಹೆರಿಗೆಗೆ ಗಮನಹರಿಸಬೇಕು ಈ ಬಗ್ಗೆ ಎಲ್ಲಾ ಆಸ್ಪತ್ರೆಗಳಲ್ಲಿ ಸುತ್ತೋಲೆ ಹೊರಡಿಸುವಂತೆ ನಿರ್ದೇಶನ ನೀಡಿದರು.
ಅನಿವಾರ್ಯ ಸಂದರ್ಭಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಬಹುದು ಆದರೆ ಮುಕ್ಕಾಲು ಭಾಗದಷ್ಟು ಹೆರಿಗೆಗಳು ಶಸ್ತ್ರ ಚಿಕಿತ್ಸೆ ಮೂಲಕವೇ ನಡೆಸಿದರೆ ಸಹಜ ಜನನ ಪ್ರಕ್ರಿಯೆಯ ನಿರ್ಲಕ್ಷಿಸಿದಂತಾಗುತ್ತದೆ. ಎಲ್ಲಾ ಆಸ್ಪತ್ರೆಗಳು ಇದನ್ನು ಪಾಲಿಸಬೇಕು ಉದ್ದೇಶ ಪೂರ್ವಕವಾಗಿ ನಿಯಮ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು.
ಅಲ್ಲದೆ ಗರಿಷ್ಠ ಪ್ರಮಾಣದ ಸಿಜಾರಿಯನ್ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಿದರು.

ಗರ್ಭಪಾತದ ಮಾತ್ರೆಗಳನ್ನು ನೀಡುತ್ತಿರುವುದು
ವೈದ್ಯರ ಲಿಖಿತ ಔಷದ ಸೂಚನ ಪತ್ರವಿಲ್ಲದೆ ಗರ್ಭಪಾತದ ಮಾತ್ರೆಗಳನ್ನು ನೀಡುತ್ತಿರುವುದು ಅನೇಕ ಸಾವು ನೋವು, ವೈದಕೀಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಇನ್ನು ಮುಂದೆ ಜಿಲ್ಲೆಯ ಯಾವುದೇ ಮೇಡಿಕಲ್ ಶಾಪ್ಗಳಲ್ಲಿ ವೈದ್ಯರ ಪತ್ರವಿಲ್ಲದೆ ಅಂಥ ಹೆಚ್.ಎನ್. ಶೆಡ್ಯೂಲ್ಗೆ ಸೇರಿದ ಯಾವುದೇ ಮಾತ್ರೆ ಔಷಧಗಳನ್ನು ಮಾರಾಟ ಮಾಡುವಂತಿಲ್ಲಾ. ಒಂದು ವೇಳೆ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಪರವಾನಗಿ ರದ್ದು ಪಡಿಸಲಾಗುವುದು. ಈ ಬಗ್ಗೆ ಎಲ್ಲಾ ಮೆಡಿಕಲ್ ಶಾಪ್ಗಳಿಗೆ ಸಾಮಾನ್ಯ ತಿಳುವಳಿಕೆ ಪತ್ರವನ್ನು ರವಾನಿಸುವಂತೆ ನಿರ್ದೇಶನ ನೀಡಿದರು.
ಕ್ಷಯ ರೋಗದ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಎಲ್ಲಾ ಖಾಸಗಿ ನರ್ಸಿಂಗ್ ಹೋಂಗಳು ಹಾಗೂ ವೈದ್ಯರು ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಮಾತೃ ಪೂರ್ಣ ಯೋಜನೆಯಡಿ ಪೌಷ್ಠಿಕ ಆಹಾರ ವಿತರಣೆ
ಮಾತೃ ಪೂರ್ಣ ಯೋಜನೆಯಡಿ ಪೌಷ್ಠಿಕ ಆಹಾರ ವಿತರಣೆಯಾಗುತ್ತಿದ್ದರೂ ಅಪೌಷ್ಠಿಕತೆಯಿಂದ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಸಂಪೂರ್ಣ ಕಡಿಮೆ ಮಾಡಲು ಸಾಧ್ಯಾವಾಗಿಲ್ಲ. ಕಡಿಮೆ ತೂಕದ ಕಾರಣ ಹುಟ್ಟುವಾಗಲೇ ನವಜಾತ ಶಿಶುಗಳು ಸಾವನಪ್ಪುತ್ತಿವೆ ಹಾಗಾಗಿ ಈಗಿರುವ ವ್ಯವಸ್ಥೆಯಲ್ಲಿ ಮಾರ್ಪಾಡು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಅಂಗನವಾಡಿಗಳು ದೂರ ಎನ್ನುವ ಅಥವಾ ಇನ್ನಾವುದೋ ಕಾರಣಕ್ಕೆ ಶೇ 40ರಷ್ಟು ಗರ್ಭಿಣಿ ಬಾಣಂತಿಯರು ಅಂಗನವಾಡಿಗಳಿಗೆ ಅಗಮಿಸುತ್ತಿಲ್ಲ. ಹೀಗಾಗಿ ಮಾತೃಪೂರ್ಣ ಯೋಜನೆ ಶೇ 100 ರಷ್ಟು ಗುರಿ ಸಾಧನೆ ಸಾದ್ಯವಾಗುತ್ತಿಲ್ಲ. ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಹಾಗಾಗಿ ತಾಯಿಂದಿರು ಮನೆಯಲ್ಲಿಯೇ ಹಾಲು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯುಬಹುದಾದ ಪೂರಕ ಪೌಷ್ಠಕ ಆಹಾರ ಸಿದ್ದಪಡಿಸಿ ವಿತರಿಸಬೇಕಾಗಿದೆ. ಜಿಲ್ಲೆಯಲ್ಲಿಯೇ ಇದನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಬೇಕಾಗಿದ್ದು ಮುಂದಿನ 15 ದಿನಗಳೊಳಗೆ ಈ ಆಹಾರ ಸಿದ್ದವಾಗಬೇಕು. ಸಿ.ಎಫ್. ಡಿ.ಆರ್.ಐ ಸೇರಿದಂತೆ ಇದಕ್ಕಾಗಿ ತಜ್ಞರ ಸಮಿತಿ ರಚಿಸಿ ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ಅನಿವಾರ್ಯ ಸಂದರ್ಭಗಳಲ್ಲಿ ದಾದಿಯರ ಸೇವೆ
ಚಿಕ್ಕಮಗಳೂರಿನಿಂದ ಅಂತಿಮ ಕ್ಷಣದಲ್ಲಿ ಹಾಸನ ವೈದ್ಯಕೀಯ ಶಿಕ್ಷಣ ಆಸ್ಪತ್ರೆಗೆ ರೋಗಿಗಳನ್ನು ಕಳಿಸುವುದರಿಂದಲೂ ಗರ್ಭಿಣಿ, ಬಾಣಂತಿಯರು, ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚುತ್ತಿದೆ. ಈ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರಿಗೆ ಪತ್ರಬರೆಯುವಂತೆ ರೋಹಿಣಿ ಸಿಂಧೂರಿ ತಿಳಿಸಿದರು.
ಶೇ 100ರಷ್ಟು ಆಸ್ಪತ್ರೆ ಹೆರಿಗೆಗೆ ಪ್ರೋತ್ಸಾಹಿಸುವುದರ ಜೊತೆಗೆ ಹಾಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಲಭ್ಯವಿರುವ ದಾದಿಯರನ್ನು ಪಟ್ಟಿಮಾಡಿ ಮತ್ತೊಂದು ಸುತ್ತಿನ ತರಬೇತಿ ನೀಡಿ, ತುರ್ತು, ಅನಿವಾರ್ಯ ಸಂದರ್ಭಗಳಲ್ಲಿ ಅವರ ಸೇವೆ ಲಭ್ಯವಾಗುವಂತಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಂತುಹುಳು ನಿವಾರಣ ಮಾತ್ರೆ ವಿತರಿಸಬೇಕು
ಆ 10 ಮತ್ತು 17 ರಂದು ರಾಷ್ಟ್ರೀಯ ಜಂತುಹುಳು ನಿಯಂತ್ರಣ ಮಾತ್ರೆ ವಿತರಣ ಕಾರ್ಯಕ್ರಮವಿದ್ದು ಎಲ್ಲಾ ಅಂಗನವಾಡಿ, ಶಾಲಾ, ಕಾಲೇಜುಗಳಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತುಹುಳು ನಿವಾರಣ ಮಾತ್ರೆ ವಿತರಿಸಬೇಕು. ಖಾಸಗಿ ಶಾಲೆಗಳು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು. ಬೆಳಗಿನ ಪಾರ್ಥನೆ ಅವಧಿಯಲ್ಲಿ ಇದನ್ನು ವಿತರಿಸಿ ಪೋಟೋ ಸಹಿತ ವರದಿ ಮಾಡಬೇಕು ಎಂದು ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪದವಿ ಕಾಲೇಜು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಜಗದೀಶ್ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಅಶಾ ಕಾರ್ಯಕರ್ತೆಯರ ಸೇವೆ ತೃಪಿಕರವಾಗಿಲ್ಲ ಎಲ್ಲರೂ ಕಡ್ಡಾಯವಾಗಿ ಗರ್ಭಿಣಿ, ಬಾಣಂತಿಯರ ನಿರಂತರ ಸಂರ್ಪಕದಲ್ಲಿದ್ದು ಮಾಹಿತಿ ನೀಡಬೆಕು ಎಂದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ
ಇದೇ ರೀತಿ 108 ಅಂಬುಲೆನ್ಸ್ ಸೇವೆ ಕೂಡ ಸರಿಯಾಗಿ ದೊರೆಯುತ್ತಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಕೂಡಲೇ ವ್ಯವಸ್ಥೆ ಸರಿಪಡಿಸಬೇಕಿದೆ ಎಂದು ಸೂಚನೆ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಾಕರಾದ ಡಾ. ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ, ಡಾ. ಜನಾರ್ಧನ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಆರಾಧ್ಯ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜ್ ಗೋಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪದ್ಮ, ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು ಹಾಗೂ ವಿವಿಧ ಕಾರ್ಯಕ್ರಮ ಮೇಲ್ವಿಚಾರಣಾಧಿಕಾರಿಗಳು, ತಜ್ಞ ವೈದ್ಯರು ಸಭೆಯಲ್ಲಿ ಹಾಜರಿದ್ದರು.












Click it and Unblock the Notifications