ಸಿದ್ದರಾಮಯ್ಯ ಭೇಟಿಯಾದ ಹಾಸನ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್!
Recommended Video

ಬೆಂಗಳೂರು, ಮಾರ್ಚ್ 19 : ಮಹತ್ವದ ಬೆಳವಣಿಗೆಯೊಂದರಲ್ಲಿ ಹಾಸನ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಎ.ಮಂಜು ಅವರು ಬಿಜೆಪಿ ಸೇರಿದ ಬಳಿಕ ಹಾಸನ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ.
ಮಂಗಳವಾರ ಸಂಜೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಯೋಗಾ ರಮೇಶ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಹಲವು ತಾಸುಗಳ ಕಾಲ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಹಾಸನ ರಾಜಕೀಯದಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎ.ಮಂಜು ಭಾನುವಾರ ರಾತ್ರಿ ಬಿಜೆಪಿ ಸೇರಿದ್ದರು. ಹಾಸನದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ 2019ರ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಈ ಬೆಳವಣಿಗೆ ಬಳಿಕ ಯೋಗಾ ರಮೇಶ್ ಅವರು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.
ಎ.ಮಂಜು ಬಿಜೆಪಿ ಸೇರ್ಪಡೆಯನ್ನು ಯೋಗಾ ರಮೇಶ್ ವಿರೋಧಿಸಿದ್ದರು. ಆದರೆ, ಮಂಜು ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ಯೋಗಾ ರಮೇಶ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯಲ್ಲಿ ಹಾಸನದ ರಾಜಕೀಯ ಕುತೂಹಲ ಮೂಡಿಸಿದೆ....

ಎ.ಮಂಜು ವಿರುದ್ಧ ಗರಂ
ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದಾಗ ಯೋಗಾ ರಮೇಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಎ.ಮಂಜು ಕಾಂಗ್ರೆಸ್ಗೆ ಹಳಸಿದ ಅನ್ನದ ರೀತಿಯಲ್ಲಿದ್ದಾರೆ. ಆ ಹಳಸಿದ ಅನ್ನ ನಮಗೂ ಬೇಡ' ಎಂದು ಹೇಳಿದ್ದರು.

ಮಂಜು ನಂಬುವುದು ಹೇಗೆ?
'ಎಚ್.ಡಿ.ದೇವೇಗೌಡರು ಅಭ್ಯರ್ಥಿಯಾದರೆ ನಾನು ಬೆಂಬಲ ನೀಡುತ್ತೇನೆ ಎಂದು ಎ.ಮಂಜು ಹೇಳಿದ್ದಾರೆ. ಹೀಗಿದ್ದಾಗ ಅವರನ್ನು ನಂಬುವುದು ಹೇಗೆ?. ಎ.ಮಂಜು ಪಕ್ಷ ಸೇರ್ಪಡೆ ಬಗ್ಗೆ ಜಿಲ್ಲೆಯ ನಾಯಕರು, ಕಾರ್ಯಕರ್ತರ ಜೊತೆ ಚರ್ಚಿಸಿಲ್ಲ' ಎಂದು ಯೋಗಾ ರಮೇಶ್ ಹೇಳಿದ್ದರು.

ಎ.ಮಂಜು ಬಿಜೆಪಿ ಸೇರ್ಪಡೆ
ಯೋಗಾ ರಮೇಶ್ ವಿರೋಧದ ನಡುವೆಯೋ ಎ.ಮಂಜು ಅವರು ಭಾನುವಾರ ಬಿಜೆಪಿ ಸೇರಿದ್ದರು. ಪ್ರಜ್ವಲ್ ರೇವಣ್ಣ ವಿರುದ್ಧ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಎ.ಮಂಜು ಬಿಜೆಪಿ ಸೇರಿರುವುದು ಜಿಲ್ಲಾ ಬಿಜೆಪಿ ಘಟಕದಲ್ಲಿ ಅಸಮಾಧಾನ ಮೂಡಿಸಿದೆ.

ಕಾಂಗ್ರೆಸ್ಗೆ ಯೋಗಾ ರಮೇಶ್
ಸಿದ್ದರಾಮಯ್ಯ ಅವರನ್ನು ಭೇಟಿಯಾದ ಯೋಗಾ ರಮೇಶ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಜಿಲ್ಲಾ ಬಿಜೆಪಿ ಅಧ್ಯಕ್ಷರೇ ಕಾಂಗ್ರೆಸ್ ಸೇರಿದರೆ ಬಿಜೆಪಿಗೆ ಹಿನ್ನಡೆಯಾಗಲಿದೆ.












Click it and Unblock the Notifications