ತೆರೆದ ಹಾಸನಾಂಬ ದೇವಾಲಯ ಬಾಗಿಲು, ಭಕ್ತಾದಿಗಳ ನೂಕು-ನುಗ್ಗಲು
ಹಾಸನ, ನವೆಂಬರ್ 01: ಹಾಸನದ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲನ್ನು ಇಂದು ಜಿಲ್ಲಾಡಳಿತ ತೆರೆದಿದೆ. ಇಂದಿನಿಂದ ಒಂಬತ್ತು ದಿನಗಳ (ನವೆಂಬರ್ 1 ರಿಂದ 09) ಕಾಲ ದೇವರ ದರ್ಶನ ದೊರಕಲಿದೆ.
ಮೊದಲ ದಿನವೇ ಹಾಸನಾಂಬೆ ದರ್ಶನ ಮಾಡಲು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ದೇವಾಲಯದ ಬಳಿ ನೆರೆದಿದ್ದರು. ಪೊಲೀಸರ ಬಿಗಿ ಪಹರೆಯಲ್ಲಿ ಭಕ್ತಾದಿಗಳು ಹಾಸನಾಂಬೆ ದರ್ಶನ ಮಾಡಿದರು.
ಹಾಸನಾಂಬೆ ಜಾತ್ರೆಯು ಹಾಸನದ ಪ್ರಮುಖ ಆಚರಣೆಯಾಗಿದ್ದು, ವರ್ಷದಲ್ಲಿ ಕೆಲವು ದಿನಗಳು ಮಾತ್ರವೇ ತೆರೆಯಲಾಗುವ ಹಾಸನಾಂಬ ದೇವಾಲಯದ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯದ ವಿವಿದೆಡೆ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಭಕ್ತಾಧಿಗಳು ಆಗಮಿಸುತ್ತಾರೆ.

ಹಾಸನಾಂಬೆ ದರ್ಶನವು ಭಕ್ತಾಧಿಗಳಿಗೆ ದೊರಕಲಿ ಎಂಬ ಕಾರಣಕ್ಕೆ ಜಿಲ್ಲಾಡಳೀತವು ಸಕಲ ವ್ಯವಸ್ಥೆಯನ್ನು ಮಾಡಿದ್ದು, ಇಂದಿನಿಂದ ಹತ್ತು ದಿನಗಳ ಕಾಲ 24 ಗಂಟೆಯೂ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಾಧ್ಯಮಗಳು ದೂರ
ಪ್ರತಿವರ್ಷವೂ ಹಾಸನಾಂಬೆ ದೇವಾಲಯದ ಬಾಗಿಲು ತೆಗೆಯುವ ದೃಶ್ಯವನ್ನು ಮಾಧ್ಯಮಗಳು ವರದಿ ಮಾಡುತ್ತವೆ ಆದರೆ ಈ ಬಾರಿ ಜಿಲ್ಲಾಡಳಿತದ ಕ್ರಮದಿಂದಾಗಿ ಮಾಧ್ಯಮದವರನ್ನು ದೇವಾಲಯದ ಆವರಣದಿಂದ ದೂರ ಇಡಲಾಗಿತ್ತು. ಇದು ಮಾಧ್ಯಮ ಪ್ರತಿನಿಧಿಗಳಿಗೆ ಸಿಟ್ಟು ತರಿಸಿತು.

ಹಲವು ವರ್ಷಗಳಿಂದ ನಾವು ಹಾಸನಾಂಬೆ ದೇವಾಲಯದ ವರದಿಯನ್ನು ಮಾಡುತ್ತಾ ಬಂದಿದ್ದೇವೆ. ಹಾಸನಾಂಬೆ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುವುದರಲ್ಲಿ ಮಾಧ್ಯಮದವರ ಪಾತ್ರವೂ ಇದೆ ಆದರೆ ಜಿಲ್ಲಾಡಳಿತ ಈ ಬಾರಿ ನಮ್ಮನ್ನು ದೇವಾಲಯ ವರದಿಯಿಂದ ದೂರ ಇಟ್ಟಿದೆ ಎಂದು ಆರೋಪಿಸಿ ದೇವಾಲಯದ ಮುಂದೆ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ಮಾಡಿದರು.












Click it and Unblock the Notifications