ದೇಶ ಇಬ್ಭಾಗ, ರಾಜ್ಯ 3 ಭಾಗ: ಹಾಸನಾಂಬ ಜಾತ್ರೆಯಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ
ಹಾಸನ, ಅಕ್ಟೋಬರ್, 14: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಎರಡನೇ ದಿನವಾದ ಇಂದು ಶುಕ್ರವಾರ ಹಲವು ಗಣ್ಯರು ಹಾಗೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಭಕ್ತಸಾಗರ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯನ್ನು ನೋಡಿ ಕಣ್ತುಂಬಿಕೊಂಡರು. 2023 ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿ ಅಂತಾ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ, ಹೇಳಿದರು. ಮತ್ತೊಂದೆಡೆ ಬ್ರಹ್ಮಾಂಡ ಗುರೂಜಿ ಮಾತನಾಡಿದ್ದು, ದೇಶ ಇಬ್ಬಾಗವಾಗುತ್ತದೆ, ರಾಜ್ಯ ಮೂರು ಓಳಾಗುತ್ತದೆ ಎಂದು ಸ್ಫೋಟಕ ಭವಿಷ್ಯ ನುಡಿದರು.
ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಕೂಡ ಹಾಸನಾಂಬ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದರ್ಶನ ಪಡೆದ ಬಳಿಕ ಮಾತಾನಾಡಿದ ಅವರು, "ಪಾರ್ಲಿಮೆಂಟ್ ಕಟ್ಟಿದ್ದಾರೆ, ಅದು ಭಾರಿ ಘೋರ ಆಗಿರುತ್ತದೆ. ಚಂದ್ರ ಇಲ್ಲ ಪೂರ್ತಿಯಾಗಿ ಕುಜನಾಂಶ ಆಗಿರಬೇಕು. ಹಾಸನಾಂಬೆಯ ಸನ್ನಿಧಿಯಲ್ಲಿ ಹೇಳುತ್ತೇನೆ ಭಾರತ ದೇಶ ಎರಡು ಭಾಗ ಆಗುತ್ತದೆ. ಎರಡೆರಡು ರಾಷ್ಟಪತಿ ಆಗುವುದು ಸತ್ಯ, ಕರ್ನಾಟಕ ಮೂರು ಭಾಗ ಆಗುತ್ತದೆ. ಮೂರು ಜನ ಸಿಎಂ, ಮೂರು ರಾಜ್ಯಪಾಲರು ಬರುತ್ತಾರೆ. ಆಂಧ್ರ ಎರಡಾಯಿತು, ನಮ್ಮದು ಒಂದು ಕೈ ಮೇಲಾಗಿ ಮೂರಾಗುತ್ತದೆ. ವಿಧಾನಸೌಧ ಮುಳುಗುತ್ತದೆ ಎಂದು ವೀರ ಪ್ರಮೇಯದಲ್ಲಿ ಬರೆದಿದೆ. ಘಟಪ್ರಭಾ, ಮಲಪ್ರಭಾದಲ್ಲಿ ಪ್ರವಾಹ ಆಗಿದೆ. ಬೆಳಗಾವಿ ಭಾಗ ಕೂಡ ಒಂದು ರಾಜ್ಯ ಆಗುತ್ತದೆ," ಎಂದು ಭಯಾನಕ ಭವಿಷ್ಯ ನುಡಿದರು.
ಹಾಸನಾಂಬ ದರ್ಶನಕ್ಕೆ ಕಿಕ್ಕಿರಿದು ಬಂದ ಭಕ್ತಸಾಗರ; ದರ್ಶನಕ್ಕೆ ವ್ಯವಸ್ಥೆ ಹೇಗಿದೆ?
ಬ್ರಹ್ಮಾಂಡ ಗುರೂಜಿಯ ಭಯಾನಕ ಭವಿಷ್ಯ
"31 ವರ್ಷದೊಳಗೆ ಯಾರ್ಯಾರು ಇದ್ಧೀರಾ ಅವರೆಲ್ಲರೂ ಈ ಸಮಯದಲ್ಲಿ ಎಚ್ಚೆತ್ತುಕೊಳ್ಳಬೇಕು. ಕರ್ನಾಟಕ ಮೂರು ಭಾಗ ಆಗಿ, ಮೂರು ಮುಖ್ಯಮಂತ್ರಿ, ಮೂವರು ರಾಜ್ಯಪಾಲರಾಗುತ್ತಾರೆ. ಇದು ಶಿವನ ಆಣೆಗೂ ಸತ್ಯ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ. ಹಾಸನಾಂಬೆ ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, "ದೇಶದ ಬಗ್ಗೆ ಮಾತನಾಡಿದಾಗ ಟ್ರೋಲ್ ಮಾಡುತ್ತಾರೆ. ತ್ರಿಕೋನಾತ್ಮಿಕ ದೀಪಿಕ, ಯಾವುದೇ ಪಾರ್ಲಿಮೆಂಟ್ ಗುಂಡಾಗಿರಬೇಕು. ಇಲ್ಲ ಚೌಕವಾಗಿರಬೇಕು. ತ್ರಿಕೋನ ಮಾಡಿದಾಗ ಉಗ್ರವಾಗಿರುತ್ತದೆ. ಇನ್ಮೇಲೆ ದೇಶದ ಮೇಲೆ, ಜನರ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತದೆ. ಮೊದಲು ಕದ್ದುಮುಚ್ಚಿ ಲಂಚ ತೆಗೆದುಕೊಳ್ಳುತ್ತಿದ್ದರು. ಈಗ ಎಲ್ಲಾ ಓಪನ್. ದಡಂದಶಗುಣಂ ಭಗವಂತ ಆ ಸಮಯಕ್ಕೆ ಬಂದೇ ಬರುತ್ತಾನೆ." ಎಂದಿದ್ದಾರೆ.
ಡಿ. ಅಂತ್ಯಕ್ಕೆ ಐದು ಗ್ರಹಗಳ ಆಗಮನ
ಕಲಿಯುಗದ ಅಂತ್ಯ ಕಾಲಕ್ಕೆ ರೋಗಗಳು ಜಾಸ್ತಿ ಆಗುತ್ತದೆ. ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತವೆ. ಒಂಭತ್ತು ತಿಂಗಳು ಕೂರುತ್ತದೆ. ಎರಡು ಗ್ರಹಣಗಳು ಹತ್ತಿರ ಬರಬಾರದು. ಜನರಿಗೆ ನೀರಿನ ಅಭಾವ, ಬೆಂಕಿ, ಗಲಾಟೆ, ಘರ್ಷಣೆ, ಸ್ವಂತದವರ ಹತ್ತಿರ ಘರ್ಷಣೆಗಳು ಆಗುತ್ತವೆ ಎಂದರು.
ಶಿವನ ಮೇಲೆ ಆಣೆ ಇದು ಸತ್ಯ-ಗುರೂಜಿ
ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ದೇವರ ಸತ್ಯವಾಗಿ ಹೇಳುತ್ತೇನೆ, 31 ವರ್ಷದೊಳಗಿನವರು ಎಚ್ಚೆತ್ತುಕೊಂಡು ಮುನ್ನಡೆಯಬೇಕು. ಇದು ಸತ್ಯ ಎಂದು ಭವಿಷ್ಯ ನುಡಿದಿದ್ದಾರೆ.
ಎಎಪಿ ಬಗ್ಗೆ ಗುರೂಜಿ ನುಡಿದ ಭವಿಷ್ಯ?
"ವೀರ ಬ್ರಮ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ದಾರೆ, ಇದು ನಡೆಯುವುದು ಸತ್ಯ. ಈ ಭಾರಿ ಬರುವುದು ಬೆರಕೆ ಸಂಸಾರ. ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಬಹಳಷ್ಟು ಗೊಂದಲ ನಡೆಯುತ್ತದೆ. ಪೊರಕೆಯಿಂದ ದೆಹಲಿಯನ್ನು ಗುಡಿಸಿರುವ ಪಕ್ಷ, ಪಂಜಾಬ್, ಗುಜರಾತ್ನಲ್ಲೂ ಒಂದಿಷ್ಟು ಗುಡಿಸಿದೆ. ಚಪ್ಪಲಿ, ಪೊರಕೆಯನ್ನು ಲಕ್ಷ್ಮಿಗೆ ಹೋಲಿಸುತ್ತೇವೆ. ಭಿಕ್ಷೆ ಬೇಡಿ ಒಂದು ಸರ್ಕಾರ ನಡೆಸುವ ಅವಕಾಶಗಳು ಈ ಭಾರಿ ಬರುತ್ತದೆ. ಸುಮಾರು ಏಳು ಪಕ್ಷಗಳು ಸೇರಿಕೊಂಡು ಸರ್ಕಾರ ಮಾಡಬೇಕಾಗುತ್ತದೆ. ಮಾಂಸದ ಊಟ ಹಾಕಿದರು, ತೀರ್ಥ ಕೊಟ್ಟರು ಎಂದು ವೋಟ್ ಹಾಕಬೇಡಿ. ಯಾವ ಮನುಷ್ಯ ಸರಿಯಾಗಿ ಕೆಲಸ ಮಾಡುತ್ತಾನೆಯೋ, ಅಂತಹವರನ್ನು ಶಾಸಕನಾಗಿ ಆಯ್ಕೆ ಮಾಡಿ," ಎಂದು ತಿಳಿಸಿದರು.
ಹಾಸನ: ಸಕಲೇಶಪುರದಲ್ಲಿ ಮುಂದುವರೆದ ಕಾಡಾನೆ ಆರ್ಭಟ; ಜನರಿಗೆ ಆತಂಕ