ಹಾಸನ; ಮಗನ ಕೊಲೆಗೆ ಅಪ್ಪನೇ ಕೊಟ್ಟ ಸುಪಾರಿ
ಹಾಸನ, ಸೆಪ್ಟೆಂಬರ್ 16: ಆಸ್ತಿ ವಿಚಾರವಾಗಿ ಮಗನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಅಪ್ಪನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೊಲೀಸರು ಇಂದು ಬಂಧಿಸಿದ್ದಾರೆ.
ಆಗಸ್ಟ್ 27ರ ರಾತ್ರಿ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ಬೈಕಿನಲ್ಲಿ ಬರುತ್ತಿದ್ದ ಪುನೀತ್ (26) ಎಂಬಾತನನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಪುನೀತ್ ಕೊಲೆ ನಂತರ ಆತನ ತಾಯಿ ಯಶೋಧಮ್ಮ ದೂರು ನೀಡಿದ್ದು, ಪುನೀತ್ ಹಾಗೂ ಆತನ ತಂದೆ ಹೇಮಂತ್ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಪತಿ ಹಾಗೂ ಇನ್ನೊಬ್ಬ ಮಗ ಸೇರಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು.

ಆರೋಪದ ಆಧಾರದ ಮೇಲೆ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ವಿಚಾರ ಬಹಿರಂಗವಾಗಿದೆ. ಮಗನನ್ನು ಕೊಲೆ ಮಾಡಲು ಕೆಲವು ತಿಂಗಳುಗಳಿಂದ ಪ್ಲಾನ್ ಮಾಡಿದ್ದ ಹೇಮಂತ್, ಕೊಲೆ ಮಾಡಲು 2 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎಂಬುದು ತಿಳಿದುಬಂದಿದೆ. ಕೆರೆ ಏರಿ ಮೇಲೆ ಆರೋಪಿಗಳಾದ ಸ್ವಾಮಿ, ನಂದೀಶ್ ಮತ್ತು ಕಾಂತರಾಜು ಎಂಬುವರು ಪುನೀತ್ ನನ್ನು ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡಿದ್ದರು. ಸುನಿಲ್ ಹಾಗೂ ನಾಗರಾಜ್ ಎಂಬುವರು ಪುನೀತ್ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದ್ದರು. ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರಿಂದ 5 ಮೊಬೈಲ್, 1.88 ಲಕ್ಷ ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications