ಹೇಮಾವತಿ ಜಲಾಶಯದಿಂದ 14 ಟಿಎಂಸಿ ನೀರು ಬಿಡಲು ಸೂಚನೆ
ಹಾಸನ, ಆಗಸ್ಟ್ 07 : ಹೇಮಾವತಿ ಜಲಾಶಯದಿಂದ ಕಾಲುವೆ ಜಾಲಕ್ಕೆ ನೀರು ಹರಿಸಲು ಕರ್ನಾಟಕ ಸರ್ಕಾರ ಆದೇಶ ನೀಡಿದೆ. ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಜಲಾಶಯಕ್ಕೆ 17, 623 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಬುಧವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ನೀಡಿದೆ. ಆಗಸ್ಟ್ 7 ರಿಂದ 14.53 ಟಿಎಂಸಿ ಅಡಿ ನೀರನ್ನು ಹೇಮಾವತಿ ಕಾಲುವೆ ಜಾಲಕ್ಕೆ ಹರಿಸಲು ಸರ್ಕಾರ ಒಪ್ಪಿಗೆ ಕೊಟ್ಟಿದೆ. ಸದ್ಯ ಜಲಾಶಯದ ಹೊರ ಹರಿವು 5 ಸಾವಿರ ಕ್ಯುಸೆಕ್ ಇದೆ.
ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. ಹೇಮಾವತಿ ಜಲಾಶಯ 2922 ಅಡಿ ಎತ್ತರವಿದೆ. 7/8/2019ರಂದು ಜಲಾಶಯದಲ್ಲಿ 2899.77 ಅಡಿ ನೀರಿನ ಸಂಗ್ರಹವಿದೆ.

ಹೇಮಾವತಿ ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹವಿಲ್ಲದ ಕಾರಣ ಕೆರೆಗಳು ಮತ್ತು ಅಣೆಕಟ್ಟುಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರು ಪೂರೈಕೆಯ ಉದ್ದೇಶಕ್ಕೆ ಮಾತ್ರ ಲಭ್ಯ ನೀರನ್ನು ಬಳಸಲು ಹಾಗೂ ನೀರಾವರಿ ಉದ್ದೇಶಗಳಿಗೆ ನೀರು ಒದಗಿಸದೆ ಇರಲು ಉದ್ದೇಶಿಸಲಾಗಿದೆ.
ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವುದರೊಂದಿಗೆ ಹೇಮಾವತಿ ಜಲಾಶಯದಿಂದ ಕಾಲುವೆ ಜಾಲಕ್ಕೆ ಮುಂದಿನ 25 ದಿನಗಳಿಗೆ 14.53 ಟಿಎಂಸಿ ನೀರು ಹರಿಸಲು ಸೂಚನೆ ನೀಡಲಾಗಿದೆ.
ಹೇಮಾವತಿ ಜಲಾಶಯದ ಯೋಜನೆಯ ವ್ಯಾಪ್ತಿಗೆ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳ ಕೆರೆಗಳು, ಅಣೆಕಟ್ಟೆಗಳು ಬರಲಿದ್ದು, ಅದನ್ನು ತುಂಬಿಸಲು ಸರ್ಕಾರ ಅನುಮತಿ ನೀಡಿದೆ.












Click it and Unblock the Notifications