ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ ಕೀರ್ತಿಸ್ತಂಭ ಸ್ಥಾಪನೆ
ಶ್ರವಣಬೆಳಗೊಳ, ಜುಲೈ 28 : ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿರುವ ಧರ್ಮಚಕ್ರ ಶ್ರೀವಿಹಾರ ಉದ್ಯಾನವನದಲ್ಲಿ ಕೀರ್ತಿಸ್ತಂಭ ಸ್ಥಾಪನೆಯ ಭೂಮಿಪೂಜೆಯನ್ನು ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶುಕ್ರವಾರ ನೆರವೇರಿಸಿದರು.
ಮಹಾತಪಸ್ವಿ ಸಂತಶಿರೋಮಣಿ ಪರಮಪೂಜ್ಯ ಆಚಾರ್ಯಶ್ರೀ 108 ವರ್ಧಮಾನಸಾಗರ ಮಹಾರಾಜರ 50ನೇ ಸಂಯಮ ದೀಕ್ಷಾ ಸುವರ್ಣ ಮಹೋತ್ಸವದ ನಿಮಿತ್ತ ಪಟ್ಟಣದ ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆಚಾರ್ಯಶ್ರಿ ವರ್ಧಮಾನಸಾಗರ ಮಹಾರಾಜರು, ಆಚಾರ್ಯಶ್ರಿ ವಾಸುಪೂಜ್ಯಸಾಗರ ಮಹಾರಾಜರು, ಆಚಾರ್ಯಶ್ರೀ ಪಂಚಕಲ್ಯಾಣಕಸಾಗರ ಮಹಾರಾಜರು, ಆಚಾರ್ಯಶ್ರೀ ಚಂದ್ರಪ್ರಭಸಾಗರ ಮಹಾರಾಜರು ಮತ್ತು ಮುನಿ ವೃಂದದವರು ಪಾವನ ಸಾನಿಧ್ಯ ವಹಿಸಿದ್ದರು.
ಈ ವೇಳೆ ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೇಮಾ ಪ್ರಭಾಕರ್, ಶ್ರವಣಬೆಳಗೊಳ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್, ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ್ ಮುಂತಾದವರು ಉಪಸ್ಥಿತರಿದ್ದರು.

2018ರ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಹಾಸನಕ್ಕೆ ಹೊಸದಾಗಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವ ರೋಹಿಣಿ ಸಿಂಧೂರಿಯವರು ಕಳೆದ ವಾರಿ ಕಾಮಗಾರಿಯನ್ನು ವೀಕ್ಷಿಸಿ, ಇನ್ನೈದು ತಿಂಗಳಲ್ಲಿ ಎಲ್ಲ ಕೆಲಸಗಳು ಪೂರ್ತಿಗೊಳ್ಳಲಿವೆ ಎಂದು ಹೇಳಿದ್ದರು.
ಸರಕಾರ ಈ ಮಹೋನ್ನತ ಉತ್ಸವಕ್ಕಾಗಿ 175 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ವಿವಿಐಪಿ ಗೆಸ್ಟ್ಹೌಸ್ನಲ್ಲಿ ಹೊಸದಾಗಿ 20 ಕೊಠಡಿಗಳ ನಿರ್ಮಾಣ, ಒಳಚರಂಡಿ, ಕಲ್ಯಾಣಿ ಜೀರ್ಣೋದ್ಧಾರ, ವಿವಿಧ ಭವನಗಳ ನಿರ್ಮಾಣ, ಬಸ್ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಗಳು ಜಾರಿಯಲ್ಲಿವೆ.











Click it and Unblock the Notifications