ಅರಕಲಗೂಡಿನ ಅಂಗನವಾಡಿ ಬಳಿ ವಾಮಾಚಾರ; ಮಕ್ಕಳನ್ನು ಕಳಿಸಲು ಹಿಂದೇಟು
ಅರಕಲಗೂಡು, ಜುಲೈ 4: ಅಂಗನವಾಡಿ ಸಮೀಪ ಕಿಡಿಗೇಡಿಗಳು ವಾಮಾಚಾರ ಮಾಡಿರುವ ಘಟನೆ ಅರಕಲಗೂಡಿನ ನಯ ನಕ್ಷತ್ರ ಬೀದಿಯಲ್ಲಿ ನಡೆದಿದೆ.
ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಪಟ್ಟಣದ 5ನೇ ವಾರ್ಡ್ ನ ನಯ ನಕ್ಷತ್ರ ಬೀದಿ ಮತ್ತು ಜನತಾ ಕ್ವಾಟ್ರಸ್ ಗೆ ಹೊಂದಿಕೊಂಡಿರುವ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ನಿಂಬೆ ಹಣ್ಣು, ಅನ್ನ ಹಾಕಿ ಕೋಳಿಯನ್ನು ವಾಮಾಚಾರ ಮಾಡಿ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಬೆಳಿಗ್ಗೆ ಅಂಗನವಾಡಿಗೆ ತೆರಳಿದ ಸಂದರ್ಭ ಇದು ಕಂಡು ಬಂದಿದ್ದು, ಅಂಗನವಾಡಿ ಶಿಕ್ಷಕಿ ಮತ್ತು ಮಕ್ಕಳು ಭಯಗೊಂಡಿದ್ದಾರೆ. ತಕ್ಷಣ ಸುತ್ತಮುತ್ತಲಿನ ಜನ ಅಲ್ಲಿ ನೆರೆದಿದ್ದಾರೆ.
ಇದರಿಂದ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಕ್ಕೆ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ಕೇಂದ್ರದ ಸುತ್ತ ಸ್ವಚ್ಛತೆ ಇಲ್ಲದ ಕಾರಣದಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ದೂರಿರುವ ಪೋಷಕರು, ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪ್ರಭಾರಿ ಸಿಡಿಪಿಒ ಶಿವಕುಮಾರ್ ಮತ್ತು ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ನಿಂಗರಾಜ್, ಸ್ಥಳದಲ್ಲಿದ್ದ ವಾಮಾಚಾರದ ವಸ್ತುಗಳನ್ನು ತೆರವುಗೊಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಡಿಪಿಒ ಶಿವಕುಮಾರ್, ವಾಮಾಚಾರದಂತಹ ಕೃತ್ಯಗಳನ್ನು ಮಾಡುತ್ತಿರುವುದು ಸರಿಯಲ್ಲ, ಇದು ಮೂಢನಂಬಿಕೆ. ಯಾರೂ ನಂಬಬಾರದು. ಅಲ್ಲದೇ ಪೋಷಕರು ಇವುಗಳಿಗೆ ಕಿವಿ ಕೊಡದೆ ಎಂದಿನಂತೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವಂತೆ ಮನವಿ ಮಾಡಿದರು.












Click it and Unblock the Notifications