''ಚಹಾಗೆ ಅಪಮಾನ, ಯಾರ ವಿರುದ್ಧ ಎಫ್ಐಆರ್ ಹಾಕ್ಬೇಕು ಹೇಳಿ''
ನವದೆಹಲಿ, ಫೆಬ್ರವರಿ 8: ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಅಸ್ಸಾಂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುತ್ತಾ, ಚಹಾಕ್ಕೆ ಅಪಮಾನ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆದಿದೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, ಈಗ ಚಹಾ ಯಾರ ವಿರುದ್ಧ ಎಫ್ಐಆರ್ ಹಾಕಬೇಕು, ಅನಾಮಿಕ ವ್ಯಕ್ತಿಗಳ ವಿರುದ್ಧ ನಿಂದನೆ, ಅವಮಾನ ಮಾಡಿದ್ದಕ್ಕೆ ದೂರು ನೀಡಬೇಕೆ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ರೈತರ ಪ್ರತಿಭಟನೆಗೆ ಸ್ವೀಡನ್ನಿನ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಬೆಂಬಲ ನೀಡಿದ್ದು ಪಿತೂರಿ ಎಂಬ ಟೂಲ್ ಕಿಟ್ ಪತ್ತೆ ಬಳಿಕ ಮೋದಿ ಈ ಭಾಷಣ ಮಾಡಿದ್ದು ,ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ನಡೆದಿದ್ದು, ಚಹಾ ಮಾನ ಕಳೆದು ಕುಸಿಯುವಂತೆ ಮಾಡಲು ಯತ್ನಿಸಲಾಗುತ್ತಿದೆ. ಇದಕ್ಕೆ ಅಸ್ಸಾಂನ ಕಾರ್ಮಿಕರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

''ಭಾರತೀಯ ಚಹಾದ ವರ್ಚಸ್ಸಿಗೆ ಕಳಂಕ ತರುವ ಪಿತೂರಿ ತರುವ ಕೆಲಸ ಮಾಡಲಾಗುತ್ತಿದೆ. ಭಾರತದೊಂದಿಗೆ ಚಹಾ ಗುರುತಿಸುವಿಕೆ ವಿರುದ್ಧ ಕೆಲವು ವಿದೇಶಿ ಮೂಲದ ಪಡೆಗಳು ಕಾರ್ಯನಿರ್ವಹಿಸುತ್ತಿರುವ ಅಂಶ ಇತ್ತೀಚೆಗೆ ದಾಖಲೆಗಳಿಂದ ಕಂಡುಬಂದಿದೆ. ಪಿತೂರಿಗಳು ಯಶಸ್ವಿಯಾಗುವುದಿಲ್ಲ ಮತ್ತು ಅಂಥ ದಾಳಿಕೋರರಿಂದ ಮತ್ತು ಅದಕ್ಕೆ ಬೆಂಬಲ ನೀಡುತ್ತಿರುವವರಿಂದ ಜನರು ಉತ್ತರ ನೀಡಲಿದ್ದಾರೆ. ಈ ಸಮರದಲ್ಲಿ ನಮ್ಮ ಚಹಾ ತೋಟಗಳ ಕೆಲಸಗಾರರು ವಿಜಯಿಯಾಗಲಿದ್ದಾರೆ. ಭಾರತೀಯ ಚಹಾದ ಮೇಲಿನ ಈ ದಾಳಿಗಳಿಗೆ ನಮ್ಮ ಚಹಾ ತೋಟಗಳಲ್ಲಿ ಶ್ರಮವಹಿಸಿ ದುಡಿಯುವ ಸಾಮರ್ಥ್ಯವನ್ನು ಎದುರಿಸುವ ಶಕ್ತಿ ಇಲ್ಲ'' ಎಂದು ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚಿದಂಬರಂ, ಇದು ದೆಹಲಿ ಪೊಲೀಸರು ಅನಾಮಿಕ ವ್ಯಕ್ತಿಗಳ ವಿರುದ್ಧ ಹಾಕುವ ಎಫ್ಐಆರ್ ನಂತೆ ಇದೆ. ಚಹಾ ಈಗ ಯಾರ ವಿರುದ್ಧ ದೂರು ದಾಖಲಿಸಬೇಕು ಹೇಳಿ, ವಿಶ್ವದಲ್ಲಿ ಅನಾಮಿಕ ವ್ಯಕ್ತಿಗಳು ಬಹಳಷ್ಟು ಮಂದಿ ಇದ್ದಾರೆ ಎಂದು ಕುಹಕವಾಡಿದ್ದಾರೆ.












Click it and Unblock the Notifications