ಹೊತ್ತಿ ಉರಿದ ಅಸ್ಸಾಂ, ಪೊಲೀಸರ ಗುಂಡಿಗೆ ಪ್ರತಿಭಟನಾಕಾರರು ಬಲಿ
ಗುವಾಹಟಿ, ಡಿಸೆಂಬರ್ 12: ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತದ ನಿರೀಕ್ಷೆಯಲ್ಲಿರುವ ಪೌರತ್ವ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಜೋರಾಗಿ ನಡೆಯುತ್ತಿದ್ದು ಅಸ್ಸಾಂ ಅಕ್ಷರಷಃ ಹೊತ್ತಿ ಉರಿಯುತ್ತಿದೆ.
ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾದ ನಂತರ ಅಸ್ಸಾಂ ನಲ್ಲಿ ಇಂದು ಪ್ರತಿಭಟನೆ ತೀವ್ರವಾಗಿದ್ದು, ಆರ್ಎಸ್ಎಸ್ ಕಚೇರಿಗೆ ಬೆಂಕಿ ಇಡಲಾಗಿದೆ. ಜೊತೆಗೆ ಬಿಜೆಪಿ ಶಾಸಕ ಬಿನೋದ್ ಹಜಾರಿಕಾ ಅವರ ಮನೆಗೂ ಬೆಂಕಿ ಹಚ್ಚಲಾಗಿದೆ.
ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಪ್ರತಿಭಟನೆ ಉಗ್ರರೂಪ ತಳೆದ ಕಾರಣ ಪೊಲೀಸರು ಪ್ರತಿಭಟನಾಕಾರರನ್ನು ಛದುರಿಸಲು ಗುಂಡು ಹಾರಿಸಿದ್ದು, ಪೊಲೀಸರ ಬಂದೂಕಿಗೆ ಇಬ್ಬರು ಪ್ರತಿಭಟನಾಕಾರರು ಅಸುನೀಗಿದ್ದಾರೆ.

ಬಿಜೆಪಿ ಶಾಸಕ ಬಿನೋದ್ ಹಜಾರಿಕಾ ಮತ್ತು ಬಿಜೆಪಿ ಸಂಸದ ತಪನ್ ಗೋಗೋಯ್ ಮನೆಗಳ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು ಮನೆಗಳ ಮುಂದೆ ಬೆಂಕಿ ಹಚ್ಚಿದರು. ಅಸ್ಸಾಂ ಸಿಎಂ ಅವರ ರಾಜಕೀಯ ಸಲಹೆಗಾರ ಸಂತನು ಬರಾಲಿ ಮನೆಯ ಮೇಲೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.
ಕಾಶ್ಮೀರದಲ್ಲಿನ ಸೇನಾತುಕಡಿಗಳನ್ನು ಅಸ್ಸಾಂ ಗೆ ನಿಯೋಜನೆ ಮಾಡಲಾಗಿದ್ದು, ಇನ್ನೂ ಹಲವು ತುಕಡಿಗಳನ್ನು ಈಶಾನ್ಯ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ನಿಯೋಜಿಸಿದೆ.
ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೊಲಿಸ್ ಮತ್ತು ಮಿಲಿಟರಿ ಬಲವನ್ನು ಬಳಸುತ್ತಿವೆ.
ನರೇಂದ್ರ ಮೋದಿ ಅವರು ಇಂದು ಮಾತನಾಡಿ, ಅಸ್ಸಾಂ ನ ಸಹೋದರ, ಸಹೋದರಿಯರು ಪೌರತ್ವ ಮಸೂದೆಯ ಬಗ್ಗೆ ಭಯ ಪಡಬೇಕಿಲ್ಲ ಎಂದಿದ್ದಾರೆ. ಅಲ್ಲದೆ ಕಾಂಗ್ರೆಸ್ ಪೌರತ್ವ ಮಸೂದೆ ಬಗ್ಗೆ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದಿದ್ದಾರೆ.
ಜನರು ಶಾಂತಿ ಕಾಪಾಡಬೇಕೆಂದು ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ಮನವಿ ಮಾಡಿದ್ದಾರೆ. ಪ್ರತಿಭಟನೆ ಸಂಬಂಧ ಹಲವು ವಿದ್ಯಾರ್ಥಿಗಳು, ರಾಜಕೀಯ ಮುಖಂಡರು, ಸಮುದಾಯದ ಮುಖಂಡರುಗಳನ್ನು ಬಂಧಿಸಲಾಗಿದೆ.












Click it and Unblock the Notifications