"ರಾಹುಲ್, ಪ್ರಿಯಾಂಕಾ ಗಾಂಧಿ 'ವಲಸೆ ಹಕ್ಕಿಗಳು' ಎಂಬುದು ಜನರಿಗೆ ಗೊತ್ತಾಗಿದೆ"
ಅಸ್ಸಾಂ, ಮಾರ್ಚ್ 30: ಕಾಂಗ್ರೆಸ್ನ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ "ವಲಸೆ ಹಕ್ಕಿಗಳು" ಎಂಬುದನ್ನು ಅಸ್ಸಾಂ ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥ ಜಿತೇಂದ್ರ ಸಿಂಗ್ ವ್ಯಂಗ್ಯ ಮಾಡಿದ್ದಾರೆ.
ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಚೆಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದರು. ಈ ಭೇಟಿ ಕುರಿತು ಟೀಕಿಸಿದ ಬಿಜೆಪಿ ಮುಖಂಡ, "ಅಕಾಲದಲ್ಲಿ ಚಹಾ ಎಲೆ ಕೀಳುವುದು ಕಾಂಗ್ರೆಸ್ಗೆ ಯಾವುದೇ ಸಹಾಯ ಮಾಡುವುದಿಲ್ಲ. ಅಸ್ಸಾಂ ಜನರು, ಕಾಂಗ್ರೆಸ್ನ ರಾಹುಲ್ ಹಾಗೂ ಪ್ರಿಯಾಂಕಾ ವಲಸೆ ಹಕ್ಕಿಗಳೆಂದು ಈಗ ಅರ್ಥ ಮಾಡಿಕೊಂಡಿದ್ದಾರೆ. ಮತಗಳಿಗೆಂದು ಇಲ್ಲಿ ಬಂದು ನಂತರ ಇವರು ಕಾಣೆಯಾಗಿಬಿಡುತ್ತಾರೆ. ಆದರೆ ಬಿಜೆಪಿ ನಾಯಕರು ಇಲ್ಲಿ ಉಳಿದುಕೊಳ್ಳುತ್ತಾರೆ. ಪ್ರಾಕೃತಿಕ ವಿಕೋಪ ಉಂಟಾದಾಗಲೆಲ್ಲಾ ಮೊದಲು ಬಿಜೆಪಿಯವರೇ ಇಲ್ಲಿಗೆ ಬರುವುದು" ಎಂದು ಟೀಕಿಸಿದ್ದಾರೆ.
ಬಂಗಾಳ, ಅಸ್ಸಾಂನಲ್ಲಿ ಶಾಂತಿಯುತ ಮತದಾನ, ಬಿಜೆಪಿ ಗೆಲುವಿನ ಮುನ್ಸೂಚನೆ: ಅಮಿತ್ ಶಾ
"ಪ್ರಧಾನಿ ಮೋದಿಯವರು ಕಳೆದ ಆರು ವರ್ಷಗಳಲ್ಲಿ ಅಸ್ಸಾಂಗೆ 46 ಬಾರಿ ಭೇಟಿ ನೀಡಿದ್ದಾರೆ. ಹೀಗಾಗಿ ಜನರಿಗೆ ಗೊತ್ತಿದೆ, ಯಾರನ್ನು ನಂಬಬೇಕು, ಯಾರನ್ನು ನಂಬಬಾರದೆಂದು. ನಮ್ಮ ಕಾರ್ಯಸೂಚಿ ಸ್ಪಷ್ಟವಾಗಿದೆ. ಅಸ್ಸಾಂ ಸಂಸ್ಕೃತಿಯನ್ನು ನಾವು ಉಳಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ನಿಮ್ಮ ಜೀವನದ ರೀತಿಯನ್ನು ಬದಲಾಯಿಸಿಕೊಳ್ಳಲು ಬಿಜೆಪಿ ಒತ್ತಾಯಿಸುತ್ತದೆ ಎಂದು 2016ರಲ್ಲಿ ಕಾಂಗ್ರೆಸ್ ಜನರಿಗೆ ಹೇಳಿತ್ತು. ಆದರೆ ಬಿಜೆಪಿ ಕಳೆದ ಐದು ವರ್ಷಗಳಲ್ಲಿ ಏನೆಂದು ತೋರಿಸಿದೆ" ಎಂದರು.
ಅಸ್ಸಾಂನಲ್ಲಿ ಮಾರ್ಚ್ 27ರಂದು ಮೊದಲನೇ ಹಂತದ ಚುನಾವಣೆ ಮುಗಿದಿದ್ದು, ಏಪ್ರಿಲ್ 1ಕ್ಕೆ ಎರಡನೇ ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.