ಪೆಟ್ಟು ನೀಡುತ್ತೇವೆ: ಕ್ರಿಸ್ಮಸ್ನಲ್ಲಿ ಪಾಲ್ಗೊಳ್ಳುವ ಹಿಂದೂಗಳಿಗೆ ವಿಎಚ್ಪಿ ಎಚ್ಚರಿಕೆ
ಗುವಾಹಟಿ, ಡಿಸೆಂಬರ್ 5: ಕ್ರಿಸ್ಮಸ್ ಆಚರಣೆಗಾಗಿ ಚರ್ಚ್ಗಳಿಗೆ ಭೇಟಿ ನೀಡುವ ಹಿಂದೂಗಳಿಗೆ ಏಟು ನೀಡಲಾಗುವುದು ಎಂದು ಬಲಪಂಥೀಯ ಸಂಘಟನೆ ಬಜರಂಗದಳ ಎಚ್ಚರಿಕೆ ನೀಡಿದೆ. ಅಸ್ಸಾಂನ ಕಚ್ಚಾರ್ ಜಿಲ್ಲೆಯ ಸಿಲ್ಚಾರ್ನಲ್ಲಿ ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಜೈ ಶ್ರೀರಾಮ್ ಘೋಷಣೆಗಳ ನಡುವೆ ಈ ಎಚ್ಚರಿಕೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಜರಂಗದಳದ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಿತು ನಾಥ್, ಕ್ರೈಸ್ತರು ಬಹುಸಂಖ್ಯಾತರಾಗಿರುವ ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ ರಾಮಕೃಷ್ಣ ಮಿಷನ್ನ ಭಾಗವಾದ ವಿವೇಕಾನಂದ ಕೇಂದ್ರವನ್ನು ಮುಚ್ಚಲಾಗಿದೆ. ಇದರಿಂದ ತಮಗೆ ಅಸಮಾಧಾನವಾಗಿದೆ. ಕ್ರಿಸ್ಮಸ್ ದಿನದ ಕಾರ್ಯಕ್ರಮಗಳು ಮತ್ತು ಹಬ್ಬಗಳಲ್ಲಿ ಪಾಲ್ಗೊಳ್ಳಲು ಹಿಂದೂಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ನಮಗೆ ಹಿಂದು-ಮುಸ್ಲಿಂ ಇಲ್ಲ: ಅಂತರ್ ಧರ್ಮೀಯ ಮದುವೆ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು
'ಚರ್ಚ್ಗಳಿಗೆ ತೆರಳುವ ಹಿಂದೂಗಳನ್ನು ಬಾರಿಸಲಾಗುತ್ತದೆ. ಏಕೆಂದರೆ ನಮ್ಮ ಎಲ್ಲ ಆರಾಧನಾ ಸ್ಥಳಗಳನ್ನು ಮುಚ್ಚಿಹಾಕುವ ಕ್ರೈಸ್ತರ ಕಾರ್ಯಕ್ರಮಗಳಿಗೆ ಹೋಗಿ ಮಜಾ ಮಾಡುವ ಹಿಂದೂಗಳನ್ನು ಕಂಡರೆ ನನಗೆ ಕೋಪ ಬರುತ್ತದೆ. ಈ ಕ್ರಿಸ್ಮಸ್ನಲ್ಲಿ ಯಾವ ಹಿಂದೂಗಳೂ ಚರ್ಚ್ಗೆ ಹೋಗುವುದಿಲ್ಲ. ನಾವು ಅದನ್ನು ನೋಡಿಕೊಳ್ಳುತ್ತೇವೆ' ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.
'ನಾವು ಹಾಗೆ ಮಾಡಿದರೆ (ಹಿಂದೂಗಳನ್ನು ಹೊಡೆದರೆ) ಮರುದಿನ ಪತ್ರಿಕೆಗಳಲ್ಲಿ 'ಗೂಂಡಾ ದಳ'ವು ತನ್ನ ಚಿಂತನಾ ಶಾಲೆಯನ್ನು ಧ್ವಂಸ ಮಾಡಿದೆ ಎಂದು ಹೆಡ್ಲೈನ್ನಲ್ಲಿ ಹಾಕುತ್ತದೆ. ಆದರೆ ಇದು ನಮ್ಮ ಆದ್ಯತೆಯಲ್ಲ. ಶಿಲ್ಲಾಂಗ್ನಲ್ಲಿ ದೇವಾಲಯಗಳ ದ್ವಾರಗಳಿಗೆ ಬೀಗ ಹಾಕಿರುವಾಗ ಕ್ರಿಸ್ ಮಸ್ ವೇಳೆ ಪಾಲ್ಗೊಳ್ಳಲು ಹಿಂದೂಗಳಿಗೆ ಬಿಡುವುದಿಲ್ಲ' ಎಂದಿದ್ದಾರೆ.