ಅಸ್ಸಾಂನಲ್ಲಿ ಕೊರೊನಾವೈರಸ್ ಬೆಂಕಿಗೆ ಪ್ರವಾಹದ ತುಪ್ಪ: ಬದುಕು ಧಗಧಗ
ಗುವಾಹಟಿ, ಜುಲೈ.13: ಕೊರೊನಾವೈರಸ್ ಅಟ್ಟಹಾಸದ ನಡುವೆಯೂ ಅಪ್ಪಳಿಸಿದ ಪ್ರವಾಹಕ್ಕೆ ಅಸ್ಸಾಂನ ಹಲವು ಪ್ರದೇಶಗಳು ನಲುಗಿ ಹೋಗಿವೆ. ಬರ್ಪೇಟಾ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಮಾರ್ನೂಲ್ ಗ್ರಾಮವನ್ನು ತಲುಪಿರುವ ಎನ್ ಡಿಆರ್ಎಫ್ ತಂಡವು 487 ಗ್ರಾಮಸ್ಥರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸಿದ್ದಾರೆ. 2020ರ ಸಾಲಿನಲ್ಲಿ ಒಟ್ಟು 950 ಮಾರ್ನುಲ್ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಸ್ಪಷ್ಟಪಡಿಸಿದೆ.
ಇನ್ನೊಂದು ಕಡೆಯಲ್ಲಿ ಬರ್ಪೇಟಾ ಜಿಲ್ಲೆಯಲ್ಲೂ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಜಿಲ್ಲಾಡಳಿತವು ಗ್ರಾಮಸ್ಥರಿಗೆ ಮಾಸ್ಕ್ ವಿತರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಿದ್ದು, ಗ್ರಾಮಸ್ಥರನ್ನು ಸ್ಕ್ರೀನಿಂಗ್ ಗೆ ಒಳಪಡಿಸುತ್ತಿದೆ.

ಯಾವ ಯಾವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ:
ಅಸ್ಸಾಂನ 11ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ರಕ್ಷಣಾ ಕಾರ್ಯಾಚರಣೆಗೆ ಎಂದು ರವಾನಿಸಲಾಗಿದೆ. ಜೊರ್ಹತ್, ಬೊಂಗೈಗಾನ್, ಕಾಮ್ರುಪ್ ಮೆಟ್ರೋ, ಕಾಮ್ರುಪ್ ರೂರಲ್, ಬಕ್ಸಾ, ಬರ್ಪೇಟಾ, ಕಾಚರ್, ಸಿವಸಾಗರ್, ಸೊನಿತ್ ಪುರ್, ಧೇಮಾಜಿ ಮತ್ತು ಟಿನ್ ಸುಖಿಯಾ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications