'ಮಗನನ್ನು ಕಾಪಾಡಿದ ಪ್ರದ್ಯುಮ್ನನ ತಂದೆಗೆ ಋಣಿ'
ಗುರುಗ್ರಾಮ್, ನವೆಂಬರ್ 11 : "ಬರುನ್ ಠಾಕೂರ್ (ಪ್ರದ್ಯುಮ್ನನ ತಂದೆ) ತನ್ನ ಮಗನನ್ನು ಕಳೆದುಕೊಂಡಿದ್ದಾರೆ. ಆದರೆ ಓರ್ವ ತಾಯಿಯ ಮಗನನ್ನು ಬದುಕಿಸಿದ್ದಾರೆ. ಅವರು ಆ ನಿಲುವು ತೆಗೆದುಕೊಂಡಿದ್ದಕ್ಕೆ ಅವರಿಗೆ ನಾನು ಜೀವನಪರ್ಯಂತ ಋಣಿಯಾಗಿರುತ್ತೇನೆ" ಎಂದು ಪ್ರದ್ಯುಮ್ನ ಹತ್ಯೆಗೆ ಸಂಬಂಧಿದಂತೆ ಬಂಧಿತನಾಗಿರುವ ಬಸ್ ಕಂಡಕ್ಟರ್ ಅಶೋಕ್ ತಾಯಿ ಆಡಿರುವ ಮಾತಿದು.
ಪ್ರದ್ಯುಮ್ನನ ಹತ್ಯೆಯ ಪ್ರಕರಣವನ್ನು ಪೊಲೀಸರು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅರಿವಿಗೆ ಬರುತ್ತಿದ್ದಂತೆ ಬರುನ್ ಠಾಕೂರ್ ಅವರು ಈ ತನಿಖೆಯನ್ನು ಸಿಬಿಐಗೆ ಒಪ್ಪಿಸಲೇಬೇಕೆಂದು ಹೋರಾಟ ಆರಂಭಿಸಿದ್ದರು. ಪ್ರಕರಣ ಸಿಬಿಐಗೆ ವಹಿಸಿದ ನಂತರ, ಈ ಹತ್ಯೆಯಲ್ಲಿ ಕಲಾದೇವಿಯವರ ಮಗ ಅಶೋಕ್ ಕೈವಾಡ ಇಲ್ಲ ಎಂದು ತಿಳಿದುಬಂದಿತು.

ಸೆಪ್ಟೆಂಬರ್ 8ರಂದು ರಯನ್ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ಎರಡನೇ ತರಗತಿ ಓದುತ್ತಿದ್ದ 7 ವರ್ಷದ ಪ್ರದ್ಯುಮ್ನನನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತನಿಖೆ ಮುಂದುವರಿಯುತ್ತಿದ್ದಂತೆ, ಸಿಸಿಟಿವಿಯನ್ನು ಪರಿಶೀಲಿಸಿದಾಗ, ಶಾಲೆಯ ಹಿರಿಯ ವಿದ್ಯಾರ್ಥಿಯ ಕೈವಾಡವಿದೆ ಎಂದು ಸಾಬೀತಾಗಿತ್ತು. ಆ ಕೊಲೆಯನ್ನು ತಾನೇ ಮಾಡಿರುವುದಾಗಿ ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಕೂಡ ಒಪ್ಪಿಕೊಂಡಿದ್ದಾನೆ.
ಪರೀಕ್ಷೆ ಮುಂದೂಡಲು ಪ್ರದ್ಯುಮ್ನ ಹತ್ಯೆ ನಡೆಯಿತು!
ಕೊಲೆ ನಡೆದ ದಿನವೇ ಶಾಲೆಯ ವಾಹನದ ನಿರ್ವಾಹಕ ಅಶೋಕ್ ನನ್ನು ಪೊಲೀಸರು ಬಂಧಿಸಿದ್ದರು. ಆತನ ಬಸ್ಸಿನಲ್ಲಿ ಹತ್ಯೆಗೆ ಬಳಸಿದ ಚಾಕು ಸಿಕ್ಕಿದೆ ಎಂದು ಹೇಳಿದ್ದರು. ಈ ಕೊಲೆಯಲ್ಲಿ ಅಶೋಕನ ಕೈವಾಡವಿಲ್ಲ, ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆತನ ಕುಟುಂಬದ ಸದಸ್ಯರು ಪೊಲೀಸರಿಗೆ ಮನವಿ ಮಾಡುತ್ತಲೇ ಇದ್ದರು. ಪ್ರದ್ಯುಮ್ನನ ತಂದೆ ಬರುನ್ ಕೂಡ ಇದರ ಹಿಂದೆ ನಿರ್ವಾಹಕನ ಕೈವಾಡ ಇರಲಿಕ್ಕಿಲ್ಲ ಎಂದು ವಾದಿಸಿದ್ದರು.

"ಆತ (ಅಶೋಕ್) ತನ್ನ ಕುಟುಂಬವನ್ನು ನೋಡಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದಾನೆ. ತನ್ನದ ಸ್ವಂತದ್ದಾದ ಪುಟ್ಟ ಮನೆ ಮಾಡಿಕೊಳ್ಳಬೇಕೆಂಬುದು ಆತನ ಕನಸು. ಮತ್ತು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂಬುದೂ ಆತನ ಉದ್ದೇಶ. ಮನೆಯಲ್ಲಿ ಏನು ಪರಿಸ್ಥಿತಿ ಇದೆ ಎಂಬುದನ್ನು ಆತನಿಗೆ ಇನ್ನೂ ಹೇಳಿಲ್ಲ" ಎಂದು ಕಲಾದೇವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಹೈಪ್ರೊಫೈಲ್ ಪ್ರಕರಣ ಇದೀಗ ಭಾರೀ ರೋಚಕ ತಿರುವು ಪಡೆದಿದ್ದು, ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೇ ಪ್ರದ್ಯುಮ್ನನ ಹತ್ಯೆ ಮಾಡಿರಬಹುದು ಎಂದು ಸಿಬಿಐ ಪೊಲೀಸರು ಶಂಕಿಸಿ, ಆತನನ್ನು ಬಂಧಿಸಿದ್ದಾರೆ. ಕೊಲೆ ಮಾಡಿದ ದಿನ ಆತ ಅಶ್ಲೀಲ ಮ್ಯಾಗಜೀನ್ ಕೂಡ ನೋಡಿದ್ದ ಮತ್ತು ಬರಲಿರುವ ಪರೀಕ್ಷೆಯನ್ನು ಮುಂದೂಡಿಸುವ ಉದ್ದೇಶದಿಂದ ಕೊಲೆಗೆ ಕೈಹಾಕಿದ್ದ ಎಂದು ತಿಳಿದುಬಂದಿದೆ.












Click it and Unblock the Notifications