400 ಕೋಟಿ ಮೌಲ್ಯದ ಬ್ಯಾಂಕ್ ಹಗರಣದ ಮಾಸ್ಟರ್ ಮೈಂಡ್ ಬಂಧನ
ನವದೆಹಲಿ, ನ.16: ಸುಮಾರು 400 ಕೋಟಿ ರು ಮೌಲ್ಯದ ಸಿಟಿಬ್ಯಾಂಕ್ ಹಗರಣದ ಮಾಸ್ಟರ್ ಮೈಂಡ್ ಮತ್ತೆ ಬಂಧನವಾಗಿದೆ.
ಬ್ಯಾಂಕ್ ಹಗರಣದ ಮುಖ್ಯ ರುವಾರಿ ಎನಿಸಿಕೊಂಡಿರುವ ಶಿವರಾಜ್ ಪುರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚನೆಯನ್ನು ಮುಂದುವರೆಸಿದ್ದ ಪುರಿ ನಾಪತ್ತೆಯಾಗಿದ್ದ, ಆತನ ಬಗ್ಗೆ ಕೆಲ ತಿಂಗಳುಗಳಿಂದ ಮಾಹಿತಿ ಕಲೆ ಹಾಕಿ, ಚಲನವಲನವನ್ನು ಗಮನಿಸಿ ನವೆಂಬರ್ 13ರಂದು ಡೆಹ್ರಾಡೂನ್ ನಲ್ಲಿ ಪತ್ತೆ ಹಚ್ಚಲಾಯಿತು.
ಪುರಿಯನ್ನು ಬಂಧಿಸಿ, ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿಕೊಂಡಿರುವ ಎಸಿಪಿ (ಕ್ರೈಂ) ಪ್ರೀತ್ ಪಾಲ್ ಸಾಂಗ್ವಾನ್ ಹೇಳಿದ್ದಾರೆ.

ಹಲವು ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದ ಪುರಿ ಮತ್ತೆ ತನ್ನ ಕಸುಬು ಆರಂಭಿಸಿದ್ದ, ಈಗ ಮತ್ತೊಮ್ಮೆ ಮೂರು ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
2010ರಲ್ಲಿ ಸಿಟಿಬ್ಯಾಂಕ್ ಉದ್ಯೋಗಿಯಾಗಿದ್ದ ಪುರಿ, ಗುರುಗ್ರಾಮದಲ್ಲಿದ್ದಾಗ ಬ್ಯಾಂಕ್ ದಾಖಲೆಗಳನ್ನು ಫೋರ್ಜರಿ ಮಾಡಿ ಸುಮಾರು 400 ಕೋಟಿ ರು ಗಳನ್ನು ಅಕ್ರಮವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಬ್ಯಾಂಕ್ ನೀಡಿದ್ದ ದೂರಿನ ಮೇರೆಗೆ ಬಂಧಿಸಲಾಗಿತ್ತು. ಎರಡೂವರೆ ವರ್ಷ ಬಳಿಕ ಜಾಮೀನು ಪಡೆದು ಹೊರ ಬಂದಿದ್ದ. ಆದರೆ, 2018ರಲ್ಲಿ ಕೋರ್ಟಿಗೆ ಹಾಜರಾಗಬೇಕಿತ್ತು. ಆದರೆ, ನಾಪತ್ತೆಯಾಗಿದ್ದವನು ಬಡ್ಡಿ ವ್ಯವಹಾರ ನಡೆಸಿ, ಅನೇಕರಿಗೆ ಮೋಸ ಮಾಡುತ್ತಿದ್ದ, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.












Click it and Unblock the Notifications