ರಾಜ್ಯದಲ್ಲಿ ರೈತರ ಸರ್ಕಾರ ಸ್ಥಾಪನೆ ಮಾಡಲು ಸಹಕರಿಸಿ: ಗದಗದಲ್ಲಿ ಸಿಎಂ ಇಬ್ರಾಹಿಂ ಮನವಿ
ಗದಗ, ಡಿಸೆಂಬರ್, 10: ಈ ಭಾರಿ ಪ್ರಜಾಪಭುಗಳು ಜನತಾದಳಕ್ಕೆ ಆಶೀರ್ವಾದ ಮಾಡಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ರಾಜ್ಯದಲ್ಲಿ ರೈತರು, ಜನಸಾಮಾನ್ಯರು, ಎಲ್ಲಾ ವರ್ಗದ ಜನರಿಗೂ ಪಂಚರತ್ನ ಯೋಜನೆಯ ಮೂಲಕ ಏನೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಅನ್ನುವುದನ್ನು ಮನೆಮನೆಗೆ ತಲುಪಿಸುತ್ತೇವೆ ಎಂದು ಸಿಎಂ ಇಬ್ರಾಹಿಂ ಗದಗದಲ್ಲಿ ಭರವಸೆ ನೀಡಿದರು. ಹಾಗೆಯೇ ರಾಜ್ಯದಲ್ಲಿ ರೈತರ ಸರ್ಕಾರ ಸ್ಥಾಪನೆಗೆ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಜನರ ಬಳಿ ಮನವಿ ಮಾಡಿಕೊಂಡರು.
ಜೆಡಿಎಸ್ ಗೆಲ್ಲಿಸಲು ಸಿಎಂ ಇಬ್ರಾಹಿಂ ಮನವಿ
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶುಕ್ರವಾರ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೂತನ ಜನತಾದಳ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ "ರಾಜ್ಯದಲ್ಲಿನ ರೈತರಿಗೆ ಬೀಜ, ಗೊಬ್ಬರ, ಬಿತ್ತನೆ ಕಾರ್ಯಗಳಿಗಾಗಿ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂಪಾಯಿ ಧನಸಹಾಯವನ್ನು ಕೊಡಲಾಗುವುದು. ಅಲ್ಲದೇ ಸಹಾಯಧನವನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತೇವೆ. ಹಾಗೆಯೇ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5 ಸಾವಿರ ಪಿಂಚಣಿ ನೀಡಲಾಗುವುದು. ಈಗ ಇರುವ ವಿಧವಾ ವೇತನವನ್ನು ಐದು ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು," ಎಂದು ಸಂಕಲ್ಪ ಮಾಡಿದರು.
ರಾಜ್ಯದಲ್ಲಿ ರೈತರ ಸರ್ಕಾರ ಸ್ಥಾಪನೆ ಮಾಡ್ತೇವೆ
ಅದೇ ರೀತಿ ಗ್ರಾಮೀಣ ಪ್ರದೇಶದ ಜನರಿಗೆ ಯಾವುದೇ ಮಾರಕ ರೋಗಗಳಿಗೆ ತುತ್ತಾದರೆ ಅವರ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಬರಿಸಲಿದೆ. ಆದರಿಂದ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲ ಪಡಿಸಬೇಕು. ಸ್ವತಂತ್ರ ನಿರ್ಧಾರ ಕೈಗೊಳ್ಳಲು ಇದೊಂದೆ ಪಕ್ಷದಿಂದ ಸಾಧ್ಯವಿದ್ದು, ಕರ್ನಾಟಕದಲ್ಲಿ ರೈತರ ಸರ್ಕಾರ ಸ್ಥಾಪನೆಗೆ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕುತೂಹಲ ಮೂಡಿಸಿದ ರೆಡ್ಡಿ ರಾಜಕೀಯ ನಡೆ
ಹಾಗೆಯೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಜನಾರ್ದನ ರೆಡ್ಡಿ ಮಾತ್ರ ಯಾವುದಕ್ಕೂ ಸ್ಪಷ್ಟ ಉತ್ತರ ನೀಡದೆ ಕೊಪ್ಪಳ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇತ್ತೀಚೆಗಷ್ಟೇ ತಮ್ಮ ಬೆಂಬಲಿಗರು ಮತ್ತು ಫೋಟೋ ವಿಡಿಯೋ ತಂಡದೊಂದಿದೆ ಗದಗದ ಬಸವೇಶ್ವರ ಗಾರ್ಡನ್ಗೆ ಭೇಟಿ ನೀಡಿದ್ದರು. ಗಾಲಿ ಜನಾರ್ದನ ರೆಡ್ಡಿ ಬಸವೇಶ್ವರ ಮೂರ್ತಿ ದರ್ಶನಕ್ಕೂ ಮೊದಲು ಸಾರಿಗೆ ಸಚಿವ ಶ್ರೀರಾಮುಲು ಅವರ ಮನೆಗೆ ಭೇಟಿ ನೀಡಿ ಬಂದಿದ್ದರು. ಬಳಿಕ ಬಸವೇಶ್ವರ ಗಾರ್ಡನ್ನಲ್ಲಿ ವಿಡಿಯೋ ಹಾಗೂ ಫೋಟೋಶೂಟ್ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ್ದ ಅವರು, ಬಸವೇಶ್ವರ ಮೂರ್ತಿ ನೋಡಲು ಇಲ್ಲಿಗೆ ಬಂದಿದ್ದೇನೆ. ತೋಂಟದಾರ್ಯ ಸ್ವಾಮೀಜಿಗಳ ಆಶಯದಂತೆ ಬಸವೇಶ್ವರ ಮೂರ್ತಿ ನಿರ್ಮಿಸಲಾಗಿದೆ. ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ನಾನು ಪ್ರವಾಸೋದ್ಯಮ ಸಚಿವನಾಗಿದ್ದೆ. ಆಗ ಬಸವೇಶ್ವರ ಪುತ್ತಳಿ ಸ್ಥಾಪನೆ ಒತ್ತಾಯ ಇತ್ತು. ಈ ಭಾಗದ ಜನರ ಆಶಯದಂತೆ ಪುತ್ತಳಿ ನಿರ್ಮಾಣವಾಗಿದೆ. ನುಡಿದಂತೆ ನಡೆದಿದ್ದೇವೆ. ನೆನಪಿಗಾಗಿ ಸ್ಥಳಕ್ಕೆ ಭೇಟಿ ನೀಡಿ ಫೋಟೋ ವಿಡಿಯೋ ತೆಗೆದುಕೊಂಡಿದ್ದೇನೆ. ಇಲ್ಲಿ ಬಸವಣ್ಣ ಜೀವಂತವಾಗಿ, ಸಾಕ್ಷಾತ್ ನಿಂತಂತಿದೆ ಎಂದಿದ್ದರು.












Click it and Unblock the Notifications