ಸಿದ್ದರಾಮಯ್ಯ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಬೇಕು: ಉಮೇಶ್ ಕತ್ತಿ
ಗದಗ, ಆಗಸ್ಟ್, 26: ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡುತ್ತಿದೆ ಎಂದು ಸಿದ್ದರಾಮಯ್ಯನವರು ಆರೋಪ ಮಾಡಿದ್ದರು. ಇದಕ್ಕೆ ಗದಗದಲ್ಲಿ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯಿಸಿ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ರಾಜ್ಯದ ಜನರು ಮುಖ್ಯಮಂತ್ರಿಗಳನ್ನು ಅಡ್ಡಾಡುವುದಕ್ಕೆ ಬಿಡುತ್ತಿರಲಿಲ್ಲ ಎಂದರು.
ಸಿದ್ದರಾಮಯ್ಯನವರು ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಮಾಜಿ ಮುಖ್ಯಮಂತ್ರಿಗಳಾಗಿ ನಿಮ್ಮ ಇತಿಮಿತಿಯಲ್ಲಿ ಏನೇನಿದೆ ಅನ್ನುವುದರ ಬಗ್ಗೆ ಚರ್ಚೆ ಮಾಡೋಣ. ಆದರೆ 40,50 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಆರೋಪಗಳಿದ್ದರೆ ದಾಖಲೆ ಸಲ್ಲಿಸಲಿ:
ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಕೂಡ ಬಿಜೆಪಿ ಸರ್ಕಾರ 40 % ಕಮಿಷನ್ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯಿಸಿ ಕೆಂಪಣ್ಣ ಯಾರು ಅನ್ನುವುದು ಗೊತ್ತಿಲ್ಲ. ಅವರು ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಅನ್ನುತ್ತಾರೆ. ಬಹಳ ಜನರು ಅವರ ರೀತಿ ಅಸೋಸಿಯೇಷನ್ ಅಧ್ಯಕ್ಷರು ಇದ್ದಾರೆ. ಅದರಲ್ಲಿ ಕೆಂಪಣ್ಣ ಒಬ್ಬರು ಆಗಿದ್ದಾರೆ. ಕೆಂಪಣ್ಣನನ್ನು ಸಿದ್ದರಾಮಯ್ಯ ಅವರು ಭೇಟಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಕೆಂಪಣ್ಣ ಮತ್ತು ಸಿದ್ದರಾಮಯ್ಯನವರು ದಾಖಲೆ ಕೊಡಲಿ. ಲೋಕಾಯುಕ್ತ, ಸಿಬಿಐ, ಇ.ಡಿ ಎಲ್ಲಿ ಬೇಕಾದರೂ ದಾಖಲೆಗಳನ್ನು ಸಲ್ಲಿಸಲಿ ಎಂದರು.

ಉತ್ತರ ಕರ್ನಾಟಕ್ಕೆ ಅನ್ಯಾಯ ಸುಮ್ಮನಿರಲ್ಲ:
ಉತ್ತರ ಕರ್ನಾಟಕ್ಕೆ ಅನ್ಯಾಯ ಆದರೆ ನಾನು ರಾಜೀನಾಮೆಗೂ ಸಿದ್ಧನಿದ್ದೇನೆ. ನಮಗೆ ಬೇಕಾದ ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ಶ್ರಮಿಸದಿದ್ದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಈ ಬಗ್ಗೆ ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತುವುದರ ಮೂಲಕ ಸ್ಪಂದಿಸ್ಬೇಕು ಎಂದು ಅಲ್ಲಿನ ಜನರಿಗೆ ಮನವಿ ಮಾಡಿದರು. ಅಭಿವೃದ್ಧಿ ಕಾರ್ಯಗಳು ನಿಂತರೆ ಹೋರಾಟಗಳು ಮುಂದುವರೆಯುತ್ತವೆ. ಅಭಿವೃದ್ಧಿ ಆದರೆ ಯಾವುದೇ ತೊಂದರೆಗಳು ಆಗುವುದಿಲ್ಲ ಎಂದು ಗುಡುಗಿದರು.
ಸಿಎಂ ಪಟ್ಟಕ್ಕಾಗಿ ಯಾರ ಬೆನ್ನತ್ತಿ ಹೋಗುವುದಿಲ್ಲ:
ಉತ್ತರ ಕರ್ನಾಟಕದ ಮುಖ್ಯಮಂತ್ರಿ ಅನ್ನುವುದನ್ನು ನಿಲ್ಲಿಸಿ. ನಾನು ಕರ್ನಾಟಕದ ರಾಜಕಾರಣಿ, ಹಿರಿಯ ರಾಜಕಾರಣಿ ಆಗಿದ್ದೇನೆ. ನಮ್ಮವರೇ ಮುಖ್ಯಮಂತ್ರಿ ಇದ್ದಾಗ ಆ ಸ್ಥಾನಕ್ಕೆ ಆಸೆ ಪಡುವುದಿಲ್ಲ. ಸಿಎಂ ಪಟ್ಟಕ್ಕಾಗಿ ಯಾರ ಬೆನ್ನು ಹತ್ತಿ ಹೋಗುವುದಿಲ್ಲ. ನನಗೆ ಅಖಂಡ ಕರ್ನಾಟಕದ ಸಿಎಂ ಆಗುವ ಯೋಗ್ಯತೆ ಇದೆ. ನನ್ನ ರಾಜಕೀಯ ಜೀವನ ಇನ್ನೂ 15 ವರ್ಷ ಇದೆ. ಅಷ್ಟರಲ್ಲಿ ಅವಕಾಶ ಒದಗಿ ಬಂದರೆ ನೋಡೋಣ ಎಂದರು. ಕೇಂದ್ರ ಒಪ್ಪಿದರೆ ಅನ್ನಭಾಗ್ಯ ಯೋಜನೆ ಸ್ಥಗಿತಗೊಳಿಸಲಾಗುವುದು ಎಂಬ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದ್ದರು. ಇದಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೆ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು.

ಉಮೇಶ್ ಕತ್ತಿ ವಿರುದ್ಧ ಸಿದ್ದರಾಮಯ್ಯ ಗುಡುಗು
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಅವರು, ಬಿಜೆಪಿ ನಾಯಕರು ಈ ಯೋಜನೆ ನಿಲ್ಲಿಸಲು ನೆಪಗಳನ್ನು ಹುಡುಕುತ್ತಿರುತ್ತಾರೆ. ರಾಜ್ಯದ ಆಹಾರ ಸಚಿವ ಉಮೇಶ್ ಕತ್ತಿ ಅವರಿಗೆ ಅಂತಹದ್ದೊಂದು ನೆಪ ಸುಪ್ರೀಂಕೋರ್ಟ್ನ ಆದೇಶದಲ್ಲಿ ಸಿಕ್ಕಿದ್ದಕ್ಕೆ ಸಂತೋಷಪಟ್ಟಿದ್ದಾರೆ ಎಂದು ಕಿಡಿಕಾರಿದ್ದರು. 2.65 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ನಲ್ಲಿ 2022-23ರ ಸಾಲಿನ ಅನ್ನಭಾಗ್ಯ ಯೋಜನೆಗೆ ಮೀಸಲಿಟ್ಟಿರುವ ಹಣ 2,800 ಕೋಟಿ ರೂಪಾಯಿ ಮಾತ್ರ. ಇಷ್ಟು ಹಣವನ್ನು ಉಳಿತಾಯ ಮಾಡಲು ನೆಪಗಳನ್ನು ಹುಡುಕುತ್ತಿರುವ ಸರ್ಕಾರ ಮತ್ತು ಸಚಿವರ ಮನಸ್ಸಿನಲ್ಲಿ ಬಡವರ ಬಗ್ಗೆ ಎಷ್ಟೊಂದು ದ್ವೇಷ ಇರಬಹುದು ಎಂದು ಪ್ರಶ್ನಿಸಿದ್ದರು.
ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡು, ಕಲ್ಯಾಣ ಕಾರ್ಯಕ್ರಮಗಳು ದುಡ್ಡಿಲ್ಲದೆ ನನೆಗುದಿಗೆ ಬೀಳಲು ಕಾರಣ ಈ ಸರ್ಕಾರದ ಕಮಿಷನ್ ದಾಹ. 40 ಪರ್ಸೆಂಟ್ ಕಮಿಷನ್ ಈಗ ಶೇಕಡಾ 50ಕ್ಕೆ ಏರಿಕೆ ಆಗಿದೆಯಂತೆ. ಈಗ ಉಮೇಶ್ ಕತ್ತಿಯಂತಹ ಬೇಜವಾಬ್ದಾರಿ ಸಚಿವರು ಅನ್ನಭಾಗ್ಯ ಯೋಜನೆ ನಿಲ್ಲಿಸಲು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ಬಡವರ ಹೊಟ್ಟೆಗೆ ಹೊಡೆಯುವ ನಿಮ್ಮ ದುಷ್ಟತನದ ಕತ್ತಿಯನ್ನು ಒರೆಯಲ್ಲಿಟ್ಟುಬಿಡಿ. ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೆ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಗದಗದಲ್ಲಿ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರು ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಹಾರಿಹಾಯ್ದರು.












Click it and Unblock the Notifications