Mahadayi Dispute Timeline : ಹಿನ್ನೋಟ: ಮಹದಾಯಿ ವಿವಾದದ ಸುತ್ತ ನಡೆದ ಪ್ರಮುಖ ಘಟನಾವಳಿಗಳು
ಗದಗ, ಡಿಸೆಂಬರ್ 29: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಜೋಶಿ ಧನ್ಯವಾದಗಳು ತಿಳಿಸಿದ್ದಾರೆ.
ಮಹದಾಯಿ ವಿವಾದದ ಸುತ್ತ ನಡೆದ ಪ್ರಮುಖ ಘಟನಾವಳಿಗಳು..!
* 1978ರಲ್ಲಿ ಮಹದಾಯಿ ಯೋಜನೆ ಸಿದ್ಧ ಮಾಡಲಾಗಿತ್ತು.
* 1980ರಲ್ಲಿ ಎಸ್.ಆರ್.ಬೊಮ್ಮಾಯಿ ಆಯೋಗದಿಂದ ಯೋಜನೆ ಜಾರಿಗೆ ಸಲಹೆ ನೀಡಲಾಗಿತ್ತು.
* 1988ರಲ್ಲಿ ಕರ್ನಾಟಕ ಸರ್ಕಾರದ ಅನುಮೋದನೆ ನೀಡಿದ್ದರೂ, ಗೋವಾ ಸರ್ಕಾರದ ವಿರೋಧದಿಂದ ತಡೆ ನೀಡಲಾಗಿತ್ತು.

* 1989ರಲ್ಲಿ ಸಿಎಂ ಆಗಿದ್ದ ಎಸ್.ಆರ್.ಬೊಮ್ಮಾಯಿ ಅವರಿಂದ ಗೋವಾ ಸಿಎಂ ಪ್ರತಾಪ್ಸಿಂಗ್ ರಾಣೆ ಜತೆ ಮಾತುಕತೆ ನಡೆಸಿದ ವೇಳೆ 45 ಟಿಎಂಸಿ ನೀರು ಬಳಸಲು ರಾಣೆ ಅನುಮತಿ ನೀಡಿತ್ತು.
* 2000ರ ಜುಲೈ 10ರಂದು ಕಳಸಾ-ಬಂಡೂರಿ ನಾಲೆಗಳ ಯೋಜನೆಗೆ ರಾಜ್ಯ ಅರಣ್ಯ ಇಲಾಖೆಯಿಂದ ಪರಿಸರ ಕುರಿತು ಅನುಮತಿ ನೀಡಿತ್ತು.
* 2000ರ ಆಗಸ್ಟ್ 22ರಲ್ಲಿ ಬಂಡೂರಿ ನಾಲಾ ಯೋಜನೆ ಅಂದಾಜು ವೆಚ್ಚ 49.20 ಕೋಟಿ ರೂಪಾಯಿ, ಕಳಸಾ ನಾಲಾ ಯೋಜನೆ ಅಂದಾಜು ವೆಚ್ಚ 44.78 ಕೋಟಿ ರೂ.ಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿತ್ತು.
* 2002ರಲ್ಲಿ ಕೇಂದ್ರದ ಮಂಜೂರಾತಿ ಪಡೆದ ಕರ್ನಾಟಕ ಸರ್ಕಾರ ಕಾರ್ಯಪ್ರವೃತ್ತವಾಗಿತ್ತು.
* 2002ರ ಏಪ್ರಿಲ್ 30ರಂದು ಕಳಸಾ ಬಂಡೂರಿ ಕಣಿವೆಯಿಂದ 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕರ್ನಾಟಕದ ಯೋಜನೆಗೆ ಭಾರತ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.
* 2002ರ ಮೇ 5ರಂದು ಗೋವಾ ಸರ್ಕಾರ ತಕರಾರು ತೆಗೆದಿದ್ದು, ಯೋಜನೆಗೆ ಅಡ್ಡಿಪಡಿಸಿತ್ತು.
* 2002ರ ಜುಲೈ9ರಂದು ನ್ಯಾಯಾಧಿಕರಣ ರಚಿಸಲು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಗೋವಾ ಸರ್ಕಾರದಿಂದ ಪತ್ರ ಬರೆಯಲಾಗಿತ್ತು.
* 2002ರ ಸೆಪ್ಟೆಂಬರ್ 19ರಂದು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲ ಆಯೋಗ ನೀಡಿದ್ದ ತಾತ್ವಿಕ ಒಪ್ಪಿಗೆಗೆ ಜಲ ಆಯೋಗದಿಂದಲೇ ತಡೆ ನೀಡಲಾಗಿತ್ತು.
* 2002ರ ಡಿಸೆಂಬರ್ 20ರಂದು ಮಹದಾಯಿ ನೀರಿನ ವಿವಾದ ಕುರಿತು ರ್ಚಚಿಸಲು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಗೋವಾ ಹಾಗೂ ಕರ್ನಾಟಕ ಸಭೆ ನಡೆಸಲಾಗಿತ್ತು.
* 2006ರ ಸೆಪ್ಟೆಂಬರ್ 22ರಂದು ಅಂದಿನ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ ಯೋಜನೆ ಆರಂಭಕ್ಕೆ ಬೆಳಗಾವಿ ಜಿಲ್ಲೆ ಕಣಕುಂಬಿಯಲ್ಲಿ ಭೂಮಿಪೂಜೆ ನಡೆಸಲಾಗಿತ್ತು.
* 2006ರ ನವೆಂಬರ್ 15ರಂದು ಕರ್ನಾಟಕ ಸರ್ಕಾರದ ಯೋಜನೆಗೆ ತಡೆ ನೀಡುವಂತೆ ಗೋವಾ ಸರ್ಕಾರ ಸವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು
* 2006ರ ನವೆಂಬರ್ 27ರಂದು ಕಾಮಗಾರಿಗೆ ತಡೆ ನೀಡಲು ಕೋರ್ಟ್ ನಿರಾಕರಣೆ ಮಾಡಿತ್ತು.
* 2010ಯಲ್ಲಿ ಮಹದಾಯಿ ಜಲ ವಿವಾದ ಬಗೆಹರಿಸಲು ನ್ಯಾಯಾಧಿಕರಣ ನೇಮಕ ಮಾಡಲಾಗಿತ್ತು.
* 2014ರಲ್ಲಿ ನ್ಯಾಯಾಧಿಕರಣ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
* 2015ರ ಜೂನ್ನಿಂದ ಮಹದಾಯಿ ಯೋಜನೆ ಜಾರಿಗೆ ಜನರು ಮತ್ತೆ ಹೋರಾಟ ಆರಂಭಿಸಿದ್ದರು.
* 2016ರಲ್ಲಿ ಗದಗ ನರಗುಂದ ಧಾರವಾಡದ ನವಲಗುಂದ ಸೇರಿದಂತೆ ರೈತರ ಪ್ರತಿಭಟನೆಗೆ ನೋವಿನ ವರ್ಷವಾಗಿತ್ತು.
* ಬಿಜೆಪಿಯ ಮಟ್ಟಣ್ಣನವರ್ ಅವರಿಂದ ನಾಲೆ ಒಡೆಯುವ ಬೆದರಿಕೆ, ವಿಡಿಯೋ ಕೂಡ ಬಿಡುಗಡೆಯಾಗಿತ್ತು.
* ಜುಲೈ 27ರಂದು ನ್ಯಾಯಾಧೀಕರಣದಿಂದ ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕಾರ, ಜುಲೈ 28ರಂದು ಕರ್ನಾಟಕ ಬಂದ್ ಮಾಡಲಾಗಿತ್ತು.
* ಆಗಸ್ಟ್ 08ರಂದು ಧಾರವಾಡದ ಯಮನೂರಿನಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್ಗೆ ಸಂಬಂಧಿಸಿದಂತೆ 6 ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿತ್ತು.
* ಮಹದಾಯಿಗೆ ಸಂಬಂಧಿಸಿ ನ್ಯಾಯಾಧಿಕರಣ ನೀಡಿರುವ ಮಧ್ಯಂತರ ತೀರ್ಪಿನ ಕುರಿತು ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ, ಕೇಂದ್ರಕ್ಕೆ ರಾಜ್ಯದಿಂದ ನಿಯೋಗ ಕರೆದೊಯ್ಯಲು ನಿರ್ಧಾರ.
* ಸೆಪ್ಟೆಂಬರ್ 02ರಂದು ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ನೀಡಿರುವ ಸಲಹೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದರು.
* 2017ರ ಫೆಬ್ರವರಿ 15ರಂದು ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಹೂಡಿರುವ 94 ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿತ್ತು.
* ಜುಲೈ 18ರಂದು ಮಹಾದಾಯಿ ನದಿ ವಿವಾದವನ್ನು ಪರಸ್ಪರ ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಗೋವಾ ಸರ್ಕಾರ ತಿರಸ್ಕರಿಸಿತ್ತು.
* ಡಿಸೆಂಬರ್ 20ರಂದು ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ ನೀಡಿದ್ದ ಅನುಮತಿ ಪತ್ರದ ದಾಖಲೆಯನ್ನು ವಿಚಾರಣೆ ವೇಳೆ ಹಾಜರಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
* ಡಿಸೆಂಬರ್ 21ರಂದು ಮಹದಾಯಿ ಕುರಿತಂತೆ ಸಿಹಿ ಸುದ್ದಿ ನೀಡುವುದಾಗಿ ಬಿಎಸ್ ಯಡಿಯೂರಪ್ಪರಿಂದ ಘೋಷಣೆ ಮಾಡಿದ್ದರು.

* ಡಿಸೆಂಬರ್ 22ರಂದು ಬೆಂಗಳೂರಿಗೆ ಆಗಮಿಸಿದ ರೈತರ ಸಮೂಹ, ಬಿಜೆಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿದ್ದರು.
* ಡಿಸೆಂಬರ್ 27ರಂದು ಉತ್ತರ ಕರ್ನಾಟಕ ಬಂದ್ ನಡೆಸಲಾಗಿದ್ದು, 100ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ ಸೂಚಿಸಿದ್ದರು.
* 2018ರ ಜುಲೈ 24ರಂದು ಸುಪ್ರೀಂಕೋರ್ಟ್ ಆದೇಶವನ್ನು ಮೀರಿ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ನೀರಿನ ದಿಕ್ಕನ್ನು ತಿರುಗಿಸುವ ಉದ್ದೇಶದಿಂದ 5 ಕಿಮೀ ಉದ್ದದ ಸುರಂಗವನ್ನು ಕರ್ನಾಟಕ ನಿರ್ಮಿಸಿದೆ ಎಂದು ಆರೋಪಿಸಿ, ಕರ್ನಾಟಕದ ವಿರುದ್ಧ ಗೋವಾ ಸರ್ಕಾರವು ನ್ಯಾಯಾಧೀಕರಣಕ್ಕೆ ದೂರು ನೀಡಿತ್ತು.
* ಆಗಸ್ಟ್ 14 ರಂದು ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ಅಡಿ ನೀರು ದೊರೆತಿದೆ. ಕುಡಿಯಲು 5.5 ಟಿಎಂಸಿ ಅಡಿ ನೀರು, ನೀರಾವರಿಗೆ 8 ಟಿಎಂಸಿ ಅಡಿ ನೀರು, ವಿದ್ಯುತ್ಗೆ 8.2 ಟಿಎಂಸಿ ಅಡಿ, ಕಳಸಾಯೋಜನೆಗೆ 1.12, ಬಂಡೂರಿ ನಾಲಾ ಯೋಜನೆಗೆ 2.18 ನೀರು ವಿತರಣೆ ಮಾಡಲಾಗಿದೆ. ಮಹದಾಯಿ ನೀರಿನಿಂದ 4 ಟಿಎಂಸಿ ಅಡಿ ನೀರನ್ನು ಮಲಪ್ರಭಾ ಅಣೆಕಟ್ಟೆಗೆ ಹರಿಸುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿತ್ತು.
ಇದೀಗ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮಹದಾಯಿ ಹೋರಾಟಗಾರರು ಖುಷಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೋರಾಟಗಾರ ವಿರೇಶ್ ಸೊಬರದಮಠ ಮಾತನಾಡಿದ್ದು, ಕೇಂದ್ರ ಸರಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. 2721 ದಿನಗಳಿಂದ ನಿರಂತರವಾಗಿ ಹೋರಾಟ ಮಾಡ್ತಾ ಬಂದಿದ್ದೇವೆ. ಈ ಹೋರಾಟಕ್ಕೆ ಬೆಂಬಲಿಸಿದ ಸರ್ವರಿಗೂ ಶ್ರೇಯಸ್ಸು ಸಲ್ಲುತ್ತದೆ. ಆದರೆ ತಡವಾಗಿ ಅನುಮತಿ ಸಿಕ್ಕಿದ್ದಕ್ಕೆ ನಾವು ಹಬ್ಬ ಆಚರಣೆ ಮಾಡುವಷ್ಟು ಖುಷಿ ಪಡುವಂತ ವಿಚಾರವಲ್ಲ
ಯಾಕೆಂದರೆ ಹೋರಾಟದ ಆರಂಭದಲ್ಲೇ ಅನುಮತಿ ಸಿಗಬೇಕಿತ್ತು. ಯಾಕೆಂದರೆ ನಮ್ಮ ಈ ಹೋರಾಟವನ್ನ ರಾಜಕೀಯ ಗಾಳವಾಗಿ ಬಳಸಿಕೊಂಡು ಬಂದಿದ್ದು ನಮಗೆ ನೋವು ತಂದಿದೆ. ಏನೇ ಆದರೂ ಸಹ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇಂದಿನ ಅನುಮತಿಯೇ ಉದಾಹರಣೆ ಅದರಂತೆ ಶೀಘ್ರವಾಗಿ ಆದೇಶಪ್ರತಿಯನ್ನ ನೀಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications