Mahadayi Dispute Timeline : ಹಿನ್ನೋಟ: ಮಹದಾಯಿ ವಿವಾದದ ಸುತ್ತ ನಡೆದ ಪ್ರಮುಖ ಘಟನಾವಳಿಗಳು
ಗದಗ, ಡಿಸೆಂಬರ್ 29: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಜೋಶಿ ಧನ್ಯವಾದಗಳು ತಿಳಿಸಿದ್ದಾರೆ.
ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಮಹದಾಯಿ ಕಾಮಗಾರಿ ಆರಂಭ: ಸಿಎಂ ಬೊಮ್ಮಾಯಿ
ಮಹದಾಯಿ ವಿವಾದದ ಸುತ್ತ ನಡೆದ ಪ್ರಮುಖ ಘಟನಾವಳಿಗಳು..!
* 1978ರಲ್ಲಿ ಮಹದಾಯಿ ಯೋಜನೆ ಸಿದ್ಧ ಮಾಡಲಾಗಿತ್ತು.
* 1980ರಲ್ಲಿ ಎಸ್.ಆರ್.ಬೊಮ್ಮಾಯಿ ಆಯೋಗದಿಂದ ಯೋಜನೆ ಜಾರಿಗೆ ಸಲಹೆ ನೀಡಲಾಗಿತ್ತು.
* 1988ರಲ್ಲಿ ಕರ್ನಾಟಕ ಸರ್ಕಾರದ ಅನುಮೋದನೆ ನೀಡಿದ್ದರೂ, ಗೋವಾ ಸರ್ಕಾರದ ವಿರೋಧದಿಂದ ತಡೆ ನೀಡಲಾಗಿತ್ತು.
* 1989ರಲ್ಲಿ ಸಿಎಂ ಆಗಿದ್ದ ಎಸ್.ಆರ್.ಬೊಮ್ಮಾಯಿ ಅವರಿಂದ ಗೋವಾ ಸಿಎಂ ಪ್ರತಾಪ್ಸಿಂಗ್ ರಾಣೆ ಜತೆ ಮಾತುಕತೆ ನಡೆಸಿದ ವೇಳೆ 45 ಟಿಎಂಸಿ ನೀರು ಬಳಸಲು ರಾಣೆ ಅನುಮತಿ ನೀಡಿತ್ತು.
* 2000ರ ಜುಲೈ 10ರಂದು ಕಳಸಾ-ಬಂಡೂರಿ ನಾಲೆಗಳ ಯೋಜನೆಗೆ ರಾಜ್ಯ ಅರಣ್ಯ ಇಲಾಖೆಯಿಂದ ಪರಿಸರ ಕುರಿತು ಅನುಮತಿ ನೀಡಿತ್ತು.
* 2000ರ ಆಗಸ್ಟ್ 22ರಲ್ಲಿ ಬಂಡೂರಿ ನಾಲಾ ಯೋಜನೆ ಅಂದಾಜು ವೆಚ್ಚ 49.20 ಕೋಟಿ ರೂಪಾಯಿ, ಕಳಸಾ ನಾಲಾ ಯೋಜನೆ ಅಂದಾಜು ವೆಚ್ಚ 44.78 ಕೋಟಿ ರೂ.ಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿತ್ತು.
* 2002ರಲ್ಲಿ ಕೇಂದ್ರದ ಮಂಜೂರಾತಿ ಪಡೆದ ಕರ್ನಾಟಕ ಸರ್ಕಾರ ಕಾರ್ಯಪ್ರವೃತ್ತವಾಗಿತ್ತು.
* 2002ರ ಏಪ್ರಿಲ್ 30ರಂದು ಕಳಸಾ ಬಂಡೂರಿ ಕಣಿವೆಯಿಂದ 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕರ್ನಾಟಕದ ಯೋಜನೆಗೆ ಭಾರತ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.
* 2002ರ ಮೇ 5ರಂದು ಗೋವಾ ಸರ್ಕಾರ ತಕರಾರು ತೆಗೆದಿದ್ದು, ಯೋಜನೆಗೆ ಅಡ್ಡಿಪಡಿಸಿತ್ತು.
* 2002ರ ಜುಲೈ9ರಂದು ನ್ಯಾಯಾಧಿಕರಣ ರಚಿಸಲು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಗೋವಾ ಸರ್ಕಾರದಿಂದ ಪತ್ರ ಬರೆಯಲಾಗಿತ್ತು.
* 2002ರ ಸೆಪ್ಟೆಂಬರ್ 19ರಂದು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲ ಆಯೋಗ ನೀಡಿದ್ದ ತಾತ್ವಿಕ ಒಪ್ಪಿಗೆಗೆ ಜಲ ಆಯೋಗದಿಂದಲೇ ತಡೆ ನೀಡಲಾಗಿತ್ತು.
* 2002ರ ಡಿಸೆಂಬರ್ 20ರಂದು ಮಹದಾಯಿ ನೀರಿನ ವಿವಾದ ಕುರಿತು ರ್ಚಚಿಸಲು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಗೋವಾ ಹಾಗೂ ಕರ್ನಾಟಕ ಸಭೆ ನಡೆಸಲಾಗಿತ್ತು.
* 2006ರ ಸೆಪ್ಟೆಂಬರ್ 22ರಂದು ಅಂದಿನ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ ಯೋಜನೆ ಆರಂಭಕ್ಕೆ ಬೆಳಗಾವಿ ಜಿಲ್ಲೆ ಕಣಕುಂಬಿಯಲ್ಲಿ ಭೂಮಿಪೂಜೆ ನಡೆಸಲಾಗಿತ್ತು.
* 2006ರ ನವೆಂಬರ್ 15ರಂದು ಕರ್ನಾಟಕ ಸರ್ಕಾರದ ಯೋಜನೆಗೆ ತಡೆ ನೀಡುವಂತೆ ಗೋವಾ ಸರ್ಕಾರ ಸವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು
* 2006ರ ನವೆಂಬರ್ 27ರಂದು ಕಾಮಗಾರಿಗೆ ತಡೆ ನೀಡಲು ಕೋರ್ಟ್ ನಿರಾಕರಣೆ ಮಾಡಿತ್ತು.
* 2010ಯಲ್ಲಿ ಮಹದಾಯಿ ಜಲ ವಿವಾದ ಬಗೆಹರಿಸಲು ನ್ಯಾಯಾಧಿಕರಣ ನೇಮಕ ಮಾಡಲಾಗಿತ್ತು.
* 2014ರಲ್ಲಿ ನ್ಯಾಯಾಧಿಕರಣ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
* 2015ರ ಜೂನ್ನಿಂದ ಮಹದಾಯಿ ಯೋಜನೆ ಜಾರಿಗೆ ಜನರು ಮತ್ತೆ ಹೋರಾಟ ಆರಂಭಿಸಿದ್ದರು.
* 2016ರಲ್ಲಿ ಗದಗ ನರಗುಂದ ಧಾರವಾಡದ ನವಲಗುಂದ ಸೇರಿದಂತೆ ರೈತರ ಪ್ರತಿಭಟನೆಗೆ ನೋವಿನ ವರ್ಷವಾಗಿತ್ತು.
* ಬಿಜೆಪಿಯ ಮಟ್ಟಣ್ಣನವರ್ ಅವರಿಂದ ನಾಲೆ ಒಡೆಯುವ ಬೆದರಿಕೆ, ವಿಡಿಯೋ ಕೂಡ ಬಿಡುಗಡೆಯಾಗಿತ್ತು.
* ಜುಲೈ 27ರಂದು ನ್ಯಾಯಾಧೀಕರಣದಿಂದ ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕಾರ, ಜುಲೈ 28ರಂದು ಕರ್ನಾಟಕ ಬಂದ್ ಮಾಡಲಾಗಿತ್ತು.
* ಆಗಸ್ಟ್ 08ರಂದು ಧಾರವಾಡದ ಯಮನೂರಿನಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್ಗೆ ಸಂಬಂಧಿಸಿದಂತೆ 6 ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿತ್ತು.
* ಮಹದಾಯಿಗೆ ಸಂಬಂಧಿಸಿ ನ್ಯಾಯಾಧಿಕರಣ ನೀಡಿರುವ ಮಧ್ಯಂತರ ತೀರ್ಪಿನ ಕುರಿತು ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ, ಕೇಂದ್ರಕ್ಕೆ ರಾಜ್ಯದಿಂದ ನಿಯೋಗ ಕರೆದೊಯ್ಯಲು ನಿರ್ಧಾರ.
* ಸೆಪ್ಟೆಂಬರ್ 02ರಂದು ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ನೀಡಿರುವ ಸಲಹೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದರು.
* 2017ರ ಫೆಬ್ರವರಿ 15ರಂದು ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಹೂಡಿರುವ 94 ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿತ್ತು.
* ಜುಲೈ 18ರಂದು ಮಹಾದಾಯಿ ನದಿ ವಿವಾದವನ್ನು ಪರಸ್ಪರ ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಗೋವಾ ಸರ್ಕಾರ ತಿರಸ್ಕರಿಸಿತ್ತು.
* ಡಿಸೆಂಬರ್ 20ರಂದು ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ ನೀಡಿದ್ದ ಅನುಮತಿ ಪತ್ರದ ದಾಖಲೆಯನ್ನು ವಿಚಾರಣೆ ವೇಳೆ ಹಾಜರಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
* ಡಿಸೆಂಬರ್ 21ರಂದು ಮಹದಾಯಿ ಕುರಿತಂತೆ ಸಿಹಿ ಸುದ್ದಿ ನೀಡುವುದಾಗಿ ಬಿಎಸ್ ಯಡಿಯೂರಪ್ಪರಿಂದ ಘೋಷಣೆ ಮಾಡಿದ್ದರು.
* ಡಿಸೆಂಬರ್ 22ರಂದು ಬೆಂಗಳೂರಿಗೆ ಆಗಮಿಸಿದ ರೈತರ ಸಮೂಹ, ಬಿಜೆಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿದ್ದರು.
* ಡಿಸೆಂಬರ್ 27ರಂದು ಉತ್ತರ ಕರ್ನಾಟಕ ಬಂದ್ ನಡೆಸಲಾಗಿದ್ದು, 100ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ ಸೂಚಿಸಿದ್ದರು.
* 2018ರ ಜುಲೈ 24ರಂದು ಸುಪ್ರೀಂಕೋರ್ಟ್ ಆದೇಶವನ್ನು ಮೀರಿ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ನೀರಿನ ದಿಕ್ಕನ್ನು ತಿರುಗಿಸುವ ಉದ್ದೇಶದಿಂದ 5 ಕಿಮೀ ಉದ್ದದ ಸುರಂಗವನ್ನು ಕರ್ನಾಟಕ ನಿರ್ಮಿಸಿದೆ ಎಂದು ಆರೋಪಿಸಿ, ಕರ್ನಾಟಕದ ವಿರುದ್ಧ ಗೋವಾ ಸರ್ಕಾರವು ನ್ಯಾಯಾಧೀಕರಣಕ್ಕೆ ದೂರು ನೀಡಿತ್ತು.
* ಆಗಸ್ಟ್ 14 ರಂದು ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ಅಡಿ ನೀರು ದೊರೆತಿದೆ. ಕುಡಿಯಲು 5.5 ಟಿಎಂಸಿ ಅಡಿ ನೀರು, ನೀರಾವರಿಗೆ 8 ಟಿಎಂಸಿ ಅಡಿ ನೀರು, ವಿದ್ಯುತ್ಗೆ 8.2 ಟಿಎಂಸಿ ಅಡಿ, ಕಳಸಾಯೋಜನೆಗೆ 1.12, ಬಂಡೂರಿ ನಾಲಾ ಯೋಜನೆಗೆ 2.18 ನೀರು ವಿತರಣೆ ಮಾಡಲಾಗಿದೆ. ಮಹದಾಯಿ ನೀರಿನಿಂದ 4 ಟಿಎಂಸಿ ಅಡಿ ನೀರನ್ನು ಮಲಪ್ರಭಾ ಅಣೆಕಟ್ಟೆಗೆ ಹರಿಸುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿತ್ತು.
ಇದೀಗ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮಹದಾಯಿ ಹೋರಾಟಗಾರರು ಖುಷಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೋರಾಟಗಾರ ವಿರೇಶ್ ಸೊಬರದಮಠ ಮಾತನಾಡಿದ್ದು, ಕೇಂದ್ರ ಸರಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. 2721 ದಿನಗಳಿಂದ ನಿರಂತರವಾಗಿ ಹೋರಾಟ ಮಾಡ್ತಾ ಬಂದಿದ್ದೇವೆ. ಈ ಹೋರಾಟಕ್ಕೆ ಬೆಂಬಲಿಸಿದ ಸರ್ವರಿಗೂ ಶ್ರೇಯಸ್ಸು ಸಲ್ಲುತ್ತದೆ. ಆದರೆ ತಡವಾಗಿ ಅನುಮತಿ ಸಿಕ್ಕಿದ್ದಕ್ಕೆ ನಾವು ಹಬ್ಬ ಆಚರಣೆ ಮಾಡುವಷ್ಟು ಖುಷಿ ಪಡುವಂತ ವಿಚಾರವಲ್ಲ
ಯಾಕೆಂದರೆ ಹೋರಾಟದ ಆರಂಭದಲ್ಲೇ ಅನುಮತಿ ಸಿಗಬೇಕಿತ್ತು. ಯಾಕೆಂದರೆ ನಮ್ಮ ಈ ಹೋರಾಟವನ್ನ ರಾಜಕೀಯ ಗಾಳವಾಗಿ ಬಳಸಿಕೊಂಡು ಬಂದಿದ್ದು ನಮಗೆ ನೋವು ತಂದಿದೆ. ಏನೇ ಆದರೂ ಸಹ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇಂದಿನ ಅನುಮತಿಯೇ ಉದಾಹರಣೆ ಅದರಂತೆ ಶೀಘ್ರವಾಗಿ ಆದೇಶಪ್ರತಿಯನ್ನ ನೀಡಬೇಕು ಎಂದು ಒತ್ತಾಯಿಸಿದರು.