ಗದಗ: ದೀಪಾವಳಿ ಸಂಭ್ರಮ ಕಸಿದ ಭೂಕುಸಿತ, ಮನೆಯೊಳಗೆ ಉಕ್ಕುತ್ತಿರುವ ಜಲ
ಗದಗ, ಅಕ್ಟೋಬರ್ 23: ಜಿಲ್ಲೆಯಲ್ಲಿ ಕಳೆದ ವಾರ ಸತತವಾಗಿ ಸುರಿದಿದ್ದ ಮಳೆ ಜನರನ್ನು ಕಾಡಿತ್ತು. ಹಲವು ಅನಾಹುತಗಳನ್ನುಂಟು ಮಾಡಿತ್ತು. ಇದೀಗ ಮಳೆಯಿಂದ ಹಲವು ಭಾಗದಲ್ಲಿ ಅಂತರ್ಜಲ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಭೂಮಿ ಕುಸಿಯುತ್ತಿದ್ದು, ಜನರ ನೆಮ್ಮದಿ ಕಸಿಯುತ್ತಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಬಡ ಕುಟುಂಬವೊಂದು ಮನೆಯ ಮುಂಭಾಗ ಉಂಟಾಗಿರುವ ಭೂಕುಸಿತದಿಂದ ಕಂಗಾಲಾಗಿಸಿದೆ.
ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಲ್ಲೇ ಭಾರಿ ಸದ್ದು ಕೇಳಿ ಬಂದಿದ್ದು, ನೋಡು ನೋಡುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಅದೃಷ್ಟವಶಾತ್ ಪಕ್ಕದಲ್ಲೇ ಮಲಗಿದ್ದ ತಂದೆ, ಪುಟ್ಟ ಮಗು ಕೂದಲೆಳೆಯಂತರದಲ್ಲಿ ಬಚಾವ್ ಆಗಿದ್ದಾರೆ.
ಗದಗ; ಕಾಲಕಾಲೇಶ್ವರ ಬೆಟ್ಟದಲ್ಲಿ ಸೃಷ್ಟಿಯಾದ ಜಲಧಾರೆಗಳು, ಇಲ್ಲಿದೆ ವಿವರ
ಹಾತಲಗೇರಿ ಗ್ರಾಮದ ಚಂದಪ್ಪ ಕನ್ನೇರಿ ಎಂಬ ವ್ಯಕ್ತಿಯ ಮನೆಯಲ್ಲಿ ಈ ಭೂಮಿ ಕುಸಿದಿದೆ. ಸತತ ಮಳೆಯಿಂದ ಅಂತರ್ಜಲ ಪ್ರಮಾಣ ಹೆಚ್ಚಿರುವ ಹಿನ್ನೆಲೆ ಹಾತಲಗೇರಿ ಗ್ರಾಮದಲ್ಲಿ ಸುಮಾರು 8 ಅಡಿಯಷ್ಟು ಆಳದ ಭೂಕುಸಿತವಾಗಿದೆ. ವಿಚಿತ್ರವೆಂದರೆ ಕುಸಿದ ಭೂಮಿಯಲ್ಲಿ ನೀರು ಉಕ್ಕುತ್ತಿದೆ. ಮನೆಯ ಮುಂಭಾಗದ ಬಲ ಭಾಗದಲ್ಲಿ ನೀರಿನ ಡ್ರಮ್ಗಳನ್ನು ಇಟ್ಟಿದ್ದರು, ಜೊತೆ ಹಂಡೆ, ಬಟ್ಟೆಗಳು ಇಟ್ಟಿದ್ದರು ಏಕಾಏಕಿ ಭೂಕುಸಿತದಿಂದ ಎಲ್ಲವೂ ಕುಸಿದ ಗುಂಡಿಯಲ್ಲಿ ಸಿಲುಕಿಕೊಂಡಿವೆ.
ಮನೆಯಲ್ಲಿ ಚಿಕ್ಕ ಪುಟ್ಟ ಮಕ್ಕಳಿದ್ದು, ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ, ಬದುಕಿ ಬಾಳಿದ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಆಶ್ರಯವಿಲ್ಲದೆ, ಮನೆ ಮುಂಭಾಗದಲ್ಲಿರುವ ಜಾಗದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಷ್ಟು ವರ್ಷ ಆರಾಮವಾಗಿ ಕಳೆದಿದ್ದ ಮನೆಯ ಒಳಗೆ ಹೋಗುವುದಕ್ಕೆ ಭಯವಾಗುತ್ತಿದೆ ಎಂದು ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿರುವ ಪರಸಪ್ಪ ಕನ್ನೇರ ಆಂತಕ ವ್ಯಕ್ತಪಡಿಸಿದ್ದಾರೆ.
ಭೂಕುಸಿತದಲ್ಲಿ ಪಾತ್ರೆ, ಸಾಮಗ್ರಿಗಳಿ, ಬಟ್ಟೆಗಳು ಮುಳುಗಿ ಹಾಳಾಗಿ ಹೋಗಿವೆ. ದೀಪಾವಳಿ ಸ್ವಚ್ಛತೆಗಾಗಿ ಬಟ್ಟೆಗಳೆಲ್ಲವನ್ನು ಕಟ್ಟಿ ಬ್ಯಾರಲ್ ಮೇಲೆ ಇಟ್ಟಿದ್ದೆವು. ಆದ್ರೆ, ಎಲ್ಲವೂ ಭೂಕುಸಿತದಲ್ಲಿ ಹಾಳಾಗಿವೆ ಅಂತ ಮಹಿಳೆಯರು ಗೋಳಾಡುತ್ತಿದ್ದಾರೆ. ನಾವೇ ಬದುಕಿದ್ದೇ ಪವಾಡ ಅಂತ ಕುಟುಂಬ ಕಂಗಾಲಾಗಿದೆ. ಇನ್ನೂ ಭೂಕುಸಿತ ಜಾಗದಲ್ಲಿ ಉಕ್ಕುತ್ತಿದೆ. ಭೂಕುಸಿತ ಜಾಗದಲ್ಲಿ ಮಣ್ಣು ಹಾಕಿ ಮುಚ್ಚುತ್ತಿದ್ದೇವೆ, ಆದರೂ ಮತ್ತೆ ಯಾವಾಗ ಭೂಕುಸಿತ ಸಂಭವಿಸಬಹದೋ ಎಂಬ ಆತಂಕವಿದೆ ಎಂದು ಕುಟುಂಬ ಸದಸ್ಯೆ ಮಂಜುಳಾ ತಿಳಿಸಿದ್ದಾರೆ.
ಭೂಕುಸಿತ ಸುದ್ದಿ ಇಡೀ ಗ್ರಾಮದಲ್ಲಿ ಹರಡುತ್ತಿದ್ದಂತೆ ಜನರು ಭೂಕುಸಿತ ನೋಡಲು ದೌಡಾಯಿಸಿದ್ದಾರೆ. ಈ ಘಟನೆ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಠಿ ಮಾಡಿದೆ. 2019ರಲ್ಲಿ ಇದೇ ರೀತಿ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ 20ಕ್ಕೂ ಹೆಚ್ಚು ಕಡೆ ಭೂಕುಸಿತವಾಗಿತ್ತು. ಈ ಮತ್ತೆ ಜಿಲ್ಲೆಗೆ ಭೂಕುಸಿತದ ಆತಂಕ ಎದುರಾಗಿದೆ.