Basanagouda Patil Yatnal: ಕಾಂಗ್ರೆಸ್ಗೆ ಮತ ಹಾಕಿದ್ರೆ ಪಾಕಿಸ್ತಾನಕ್ಕೆ ಮತ ನೀಡಿದಂತೆ: ಯತ್ನಾಳ್ ವಾಗ್ದಾಳಿ
ಗದಗ, ಮೇ 3: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಪ್ರಚಾರದ ಜೊತೆಗೆ ಎದುರಾಳಿಗಳ ವಿರುದ್ಧ ಆರೋಪ ಮತ್ತು ವಾಗ್ದಾಳಿ ಜೋರಾಗಿದೆ.
ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಪಕ್ಷಗಳು ಮತ್ತು ನಾಯಕರು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ. ಸಮಾವೇಶ, ರೋಡ್ ಶೋಗಳ ಮೂಲಕ ಜನರನ್ನು ತಲುಪುತ್ತಿದ್ದಾರೆ.

ಇದೇ ವೇಳೆ ಮಂಗಳವಾರ ಗದಗದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಪ್ರಚಾರ ಮಾಡಿದ ವಿಜಯಪುರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ಗೆ ಮತ ನೀಡಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ," ಎಂದು ಹರಿಹಾಯ್ದರು.
ಕಾಂಗ್ರೆಸ್ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್#AssemblyElection #BajrangDal #BasangoudaPatilYatnal #BJP #Congress #politics pic.twitter.com/pses7Km7Ao
— oneindiakannada (@OneindiaKannada) May 3, 2023
"ಇಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಇದೆ. ಪಿಎಫ್ಐ ಸಂಘಟನೆಯ ಮೂಲ ಗುರಿ 2047ಕ್ಕೆ ಭಾರತವನ್ನು ಇಸ್ಲಾಮೀಕರಣ ಮಾಡುವುದಾಗಿದೆ. ಪಿಎಫ್ಐ ಹಾಗೂ ಕಾಂಗ್ರೆಸ್ ನಡುವೆ ಆಂತರಿಕ ಒಪ್ಪಂದ ಇದೆ. ಆ ದೃಷ್ಟಿಯಿಂದ ಕಾಂಗ್ರೆಸ್ನವರು ಬಜರಂಗ ದಳ ನಿಷೇಧ ಮಾಡಲು ನಿರ್ಧರಿಸಿದ್ದಾರೆ. ಪಿಎಫ್ಐ ಅನ್ನು ಈಗಾಗಲೇ ಕೇಂದ್ರ ಸರ್ಕಾರ ನಿಷೇಧ ಮಾಡಿದೆ," ಎಂದು ಕಿಡಿಕಾರಿದರು.
"ಬಜರಂಗ ದಳ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಹಿಂದೂ ಧರ್ಮ, ಸಂಸ್ಕೃತಿ, ಭಾರತದ ನಾಗರಿಕತೆ ಉಳಿಸುವ ಕೆಲಸದಲ್ಲಿ ತೊಡಗಿದೆ. ಜಗತ್ತಿನ ಯಾವುದೇ ಶಕ್ತಿಯಿಂದಲೂ ಬಜರಂಗ ದಳ ನಿಷೇಧ ಮಾಡಲು ಸಾಧ್ಯವಿಲ್ಲ. ಡಿ.ಕೆ. ಶಿವಕುಮಾರ್ಗೆ ಧಮ್ ಇದ್ದರೆ ಮೀಸಲಾತಿ ತೆಗೆಯಲಿ, ಬಜರಂಗ ದಳ ನಿಷೇಧ ಮಾಡಲಿ," ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು.
"ಈ ಬಾರಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇವಲ ಬಜರಂಗ ದಳ ಅಷ್ಟೇ ನಿಷೇಧವಲ್ಲ, ಎಲ್ಲಾ ಹಿಂದೂ ಸಂಘಟನೆಗಳ ನಿಷೇಧ ಮಾಡುತ್ತಾರೆ. ಮುಸ್ಲಿಂ ಮತಗಳ ಓಲೈಕೆಗಾಗಿ ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಕೇವಲ ಮುಸ್ಲಿಂ ಮತಗಳು ಬೇಕಿದೆ, ಹಿಂದೂಗಳ ಮತ ಬೇಕಿಲ್ಲ," ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಮೇ 2ರಂದು ಬಿಡುಗಡೆಯಾದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪಿಎಫ್ಐ ಮತ್ತು ಬಜರಂಗ ದಳದಂತಹ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಉಲ್ಲೇಖಿಸಿದ್ದಾರೆ, ಇದಕ್ಕೆ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಗದಗ ಚುನಾವಣಾ ಕಣ
ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಅನಿಲ್ ಮೆಣಸಿನಕಾಯಿ ಸ್ಪರ್ಧೆ ಮಾಡುತ್ತಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಎಚ್.ಕೆ. ಪಾಟೀಲ್ 1800 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications