ವರುಣನ ಆರ್ಭಟ: ಗದಗದಲ್ಲಿ ಭಾರಿ ಮಳೆಗೆ ಮನೆ ನೆಲಸಮ
ಗದಗ, ಅಕ್ಟೋಬರ್ 20: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳೆದೊಂದು ವಾರದಿಂದ ರಾಜ್ಯದ ಕೆಲ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಗದಗ ಜಿಲ್ಲೆಯಲ್ಲೂ ಭಾರಿ ಮಳೆಯಾಗಿದ್ದು, ಅನಿರೀಕ್ಷಿತ ಅಧಿಕ ಮಳೆಗೆ ಗದಗದ ಜನತೆ ತತ್ತರಿಸಿದ್ದಾರೆ. ನಿರಂತರ ಮಳೆಯಿಂದಾಗಿ ನೋಡ ನೋಡುತ್ತಲೆ ಮನೆಯೊಂದು ಕುಸಿದು ಬಿದ್ದ ಘಟನೆ ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದಲ್ಲಿ ನಡೆದಿದೆ. ಅಂತೂರ ಬೆಂತೂರನ ಶಂಭುಲಿಂಗೇಶ್ವರ ಕಾಲೋನಿಯ ರಾಮಪ್ಪ ಪೂಜಾರ ಎನ್ನುವವರಿಗೆ ಸೇರಿದ ಮನೆ ನೆಲ ಸಮವಾಗಿದೆ.
ಮನೆ ಕುಸಿದು ಬೀಳುವ ವೇಳೆ ಅಡುಗೆ ಮನೆಯಲ್ಲಿದ್ದ ಚನ್ನವ್ವ ಪೂಜಾರ ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಮನೆ ಕುಸಿಯುತ್ತಿದ್ದಂತೆ ಮನೆಯೊಳಗಿದ್ದ ನಾಲ್ವರು ಹೊರಗೆ ಓಡಿಬಂದು ಅಪಾಯದಿಂದ ಬಚಾವ್ ಆಗಿದ್ದಾರೆ. ಮನೆ ಕುಸಿತ ಕಣ್ಣಾರೆ ಕಂಡ ಚನ್ನವ್ವ ಆತಂಕದಿಂದ ಕುಸಿದು ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿರಂತರ ಮಳೆಗೆ ಸಂಪೂರ್ಣ ಮನೆ ನೆಲಸಮವಾಗಿದ್ದು, ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಮಣ್ಣು ಪಾಲಾಗಿದೆ. ಮೊದಲೇ ಬಡತನದಲ್ಲಿ ಬೇಯುತ್ತಿದ್ದ ರಾಮಪ್ಪ ಪೂಜಾರ ಕುಟುಂಬಸ್ಥರು, ಆಸರೆಯಾಗಿದ್ದ ಮನೆ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮಳೆಯ ಅವಾಂತರಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರಾಮಪ್ಪ ಪೂಜಾರ ಅವರ ಕುಟುಂಬಕ್ಕೆ ಜಿಲ್ಲಾಡಳಿ ಹಾಗೂ ಸರ್ಕಾರ ನೆರವು ನೀಡಬೇಕಿದೆ. ಇನ್ನು ರಾಮಪ್ಪ ಪೂಜಾರ ಅವರ ಮನೆ ಕುಸಿತದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಳ್ಳಾರಿ ಧಾರಾಕಾರ ಮಳೆಗೆ ಮನೆ ಕುಸಿತ ವ್ಯಕ್ತಿ ಸಾವು
ಬಳ್ಳಾರಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ನಿನ್ನೆ ಅಕ್ಟೋಬರ್ 19ರಂದು ಸುರಿದ ಭಾರಿ ಮಳೆಗೆ ಅವಾಂತರ ಸೃಷ್ಟಿಸಿದೆ.
ಸಂಡೂರು ಪಟ್ಟಣದ ಒಂದನೇ ವಾರ್ಡ್ನಲ್ಲಿ ಮಳೆಯಿಂದ ಮನೆಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಮನೆಯ ಗೋಡೆ ಪಕ್ಕ ಮಲಗಿದ್ದ ಸೋಮಶೇಖರ್ ಎನ್ನುವಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೆ ಹಾಗೂ ಮನೆಯ ವ್ಯಕ್ತಿಯನ್ನು ಕಳೆದುಕೊಂಡು ಸೋಮಶೇಖರ್ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಮುಂದಿನ ನಾಲ್ಕು ದಿನಗಳ ದಿನಗಳ ಕಾಲ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಅಧಿಕ ಮಳೆಯಾಗಲ್ಲಿದ್ದು, ಇಂದು ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ತುಮಕೂರು, ಚಾಮರಾಜನ ನಗರ, ಕೊಡಗು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications