ಗೃಹಲಕ್ಷ್ಮಿ ಯೋಜನೆ ನೋಂದಣಿ: ಹಾವೇರಿ ಪ್ರಥಮ, ಗದಗ ಜಿಲ್ಲೆಗೆ 4ನೇ ಸ್ಥಾನ
ಗದಗ, ಆಗಸ್ಟ್ 30: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಇಂದು(ಆಗಸ್ಟ್ 30)ರಂದು ವಿಧ್ಯುಕ್ತ ಚಾಲನೆ ದೊರೆಯಲಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ಗುರುತಿಸಲ್ಪಡುವ ಮಹಿಳೆಯರು ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಇಂದು ರಾಜ್ಯದ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳಾಗಿದ್ದಾರೆ.
ಪಡಿತರ ಚೀಟಿಯಲ್ಲಿ ನಮೂದಿಸಿದ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡಲಾಗುತ್ತದೆ. ಮಹಿಳೆ ಅಥವಾ ಆಕೆಯ ಪತಿ ಜಿಎಸ್ಟಿ ಪಾವತಿದಾರರಾಗಿದ್ದರೆ ಅನರ್ಹರು ಎಂದು ಪರಿಗಣಿಸಲಾಗುತ್ತಿದೆ. ಈ ಎಲ್ಲಾ ಗೃಹಲಕ್ಷ್ಮಿ ಯೋಜನೆ ನಿಯಮಾನುಸಾರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಶೇ.86.76 ಫಲಾನುಭವಿಗಳು ಗೃಹಲಕ್ಷ್ಮಿಗೆ ನೋಂದಣಿ ಮಾಡಿಸಿದ್ದು, ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಚಾಮರಾಜನಗರ ಶೇ.86.37 ದ್ವಿತೀಯ, ಚಿತ್ರದುರ್ಗ ಶೇ.86.35 ತೃತೀಯ ಸ್ಥಾನದಲ್ಲಿದ್ದರೆ, ಗೃಹಲಕ್ಷ್ಮಿ, ಫಲಾನುಭವಿಗಳ ನೋಂದಣಿಯಲ್ಲಿ ರಾಜ್ಯದಲ್ಲಿ ಗದಗ ಜಿಲ್ಲೆ 4ನೇ ಸ್ಥಾನದಲ್ಲಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಸೇರಿ ಒಟ್ಟು,23,667 ಕುಟುಂಬಗಳಿವೆ. ಯೋಜನೆಯಡಿ 20,616 ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. 20,559 ಫಲಾನುಭವಿಗಳಿಗೆ ಈಗಾಗಲೇ ಮಂಜೂರಾತಿ ಆದೇಶ ಪ್ರತಿ ನೀಡಲಾಗಿದೆ. 3108 ಫಲಾನುಭವಿಗಳು ಕಾರಣಾಂತರಗಳಿಂದ ನೋಂದಣಿ ಮಾಡಿಸಿಕೊಂಡಿಲ್ಲ. ಬಾಕಿ ಉಳಿದಿರುವ ಫಲಾನುಭವಿಗಳು ರೇಷನ್ ಕಾರ್ಡ್ ತಿದ್ದುಪಡಿ, ಅಕೌಂಟ್ಗೆ ಆಧಾರ ಕಾರ್ಡ್ ಜೋಡಣೆ ಇತ್ಯಾದಿ ಕಾರ್ಯಗಳಿಗೆ ಕಚೇರಿಗೆ ಮುಗಿಬಿದ್ದಿದ್ದಾರೆ.
ಗದಗ ಜಿಲ್ಲೆಯಲ್ಲಿ ಶಿರಹಟ್ಟಿ ತಾಲೂಕು ಶೇ.88.79ರಷ್ಟು ನೋಂದಣಿಯಾಗಿ ಮೊದಲ ಸ್ಥಾನದಲ್ಲಿದೆ. ಲಕ್ಷ್ಮೇಶ್ವರ ಶೇ.87.30 ಎರಡನೇ, ಗಜೇಂದ್ರಗಡ ಶೇ. 85.97 ನಾಲ್ಕನೇ, ರೋಣ 85.62 ಐದನೇ, ಮುಂಡರಗಿ 85.52 ಆರನೇ ಹಾಗೂ ಗದಗ ಶೇ.82.34 ಕೊನೆಯ ಸ್ಥಾನದಲ್ಲಿದೆ.
ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ನರಗುಂದ ಪಟ್ಟಣ ಸೇರಿ ತಾಲೂಕಿನ 15 ಕಡೆಗಳಲ್ಲಿ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಆಶಾ ಕಾರ್ಯಕರ್ತೆ, ಸಹಾಯಕಿಯರು ಅರ್ಹರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎರಡು ದಿನಗಳ ಹಿಂದೆ ತಿಳಿಸಿದ್ದಾರೆ. ನರಗುಂದ ತಾಲೂಕಿನ 134 ಅಂಗನವಾಡಿ ಕೇಂದ್ರಗಳ ಪೈಕಿ 125 ಕಾರ್ಯಕರ್ತೆಯರು, 116 ಸಹಾಯಕಿಯರು, 64 ಆಶಾ ಕಾರ್ಯಕರ್ತೆಯರಿದ್ದಾರೆ. 'ಗೃಹಲಕ್ಷ್ಮಿ ನೋಂದಣಿಗೆ ನರಗುಂದ ತಾಲೂಕಿನ ಕೆಲವೆಡೆ ಪ್ರಾರಂಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಆದರೂ ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಾಕಿ ಇರುವ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಸ್ವೀಕರಿಸಿ ನೋಂದಣಿ ಕಾರ್ಯ ಪೂರ್ಣಗೊಳಿಸಲಾಗುವುದು' ಎಂದು ಸಿಡಿಪಿಒ ರೂಪಾ ಗಂಧದ ತಿಳಿಸಿದ್ದಾರೆ.












Click it and Unblock the Notifications