ಗದಗ: ಗರ್ಭಿಣಿ ಹಸುವಿಗೆ ಮನೆಯವರಿಂದ ಸೀಮಂತ ಕಾರ್ಯ
ಗದಗ, ಜುಲೈ 3: ಮೊದಲ ಬಾರಿ ಗರ್ಭಿಣಿಯಾದವರಿಗೆ ಭಾರತೀಯ ಸಂಪ್ರದಾಯದಲ್ಲಿ ಸೀಮಂತ ಕಾರ್ಯ ಮಾಡುವುದು ಸಾಮಾನ್ಯವಾಗಿದೆ. ಆದರೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಆಕಳಿಗೂ ಸೀಮಂತ ಕಾರ್ಯ ಮಾಡಲಾಗಿದೆ.
ಮೆಣಸಗಿ ಗ್ರಾಮದ ಶ್ರೀಕಾಂತ್ ಗೂರಮ್ಮಣ್ಣವರ್ ಎಂಬುವರ ಮನೆಯಲ್ಲಿ ಸಾಕಿದ್ದ ಗೌರಿ ಎಂಬ ಆಕಳಿಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ. ಮನೆಯ ಮಗಳಿಗೆ ತವರು ಮನೆಯವರು ಉಡುಗೊರೆಯಾಗಿ ಕರು ನೀಡಿದ್ದರು. ಸದ್ಯ 7 ವರ್ಷದ ನಂತರ ಗೌರಿ ಗರ್ಭ ಧರಿಸಿರುವುದರಿಂದ ಮನೆ ಮಂದಿಯಲ್ಲಾ ಖುಷಿಪಟ್ಟಿದ್ದಾರೆ.
ಕಾರ ಹುಣ್ಣಿಮೆ: ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ: ಫೋಟೋ ವೈರಲ್
8 ತಿಂಗಳು ಗರ್ಭಿಣಿಯಾದ ಗೌರಿಗೆ ಬಾದಾಮಿಯಿಂದ ಬೀಗರನ್ನು ಕರೆಯಿಸಿ ಸೀಮಂತದ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ಬಂದ ಸಂಬಂಧಿಕರೆಲ್ಲರೂ ಹೊಸ ಉಡುಪು ತೊಟ್ಟು, ಗರ್ಭಿಣಿಯರಿಗೆ ಮಾಡುವ ಸೀಮಂತ ಕಾರ್ಯದಂತೆ ಹಸುವಿಗೂ ರೇಷ್ಮೆ ಸೀರೆ ಉಡಿಸಿ, ಕೊಡಿಗೆ ಹಸಿರು ಬಳೆ ತೊಡಸಿ, ಕೊರಳಿಗೆ ಮಾಲೆಹಾಕಿ, ಕಾಲಿಗೆ ಕಾಲ್ಗೆಜ್ಜೆ ಹಾಕಿಸಿ, ಶೃಂಗಾರಗೊಳಿಸಿ ತಮ್ಮ ಮನೆಯ ಮಗಳಿಗೆ ಮಾಡುವಂತೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ಮಾಡಿದ್ದಾರೆ.
ಮನೆಯಲ್ಲಿ ವಿವಿದ ಸಿಹಿ ತಿನಿಸುಗಳ ಅಡುಗೆ ಮಾಡಿ, ಎಲ್ಲರಿಗೂ ಊಟ ಮಾಡಿಸಿರುವ ಗೂರಮ್ಮಣ್ಣವರ್ ಕುಟುಂಬ ಮೂಲತಃ ಕೃಷಿಕರು. ಇವರು ಮನೆಯ ಮಗಳಿಗೆ ಕೊಟ್ಟಿರುವ ಗೋ ಮಾತೆಗೆ ಗೌರಿ ಅಂತ ಹೆಸರಿಟ್ಟು ಪ್ರೀತಿ, ಅಕ್ಕರೆಯಿಂದ ಸಾಕಿದ್ದರು.
ಗೌರಿ ಎಂಬ ಹಸು 7 ವರ್ಷದ ನಂತರ ಗರ್ಭವತಿಯಾಗಿದ್ದು, ರೈತಾಪಿ ವರ್ಗಕ್ಕೆ ಒಳ್ಳೆಯದಾಗಲಿ, ಗೋ ಸಂತತಿ ಉಳಿಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾರೆ. ಅನೇಕ ಮುತ್ತೈದೆಯರು ಆರತಿ ಬೆಳಗುವುದರ ಮೂಲಕ ಉತ್ತರ ಕರ್ನಾಟಕದ ಉಡಿ ತುಂಬುವ ಸಂಪ್ರದಾಯ ನೇರವೇರಿಸಿ, ಊರು ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ.
"ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಗೋಪೂಜೆ ಮಾಡುವ ಸಂಪ್ರದಾಯವಿದೆ. ಆದರೆ ಗೋವಿಗೆ ಸೀಮಂತ ಮಾಡೋದು ಅಪರೂಪವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಗೋ ಸಂತತಿ ಅಳಿವಿನಂಚಿನಲ್ಲಿದ್ದು, ಗೋ ಸಂತತಿ ಉಳಿಸಲು, ಗೋವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಸೀಮಂತ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಜನರಲ್ಲಿ ಗೋವುಗಳ ಬಗ್ಗೆ ಭಕ್ತಿ, ಪೂಜನೀಯ ಭಾವನೆ ಬೆಳೆಯುತ್ತದೆ. ಜೊತೆಗೆ ರೈತರ ಬದುಕು ಹಸನಾಗುತ್ತದೆ,'' ಎಂಬುದು ಮೆಣಸಗಿ ಗ್ರಾಮಸ್ಥರ ಮನದಾಳದ ಮಾತಾಗಿದೆ.