ಗದಗ; ಲಕ್ಷ್ಮೇಶ್ವರದಲ್ಲಿ ಮತ್ತೆ ಮಳೆ ಅವಾಂತರ, ದಿಂಗಾಲೇಶ್ವರ ಮಠದ ಆವರಣ ಜಲಾವೃತ
ಗದಗ, ಅಕ್ಟೋಬರ್, 07: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಪರಿಣಾಮ ಬಾಲೆಹೊಸೂರು ದಿಂಗಾಲೇಶ್ವರ ಶ್ರೀಮಠದ ಆವರಣಕ್ಕೆ ಮಳೆ ನೀರು ನುಗ್ಗಿದ್ದು, ಅವಾಂತರವೇ ಉಂಟಾಗಿದೆ. ಸುರಿದ ಭಾರಿ ಮಳೆಯಿಂದ ಮಠದ ಆವರಣ ಕೆರೆಯಂತಾಗಿದೆ. ದಿಂಗಾಲೇಶ್ವರ ಶ್ರೀಮಠದ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ಗಳು, ಸೇರಿದಂತೆ ಇನ್ನಿತರ ವಾಹನಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಇನ್ನು ಲಕ್ಷ್ಮೇಶ್ವರ ತಾಲೂಕಿನ ಸುತ್ತಮುತ್ತಲಿನ ಊರುಗಳಲ್ಲೂ ಕೂಡ ಮಳೆರಾಯ ಅವಾಂತರವನ್ನು ಸೃಷ್ಟಿಸಿದ್ದಾನೆ. ರಸ್ತೆಗಳಲ್ಲಿ ಮೂರು ಫೀಟ್ನಷ್ಟು ಎತ್ತರದಲ್ಲಿ ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಚರ್ಮ ಗಂಟು ರೋಗದಿಂದ ಎತ್ತು ಸಾವು
ಗದಗ ಜಿಲ್ಲೆ ಕದರಗೇರಿ ಓಣಿಯ ಗಂಗಪ್ಪ ಎಂಬುವರ ಎತ್ತು ಚರ್ಮ ಗಂಟು ರೋಗದಿಂದ ಹಸುನೀಗಿ ಸಾವನ್ನಪ್ಪಿತ್ತು. ಇದರಿಂದ ಮನನೊಂದ ರೈತರು ಎತ್ತಿನ ಶವ ಇಟ್ಟು ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಎದುರಿಗೆ ಧಿಡೀರ ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದ ಕದರಗೇರಿ ಓಣಿಯ ಗಂಗಪ್ಪ ಯಲ್ಲಪ್ಪ ಗಡಿಬಿಡಿ ಎಂಬುವರ ಎತ್ತು ಸಾವನ್ನಪ್ಪಿತ್ತು. ಎತ್ತಿನ ಅಂತ್ಯಸಂಸ್ಕಾರ ಮಾಡಲು ಪುರಸಭೆ ಅವರಿಗೆ ಕರೆ ಮಾಡಿದಾಗ ಸ್ಪಂದನೆಯನ್ನು ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ನೂರಾರು ರೈತರು ಪುರಸಭೆ ಮುಂದೆ ಎತ್ತಿನ ಶವ ಇಟ್ಟು ಪ್ರತಿಭಟನೆ ಮಾಡಿದರು.

ಈ ವೇಳೆ ರೈತರು ಪಶು ವೈದ್ಯರು, ಜನಪ್ರತಿನಿದಿಗಳು, ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ್ದಾರೆ. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯಾದಿಕಾರಿ ಡಾ. ನೀಲಕಂಠ ಹವಳದ ಅವರನ್ನು ರೈತರು ತರಾಟೆ ತೆಗೆದುಕೊಂಡಿದ್ದಾರೆ. ನಂತರ ಪುರಸಭೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಎತ್ತಿನ ಅಂತ್ಯಕ್ರಿಯೆ ಮಾಡಲು ಜೆಸಿಬಿ ಯಂತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಅಂತ್ಯಕ್ರಿಯೆಗೆ ಜೆಸಿಬಿ ಕಳುಹಿಸಿದ ಮೇಲೆ ರೈತರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಲಕ್ಷ್ಮೇಶ್ವರದಲ್ಲಿ ಗಂಟು ರೋಗದಿಂದ ಇತ್ತೀಚೆಗೆ ಜಾನುವಾರಗಳು ಸಾವನ್ನಪ್ಪುತ್ತಲೇ ಇವೆ. ಗಂಟು ರೋಗಕ್ಕೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಇದ್ದು, ಜಾನುವಾರಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ವೈದ್ಯರನ್ನ ನೇಮಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅಲ್ಲಿನ ಸ್ಥಳೀಯರು ಒತ್ತಾಯಿಸಿದರು.












Click it and Unblock the Notifications